ರೆಡಾರ್ನಲ್ಲಿ ಮಠಾಧೀಶರು; ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಹೊಸ ತಿರುವು!
ಬೆಂಗಳೂರು, ಸೆಪ್ಟೆಂಬರ್ 12 : ಕರ್ನಾಟಕದಲ್ಲಿ ಫೋನ್ ಟ್ಯಾಪಿಂಗ್ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ವಿವಿಧ ರಾಜಕೀಯ ನಾಯಕರು, ಪೊಲೀಸ್ ಇಲಾಖೆಯಲ್ಲಿ ಫೋನ್ ಕದ್ದಾಲಿಕೆ ನಡೆದಿದೆ ಎಂಬುದು ಆರೋಪ. ಈಗ ಇದಕ್ಕೆ ಹೊಸ ಸೇರ್ಪಡೆಗೊಂಡಿದೆ.
ಒಕ್ಕಲಿಗ ಮತ್ತು ಲಿಂಗಾಯತ ಮಠಗಳೂ ಸೇರಿದಂತೆ ಕೆಲವು ಪ್ರಮುಖ ಮಠಾಧೀಶರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ರಾಜಕಾರಣಿಗಳ ಸಂಪರ್ಕದಲ್ಲಿರುವ ಪ್ರಮುಖ ಮಠಾಧೀಶರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬುದು ಆರೋಪ.
ಫೋನ್ ಕದ್ದಾಲಿಕೆ ಸಿಬಿಐ ತನಿಖೆ ಚುರುಕು
ಕರ್ನಾಟಕದಲ್ಲಿ ನಡೆದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಯಾವ-ಯಾವ ಮಠಾಧೀಶರ ಫೋನ್ ಕದ್ದಾಲಿಕೆ ಆಗಿದೆ ಎಂಬ ವರದಿಯನ್ನು ಪೊಲೀಸರು ಸಿಬಿಐಗೆ ಸಲ್ಲಿಸಿದ್ದಾರೆ. ಈ ಕುರಿತು ತನಿಖೆ ನಡೆಯಲಿದೆ.
ಫೋನ್ ಕದ್ದಾಲಿಕೆ ಪ್ರಕರಣ: ಸಿಬಿಐನಿಂದ ಎಫ್ಐಆರ್ ದಾಖಲು
ನೇರವಾಗಿ ಕದ್ದಾಲಿಸಿಲ್ಲ : ಪ್ರಭಾವಿ ಮಠಾಧೀಶರ ದೂರವಾಣಿ ಕರೆಗಳನ್ನು ನೇರವಾಗಿ ಕದ್ದಾಲಿಕೆ ಮಾಡಿಲ್ಲ. ಯಾವಾಗಲೂ ಸ್ವಾಮೀಜಿಗಳ ಜೊತೆ ಇರುವ ಕಿರಿಯ ಸ್ವಾಮೀಜಿಗಳು, ಸ್ವಾಮೀಜಿಗಳ ಆಪ್ತರ ದೂರವಾಣಿ ಸಂಖ್ಯೆಗಳ ಮೇಲೆ ನಿಗಾ ಇಡಲಾಗಿತ್ತು ಎಂಬುದು ಮಾಹಿತಿ.
ಆಗಸ್ಟ್ 2018 ರಿಂದ ನಡೆದಿರುವ ಫೋನ್ ಟ್ಯಾಪಿಂಗ್ ಬಗ್ಗೆ ಸಿಬಿಐ ತನಿಖೆ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪಗೆ ನಿಕಟವಾಗಿದ್ದ ಲಿಂಗಾಯತ ಮಠಾಧೀಶರ ಆಪ್ತರ ಫೋನ್ ಕದ್ದಾಲಿಕೆ ಮಾಡಲಾಗಿತ್ತು. ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಿಸಿಪಿ ದರ್ಜೆಯ ಅಧಿಕಾರಿಯೊಬ್ಬರು ನೀಡಿದ ಸಂಖ್ಯೆಗಳ ಕರೆ ಕದ್ದಾಲಿಕೆಯಾಗುತ್ತಿತ್ತು.
ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸೈಬರ್ ಮಾಸ್ಟರ್ ವಿಭಾಗದ ಮಾಸ್ಟರ್ ಸರ್ವರ್ ವಶಕ್ಕೆ ಪಡದುಕೊಂಡಿದ್ದಾರೆ. ಕೆಲವು ಮೊಬೈಲ್ ಸೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತರು, ಆಡಳಿತ ಪಕ್ಷದ ಶಾಸಕರೂ ಸೇರಿದಂತೆ ಹಲವರ ಫೋನ್ ಕದ್ದಾಳಿಕೆ ಮಾಡಲು ನಂಬರ್ಗಳನ್ನು ಸಂಗ್ರಹ ಮಾಡಲಾಗಿತ್ತು. ಸಿಸಿಬಿ ಎಸಿಪಿಯೊಬ್ಬರು 40 ದೂರವಾಣಿ ಸಂಖ್ಯೆಗಳಿಗೆ ಬರುವ ಕರೆ ಕದ್ದಾಲಿಕೆಗೆ ಶಿಫಾರಸು ಮಾಡಿದ್ದರು ಎಂಬ ವರದಿ ಸಿಬಿಐ ಕೈ ಸೇರಿದೆ.