ನಾಗಮಂಡಲ ಮಾಡಲು ಸುಬ್ರಮಣ್ಯ ದೇವರು ಬಂದು ಹೇಳಿದ್ನಾ: ವಿನಯ್ ಗುರೂಜಿ ವಿವಾದದ ಹೇಳಿಕೆ
Recommended Video
ಕರಾವಳಿಯ ಜನತೆ ಬಹುವಾಗಿ ನಂಬುವ ಭೂತಾರಾಧನೆ, ನಾಗಮಂಡಲ ಮತ್ತು ನಾಗಾರಾಧನೆಯ ಬಗ್ಗೆ ಗೌರಿಗದ್ದೆ ಆಶ್ರಮದ ಶ್ರೀ ವಿನಯ್ ಗುರೂಜಿ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಂದೆ ದಿವಂಗತ ಯು ಆರ್ ಅನಂತಮೂರ್ತಿ ಕೂಡಾ ಈ ರೀತಿ ಜನತೆಯ ಭಾವನೆಯನ್ನು ಕೆಣಕುವ ಮಾತನ್ನಾಡಿದ್ದರು.
ಮಾಜಿ ಪ್ರಧಾನಿ, ಹಿರಿಯ ಜೀವ ಎಚ್ ಡಿ ದೇವೇಗೌಡ ಮತ್ತು ಸ್ಪೀಕರ್ ರಮೇಶ್ ಕುಮಾರ್ ಮುಂತಾದ ರಾಜಕಾರಣಿಗಳಿಂದ ಪಾದಪೂಜೆ ಮಾಡಿಸಿಕೊಂಡಿರುವ ವಿನಯ್ ಗುರೂಜಿ, ನಾಗಮಂಡಲಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಅದರ ಬದಲು ರಸ್ತೆಯನ್ನು ನಿರ್ಮಿಸಬಹುದಲ್ಲವೇ ಎನ್ನುವ ಹೇಳಿಕೆನ್ನು ನೀಡಿದ್ದಾರೆ.
ಗೌರಿಗದ್ದೆಯ ವಿನಯ್ ಗುರೂಜಿ ಭೇಟಿ ಮಾಡಿದ ಕುಮಾರಸ್ವಾಮಿ
ಕಳೆದ ವರ್ಷ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸುವ ಕೆಲವೇ ಕೆಲವು ಗಂಟೆಯ ಮುನ್ನ ತಮ್ಮ ಮನೆಗೆ ಕರೆಸಿಕೊಂಡಿದ್ದ ದೇವೇಗೌಡರು ದಂಪತಿ ಸಮೇತ ಗುರೂಜಿಗೆ ಪಾದಪೂಜೆ ಸಲ್ಲಿಸಿದ್ದರು. ರಾಜ್ಯದ ಹಲವು ರಾಜಕಾರಣಿಗಳು ಬಹುವಾಗಿ ನಂಬುವ ಜ್ಯೋತಿಷಿಗಳ ಪೈಕಿ ವಿನಯ್ ಗುರೂಜಿ ಇತ್ತೀಚಿನ ದಿನಗಳಲ್ಲಿ ಮಂಚೂಣಿಯಲ್ಲಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವಿನಯ್ ಗುರೂಜಿ, ಒಂದುವರೆ ಎರಡು ಕೋಟಿ ರೂಪಾಯಿ ಖರ್ಚು ಮಾಡಿ ನಾಗಮಂಡಲ ಮಾಡುವ ಬದಲು ಜನರಿಗೆ ರಸ್ತೆ ಮಾಡಬಾರದಾ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಗುರೂಜಿ ಅವರ ಹೇಳಿಕೆಗೆ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅವರ ಭಾಷಣದ ಪ್ರಮುಖಾಂಶ ಇಂತಿದೆ:
ನಾಗಪಾತ್ರಿಗಳಿಗೆ ಅಡಿಕೆ ಬೆಳೆಯಲು ಎಷ್ಟು ಕಷ್ಟವಿದೆ ಎನ್ನುವ ಅರಿವಿದೆಯೇ?
ಅಡಕೆಯ ಹಿಂಗಾರವನ್ನು (ಪಿಂಗಾರ) ಮೈಮೇಲೆ ಹೊಡೆದುಕೊಳ್ಳುವ, ಮುಖಕ್ಕೆ ಉಜ್ಜಿಕೊಳ್ಳುವ ನಾಗಪಾತ್ರಿಗಳಿಗೆ ಅದನ್ನು ಬೆಳೆಯಲು ಎಷ್ಟು ಕಷ್ಟವಿದೆ ಎನ್ನುವ ಅರಿವಿದೆಯೇ? ನಾಗಮಂಡಲ ನೋಡಲು ದೊಡ್ಡ ಗುಂಪು ಸೇರುತ್ತದೆ, ನಾಗಪಾತ್ರಿಗಳ ಮೈಮೇಲೆ ಒಂದಷ್ಟು ಬಂಗಾರ. ಯಾವ ಸುಬ್ರಮಣ್ಯ ದೇವರು ಬಂದು ಇದನ್ನು ಮಾಡಲು ಹೇಳಿದ್ದ ಎನ್ನುವ ಹೇಳಿಕೆಯನ್ನು ವಿನಯ್ ಗುರೂಜಿ ನೀಡಿದ್ದಾರೆ.
ನಾಗಾರಾಧನೆ ಮಾಡಿದರೆ ಸರಿ ಇರುವುದಿಲ್ಲ. ಇದನ್ನು ವಾರ್ನಿಂಗ್ ಅಂದುಕೊಳ್ಳಿ.
ಸುಬ್ರಮಣ್ಯ ಬಂದಿದ್ದು ಅರುಣಾಚಲ ಪ್ರದೇಶದ, ರಮಣ ಮಹರ್ಷಿ ಆಶ್ರಮಕ್ಕೆ ಲಂಗೋಟಿ ಹಾಕಿಕೊಂಡು. ಅವರ ಹೆಸರನ್ನು ಹೇಳಿ, ಈ ರೀತಿ (ನಾಗಾರಾಧನೆ) ಮಾಡಿದರೆ ಸರಿ ಇರುವುದಿಲ್ಲ. ಇದನ್ನು ವಾರ್ನಿಂಗ್ ಅಂದುಕೊಳ್ಳಿ. ಮನುಷ್ಯ ಮಾತನಾಡುವುದಕ್ಕೂ, ನಾನು ಮಾತನಾಡುವುದಕ್ಕೂ ಬೇರೆ ಕಥೆಯಿದೆ. ಇನ್ನು ಭೂತಾರಾಧನೆಯ ಬಗ್ಗೆಯೂ ವಿನಯ್ ಗುರೂಜಿ ಮಾತನಾಡಿದ್ದಾರೆ.
ಪಂಜುರ್ಲಿ ದೈವಕ್ಕೆ ಬ್ರಾಹ್ಮಣರ ಮನೆಗೆ ಹೋದಾಗ ಇಡ್ಲಿ, ಶೆಟ್ರ ಮನೆಗೆ ಹೋದರೆ ಕೋಳಿ
ಭೂತಾರಾಧನೆಯ ಬಗ್ಗೆ ವ್ಯಂಗ್ಯವಾಡಿರುವ ಗುರೂಜಿ, ಪಂಜುರ್ಲಿ ದೈವಕ್ಕೆ ಬ್ರಾಹ್ಮಣರ ಮನೆಗೆ ಹೋದಾಗ ಇಡ್ಲಿ, ಶೆಟ್ರ ಮನೆಗೆ ಹೋದರೆ ಕೋಳಿ. ಅದು ಹೇಗೆ ಪಂಜುರ್ಲಿ ಚೇಂಜ್ ಆಗುತ್ತಾನೆ. ದೇವರು ನಮ್ಮಲ್ಲಿ ಇರುವುದು ಶ್ರದ್ದೆ ತರುವುದಕ್ಕೆ, ಅಂಧ ವಿಶ್ವಾಸಕ್ಕಲ್ಲ. ಆಚರಣೆಗೆ ನನ್ನ ನಮಸ್ಕಾರ, ಯಕ್ಷಗಾನ, ಆರಾಧನೆಗಳು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ, ಆದರೆ ಅದು ವ್ಯಾಪಾರ ಆಗಬಾರದು - ವಿನಯ್ ಗುರೂಜಿ.
ಸೃಷ್ಟಿ ಇರುವುದು ಎಷ್ಟು ಸತ್ಯವೋ ಸೃಷ್ಟಿಕರ್ತ ಇರುವುದು ಅಷ್ಟೇ ಸತ್ಯ
ಯಾರ ಕಣ್ಣನ್ನೂ ಮುಚ್ಚಿಸಬಹುದು, ಆದರೆ ಭಗವಂತನ ಕಣ್ಣು ಮುಚ್ಚಿಸಲು ಸಾಧ್ಯವೇ? ಸೃಷ್ಟಿ ಇರುವುದು ಎಷ್ಟು ಸತ್ಯವೋ ಸೃಷ್ಟಿಕರ್ತ ಇರುವುದು ಅಷ್ಟೇ ಸತ್ಯ. ಮಕ್ಕಳಿಗೆ ಆಸ್ತಿಯನ್ನು ಮಾಡಬೇಡಿ, ವಿದ್ಯೆಯನ್ನು ಕೊಡಿ. ನನಗೆ ಇಲ್ಲಿಗೆ ಬಂದು ಮಾತನಾಡಲು ದೇವಿ ಹಿಂಗಾರ ಪ್ರಸಾದ ನೀಡುವ ಮೂಲಕ ಅನುಮತಿಯನ್ನು ನೀಡಿದ್ದಾಳೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.
ನಾಗಾರಾಧನೆಯ ಬಗ್ಗೆ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದು ಪ್ರಕಾಶ್ ಅಮ್ಮಣ್ಣಾಯ
ವಿನಯ್ ಗುರೂಜಿ ನೀಡಿರುವ ಹೇಳಿಕೆಯಲ್ಲಿ ಸತ್ಯ ಇರಲಿಕ್ಕೂ ಸಾಕು, ಆದರೆ ಜಗತ್ತು ನಿಂತಿರುವುದು ನಂಬಿಕೆಯ ಆಧಾರದ ಮೇಲೆ. ಯಾವುದೇ ರೂಪದಲ್ಲಿ ಇನ್ನೊಬ್ಬರಿಗೆ ನೋವಾಗದಂತೆ ವರ್ತಿಸಬೇಕು. ವಿನಯ್ ಗುರೂಜಿಯವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭೂತಾರಾಧಾನೆ, ನಾಗಾರಾಧನೆಯ ಬಗ್ಗೆ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಚಿತ್ರದಲ್ಲಿ ವಿನಯ್ ಗುರೂಜಿ)