ರಾಮಚಂದ್ರಾಪುರ ಮಠದಿಂದ ವಿಶ್ವದಲ್ಲೇ ಅಪರೂಪದ ವಿಶ್ವವಿದ್ಯಾಪೀಠ ಸ್ಥಾಪನೆ
ಬೆಂಗಳೂರು, ಅ 10: ವಿಶ್ವದಲ್ಲಿ ಎಲ್ಲೂ ಇಲ್ಲದ 'ಗೋಸ್ವರ್ಗ' ಕಾರ್ಯಾರಂಭಗೊಂಡ ನಂತರ, ಅಪರೂಪದ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಮಚಂದ್ರಾಪುರಮಠ ಮುಂದಾಗಿದೆ.
ನಗರದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ಮಠದ ಪೀಠಾಧಿಪತಿ ರಾಘವೇಶ್ವರಭಾರತೀ ಶ್ರೀಗಳು, "ನೂತನ ವಿಶ್ವವಿದ್ಯಾಪೀಠದ ಕಾರ್ಯಗಳು ನಮ್ಮ ಯೋಜನೆಯಂತೆ ನಡೆಯುತ್ತಿದೆ. ಸಮಾಜ ಬಾಂಧವರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ" ಎಂದು ನುಡಿದರು.
"ಮುಂದಿನ ವರ್ಷದ, ಏಪ್ರಿಲ್ 26ರ ಅಕ್ಷಯ ತೃತೀಯ ಪರ್ವದಿನದಂದು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಲೋಕಾರ್ಪಣೆಗೊಳ್ಳಲಿದೆ. ಆತ್ಮಲಿಂಗವಿರುವ ಏಕೈಕ ಪುಣ್ಯಕ್ಷೇತ್ರವಾದ ಗೋಕರ್ಣದಲ್ಲಿ ಈ ವಿಶ್ವವಿದ್ಯಾಪೀಠದ ಕೆಲಸ ಭರದಿಂದ ಸಾಗುತ್ತಿದೆ" ಎಂದು ಶ್ರೀಗಳು ಹೇಳಿದರು.
"ಗೋಸ್ವರ್ಗದ ಯಶಸ್ಸೇ ಈ ನೂತನ ವಿದ್ಯಾಪೀಠದ ಸ್ಥಾಪನೆ ಮುಂದಾಗಲು ನಮಗೆ ಪ್ರೇರಣೆ" ಎಂದಿರುವ ರಾಘವೇಶ್ವರ ಶ್ರೀಗಳು, "ಜಗದ್ಗುರು ಶಂಕರಾಚಾರ್ಯರ ಸ್ಮರಣೆಯೊಂದಿಗೆ ಈ ವಿಶ್ವವಿದ್ಯಾಪೀಠವನ್ನು ಅವರಿಗೇ ಸಮರ್ಪಣೆ ಮಾಡುತ್ತಿದ್ದೇವೆ" ಎಂದರು.
"ಈ ವಿಶ್ವವಿದ್ಯಾಪೀಠದಲ್ಲಿ ಶುಲ್ಕವಿರುತ್ತದೆ. ಆದರೆ, ಆರ್ಥಿಕವಾಗಿ ಹಿಂದುಳಿದವರಿಗಾಗಿ ಸ್ಕಾಲರ್ಶಿಪ್ ವ್ಯವಸ್ಥೆಯನ್ನು ಮಾಡಲಾಗುವುದು. ವಿದ್ಯಾರ್ಜನೆಗೆ ಬಂದವರಿಗೆ, ಆರ್ಥಿಕ ತೊಂದರೆ ಹಿನ್ನಡೆಯಾಗಬಾರದು ಎನ್ನುವುದು ನಮ್ಮ ಉದ್ದೇಶ" ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.
"ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಯಾವುದನ್ನು ವಿದ್ಯೆಯೆಂದು ಪರಿಗಣಿಸಲಾಗಿತ್ತೋ, ಅವೆಲ್ಲವನ್ನೂ ನೂತನ ವಿದ್ಯಾಪೀಠದಲ್ಲಿ ಪಠ್ಯಕ್ರಮವಾಗಿ ಅಳವಡಿಸಲಾಗುವುದು. ಇದರಲ್ಲಿ ಸಮರ ವಿದ್ಯೆಯೂ ಒಂದು" ಎಂದು ಶ್ರೀಗಳು ಹೇಳಿದರು.
"ನಾಲ್ಕು ವೇದಗಳು, ಉಪವೇದಗಳು, ಆರು ವೇದಾಂಗಗಳು, ರಾಮಾಯಣ, ಮಹಾಭಾರತ, ಭಾಗವತ, ಇತಿಹಾಸ ಪುರಾಣಗಳು ಸೇರಿದಂತೆ 64 ವಿದ್ಯೆಗಳನ್ನು ಈ ವಿಶ್ವವಿದ್ಯಾಪೀಠದಲ್ಲಿ ಕಲಿಸಿಕೊಡಲಾಗುವುದು" ಎಂದು ಶ್ರೀಗಳು ನುಡಿದರು.
"ತಕ್ಷಶಿಲಾ ವಿಶ್ವವಿದ್ಯಾಲಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯತಾಣವಾಗಿದ್ದ ವಿದ್ಯಾಕೇಂದ್ರ. ಚಾಣಕ್ಯ ಮತ್ತು ಚಂದ್ರಗುಪ್ತರು ತಕ್ಷಶಿಲೆಯನ್ನು ಪ್ರವರ್ಧಮಾನಕ್ಕೆ ತಂದರು. ವಿಷ್ಣುಗುಪ್ತ ಚಾಣಕ್ಯನ ಶ್ರಮವನ್ನು ಗುರುತಿಸಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಎಂದು ನಾಮಕರಣ ಮಾಡಲು ನಿರ್ಧರಿಸಿದೆವು" ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು, ಮಾಧ್ಯಮ ಸಂವಾದದಲ್ಲಿ ನುಡಿದರು.