ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ಆಯ್ಕೆ ಬದಲು, ಕಾಗೇರಿ ಅಂತಿಮ ಆಯ್ಕೆ
ಬೆಂಗಳೂರು, ಜುಲೈ 30: ಸ್ಪೀಕರ್ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ತಳೆದಿದ್ದ ನಿಲವು ಹಠಾತ್ತನೆ ಬದಲಾಗಿದ್ದು, ಅಚ್ಚರಿ ರೀತಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಲು ನಿರಾಕರಿಸಿದ ಕಾರಣ, ವಿವಾದಗಳಿದ್ದರೂ ಸಹ ಬೋಪಯ್ಯ ಅವರನ್ನೇ ಸ್ಪೀಕರ್ ಅನ್ನು ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆಯ್ಕೆ ಬದಲಾಗಿದೆ.
ರಮೇಶ್ ಕುಮಾರ್ ರಾಜೀನಾಮೆ: ಮುಂದಿನ ಸ್ಪೀಕರ್ ಯಾರು?
ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಬಿಜೆಪಿಯ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ಸೂಚಿಸಿದ್ದು, ನಾಳೆ ಅವರೇ ಸ್ಪೀಕರ್ ಆಗಿ ಆಯ್ಕೆ ಆಗುವುದು ಬಹುತೇಕ ಖಚಿತ.
ಇಂದು ಸಿಎಂ ಯಡಿಯೂರಪ್ಪ, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ಅವರುಗಳು ಒಟ್ಟಾಗಿ ಬಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಸೂಚಿಸಿ ವಿಧಾನಸಭೆ ಕಾರ್ಯದರ್ಶಿ ಅವರಿಗೆ ಪತ್ರ ನೀಡಿದರು.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
ಕಾಂಗ್ರೆಸ್-ಜೆಡಿಎಸ್ನಿಂದ ಯಾರೂ ಸ್ಪೀಕರ್ ಅಭ್ಯರ್ಥಿಗೆ ಸೂಚಿಸಿಲ್ಲವಾದ್ದರಿಂದ ಕಾಗೇರಿ ಅವರೇ ಸ್ಪೀಕರ್ ಆಗಲಿದ್ದು, ನಾಳೆ ಬೆಳಿಗ್ಗೆ ನಡೆಯುವ ಕಲಾಪದಲ್ಲಿ ಅಧಿಕೃತ ಘೋಷಣೆ ಆಗಲಿದೆ.
ಕಾಗೇರಿ ಅವರು ಹಿರಿಯ ಶಾಸಕರಾಗಿದ್ದು, ಈ ಹಿಂದೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸದನದ ಸುದೀರ್ಘ ಅನುಭವ ಇರುವ ಅವರು, ಕಲಾಪವನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಹೋಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.