ಕ್ಯಾರಿ ಓವರ್ ವ್ಯವಸ್ಥೆ ಬದಲಾಯಿಸಿದ ವಿಟಿಯು
ಬೆಂಗಳೂರು, ಸೆಪ್ಟೆಂಬರ್ 08: ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕ್ಯಾರಿ ಓವರ್ ಪದ್ಧತಿಯನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿದೆ.
ಹೀಗಾಗಿ, ಸಬ್ಜೆಕ್ಟ್ ಬ್ಯಾಕ್ ಇದ್ದರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ತೆರಳಬಹುದಾಗಿದೆ. ಈ ಮುಂಚೆ ಕ್ಯಾರಿ ಓವರ್ ಪದ್ಧತಿಯನ್ನು ಚಾಯ್ಸ್ ಬೇಸ್ ಕ್ರೆಡಿಟ್ ಸಿಸ್ಟಂ (ಸಿಬಿಸಿಎಸ್) ವಿದ್ಯಾರ್ಥಿಗಳಿಗೆ ಲಭ್ಯವಿರಲಿಲ್ಲ.
ಕ್ಯಾರಿ ಓವರ್ ಪದ್ಧತಿ ರದ್ದಿಗೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಪ್ರತಿಭಟನೆ ಸಹ ನಡೆಸಿದ್ದರು. ಈ ವಿಷಯ ಉನ್ನತ ಶಿಕ್ಷಣ ಸಚಿವರಿಗೂ ಮುಟ್ಟಿತ್ತು. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ವಿಟಿಯು ಕುಲಪತಿಗೆ ಸೂಚನೆ ನೀಡಿದ್ದರು.
ವಿಟಿಯುನಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಪಾಠ!
ಕ್ಯಾರಿ ಓವರ್ ಲಭ್ಯವಿದ್ದೂ ನಾಲ್ಕಕ್ಕಿಂತ ಹೆಚ್ಚಿನ ವಿಷಯಗಳನ್ನು ಉಳಿಸಿಕೊಳ್ಳುವಂತಿಲ್ಲ. ಆದರೆ, ಕೊನೆ ವರ್ಷದ ಪರೀಕ್ಷೆ ತೆಗೆದುಕೊಳ್ಳುವಂಥ ಸಂದರ್ಭದಲ್ಲಿ ಮೊದಲ ವರ್ಷದ ಪರೀಕ್ಷೆಗಳನ್ನು ಕ್ಲಿಯರ್ ಮಾಡಿಕೊಂಡಿರಬೇಕು.
ಈ ಹೊಸ ನಿರ್ಣಯದಿಂದಾಗಿ ಅಂದಾಜು 7 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿ ಅನುತ್ತೀರ್ಣರಾಗಿರುವ ಕಾರಣ ಅವರು ಮೂರನೇ ವರ್ಷಕ್ಕೆ ಪ್ರವೇಶ ಪಡೆದುಕೊಳ್ಳಲು ಅನರ್ಹರಾಗಲಿದ್ದಾರೆ.