ಬೆಂಗಳೂರಿಗೆ ಬಂದಿಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಬೆಂಗಳೂರು, ಅಕ್ಟೋಬರ್ 24: ಬುಧವಾರ ನಡೆಯಲಿರುವ ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದರು.
ಗ್ಯಾಲರಿ:ವಿಧಾನಸೌಧ ವಜ್ರಮಹೋತ್ಸವಕ್ಕೆ ಭರ್ಜರಿ ತಯಾರಿ
ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3.30 ಸುಮಾರಿಗೆ ಬಂದಿಳಿದ ರಾಮನಾಥ ಕೋವಿಂದ್ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾ ಸ್ವಾಗತಿಸಿದರು.
|
ಮೈಸೂರು ಪೇಟ ತೊಡಿಸಿ ಸ್ವಾಗತ
ರಾಷ್ಟ್ರಪತಿಯಾಗಿ ಕರ್ನಾಟಕಕ್ಕೆ ಮೊದಲ ಭೇಟಿ ನೀಡುತ್ತಿರುವ ರಾಮನಾಥ್ ಕೋವಿಂದ್ ರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.
ಕೆಂಪೇಗೌಡರ ಭಾವಚಿತ್ರಗೆ ಪುಷ್ಪಾರ್ಚನೆ
ನಂತರ ರಾಮನಾಥ ಕೋವಿಂದ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂಭಾಗದ ಎನ್.ಆರ್ ಸ್ಕ್ವೇರ್ ನಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮುಂಭಾಗ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
|
ಐಐಎಸ್ ಗೆ ಭೇಟಿ
ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ)ಯ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಿದರು.
ನಾಳೆ ವಜ್ರಮಹೋತ್ಸವ ಕಾರ್ಯಕ್ರಮ
ಇಂದು ರಾತ್ರಿ 8 ಗಂಟೆಗೆ ಕೋವಿಂದ್ ರಾಜಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವ ವಿಶೇಷ ಔತಣ ಕೂಟದಲ್ಲಿ ಕೋವಿಂದ್ ಪಾಲ್ಗೊಳ್ಳಲಿದ್ದಾರೆ. ರಾತ್ರಿ ರಾಜಭವನದಲ್ಲಿ ರಾಷ್ಟ್ರಪತಿಗಳು ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಅಂದರೆ ಅಕ್ಟೋಬರ್ 25ರಂದು ವಿಧಾನಸೌಧ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ.