ವಿಜಯಪುರಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ದಂಧೆ ಪತ್ತೆ: 12 ಜನರ ಬಂಧನ
ವಿಜಯಪುರ, ಅಕ್ಟೋಬರ್ 16: ಭೀಮ ತೀರದ ಹಂತಕರು ಹುಟ್ಟಿಕೊಂಡ ನಂತರ ವಿಜಯಪುರ ಜಿಲ್ಲೆಯಲ್ಲಿ ನಾಡ ಪಿಸ್ತೂಲ್ (ಕಂಟ್ರಿ) ಮಾರಾಟ ದಂಧೆ ಎಗ್ಗಿಲ್ಲದೇ ಸಾಗಿದೆ.
ಇದಕ್ಕೆ ಪೂರಕವೆಂಬಂತೆ ಸೋಮವಾರ ಪೊಲೀಸರು ನಡೆಸಿದ ಮಿಂಚಿನ ಕಾರ್ಯಚರಣೆಯಲ್ಲಿ ಕಂಟ್ರಿ ಪಿಸ್ತೂಲ್ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗೌರಿ ಲಂಕೇಶ ಹತ್ಯೆ ನಂತರ ವಿಜಯಪುರದಲ್ಲಿ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದ್ದು, ಕಾರ್ಯಚರಣೆಯಲ್ಲಿ ಈ ದಂಧೆ ಪತ್ತೆಯಾಗಿದೆ.
ಭರ್ಜರಿ ಕಾರ್ಯಾಚರಣೆ ನಡೆಸಿ ಕಂಟ್ರಿ ಪಿಸ್ತುಲ್ ಮಾರಾಟ ಮಾಡುತ್ತಿದ್ದ 12 ಜನರನ್ನು ಬಂಧಿಸಿದ್ದು. ಬಂಧಿತರಿಂದ ಸುಮಾರು 20 ಕಂಟ್ರಿ ಪಿಸ್ತೂಲ್, 49 ಜೀವಂತ ಗುಂಡುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲ್ತಾಫ್ ವಾಲಿಕಾರ್ (26), ಕೈಲಾಶ ದೇಖುನ್ (26), ಗೌಡಪ್ಪ ಕೊಕಟನೂರ್ (25), ಸೋಮಣ್ಣ ಅಗಸರ್ (30), ಗುರುಬಸಪ್ಪ ದೊಡ್ಡಗಾಣಿಗೇರ (45), ಗಣಪತಿ ವೀರಶಟ್ಟಿ, ಗೌಸ್ ಸುತಾರ್, ಹೈದರ್ ಜಾಲಗೇರಿ, ಗೈಬುಸಾಬ್, ಚಾಂದಪೀರ್, ಹುಸೇನ್ ಪಟೇಲ್, ಸಮೀರ ಯರಗಲ್ ಬಂಧಿತ ಆರೋಪಿಗಳು.
ಕಂಟ್ರಿ ಪಿಸ್ತೂಲ್ ಮಾಫೀಯಾದ ಕಿಂಗ್ ಇಜಾಜ್ ಪಟೇಲ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಿಜಯಪುರದ ವಿವಿಧ ಠಾಣೆಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಸಧ್ಯ ದರ್ಗಾ ಸೆಂಟ್ರಲ್ ಜೈಲ್ ನಲ್ಲಿರುವ ಇಜಾಜ್ ಪಟೇಲ್ ನಿಂದ ಈ ಸಂಪೂರ್ಣ ಮಾಹಿತಿ ಪಡೆಯಲಾಗಿದ್ದು, ವಿಜಯಪುರದ ಗುಂಡಾಗಳಿಗೆ ಮಧ್ಯಪ್ರದೇಶದಿಂದ ಪಿಸ್ತೂಲ್ಗಳು ಸಪ್ಲೈ ಆಗುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಪಿಸ್ಥೂಲ್ ಸರಬರಾಜು ಆಗುತ್ತಿರುವ ಮಧ್ಯ ಪ್ರದೇಶದ ಧಾರ ಜಿಲ್ಲೆಗೂ ತೆರಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದ್ದ ಪೊಲೀಸರಿಗೆ ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಅಭಿನಂದನೆ ಸಲ್ಲಿಸಿದ್ದಾರೆ.