ಉಪರಾಷ್ಟ್ರಪತಿಗಳಿಂದ ಜೂ. 28ರಂದು ಕಿದ್ವಾಯಿ ಸಂಕೀರ್ಣ ಲೋಕಾರ್ಪಣೆ
ಬೆಂಗಳೂರು, ಜೂನ್ 26: ಪ್ರತಿಷ್ಠಿತ ಕಿದ್ವಾಯ್ ಕ್ಯಾನ್ಸರ್ ಸಂಸ್ಥೆಯ ಸಂಕೀರ್ಣವನ್ನು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಜೂನ್ 28 ರ ಗುರುವಾರದಂದು ಲೋಕಾರ್ಪಣೆ ಮಾಡಲಿದ್ದರೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಎಸ್. ಮರೀಗೌಡ ತಿಳಿಸಿದರು.
ಅವರು ಇಂದು ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. "ಕೇಂದ್ರ ಸರ್ಕಾರವು ಕ್ಯಾನ್ಸರ್, ಮಧುಮೇಹ, ಹೃದ್ರೋಗ, ಸ್ಟ್ರೋಕ್ ನಿವಾರಣಾ ಕಾರ್ಯಕ್ರಮದಡಿ ಮೀಸಲಿಟ್ಟ ಹಣದಲ್ಲಿ ಕಿದ್ವಾಯ್ ಸಂಸ್ಥೆಗೆ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ 90 ಕೋಟಿ ರೂ. ಅನುದಾನ ನೀಡಿದೆ. ರಾಜ್ಯ ಸರ್ಕಾರ 30 ಕೋಟಿ ರೂ. ಅನುದಾನ ಕಲ್ಪಿಸಿದೆ. ಈ ಮೊತ್ತದಲ್ಲಿ ಈ ನೂತನ ಸಂಕೀರ್ಣ ನಿರ್ಮಿಸಲಾಗಿದೆ," ಎಂದವರು ಹೇಳಿದರು.
ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕಣ್ಣಿನ ಕ್ಯಾನ್ಸರ್: ಆತಂಕ
ಈ ಕೇಂದ್ರ ಸ್ಥಾಪಿಸಲು 2015ರಲ್ಲಿ ಅಂದಿನ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕೇಂದ್ರವು 20 ರಾಜ್ಯಗಳ ಕ್ಯಾನ್ಸರ್ ಕೇಂದ್ರ ಸ್ಥಾಪನೆ ಹಾಗೂ 50 ಟೆರಿಟೆರಿ ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ 20 ರಾಜ್ಯಗಳಿಗೆ ನೆರವು ನೀಡಿತ್ತು. ಕಿದ್ವಾಯಿ ಸಂಸ್ಥೆ ಈ ನಿಧಿಯಲ್ಲಿ ಸಂಸ್ಥೆಯ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು, ರೇಡಿಯೋ ಥೆರಪಿ ಸೌಲಭ್ಯ ಹಾಗೂ ರೋಬೋಟಿಕ್ ಸರ್ಜರಿಗಾಗಿ ಯಂತ್ರೋಪಕರಣಗಳನ್ನು ಖರೀದಿಸಲು ವ್ಯಯಿಸಲಿದೆ. 3 ಕೋಟಿ ರೂ. ಗಳಲ್ಲಿ ಬೋನ್ ಮ್ಯಾರೋ ಕಸಿ ಚಿಕಿತ್ಸೆ ಘಟಕ ಸಹ ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಷ್ಟ್ರದಲ್ಲಿ ಪ್ರಥಮವಾಗಿ ಉದ್ಘಾಟನೆಗೊಳ್ಳುತ್ತಿರುವ ಕೇಂದ್ರ ನಮ್ಮದು ಎಂದವರು ಮಾಹಿತಿ ನೀಡಿದರು.
ಕಿದ್ವಾಯ್ ಸಂಸ್ಥೆ ಕ್ಯಾನ್ಸರ್ ರೋಗಿ ಚಿಕಿತ್ಸೆಯಲ್ಲಿ ಮಂಚೂಣಿಯಲ್ಲಿದ್ದು, ರೋಗಿಗಳಿಗೆ ಗುಣಾತ್ಮಕ ಚಿಕಿತ್ಸೆ ನೀಡುತ್ತಿದೆ. ಪ್ರತಿವರ್ಷ 18,000 ಹೊಸ ರೋಗಿಗಳು ಚಿಕಿತ್ಸೆಗಾಗಿ ಬಂದರೆ, ಸುಮಾರು 2.5 ಲಕ್ಷ ರೋಗಿಗಳು ಚಿಕಿತ್ಸೆ ನಂತರ ಆರೈಕೆಗಾಗಿ ಬರುತ್ತಾರೆ. ಸಂಸ್ಥೆ 625 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಹೊಂದಿಕೊಂಡಿರುವ ಧರ್ಮಶಾಲೆಯಲ್ಲಿ ಸುಮಾರು 250 ಒಳರೋಗಿಗಳಿದ್ದು ರೋಗಿಗಳಿಗೆ ಹಾಗೂ ಇವರನ್ನು ನೋಡಿಕೊಳ್ಳುವವರಿಗೆ ಉಚಿತ ಊಟ, ವಸತಿ, ಕಲ್ಪಿಸಲಾಗಿದೆ. ಹೊರರಾಜ್ಯದಿಂದ ಸಹ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರೇಡಿಯೇಷನ್ ವಿಭಾಗದ ಹಿರಿಯ ವೈದ್ಯರಾದ ಡಾ. ವಿ. ಲೋಕೇಶ್ ಹಾಗೂ ಡಾ. ರವಿಕುಮಾರ್ ಉಪಸ್ಥಿತರಿದ್ದರು.