ವೆಂಕಯ್ಯ ನಾಯ್ಡು ಬದಲು ನಿರ್ಮಲಾ: ಕನ್ನಡಿಗರ ಹೋರಾಟ ವ್ಯರ್ಥ?
ವಿದೇಶಿ ಮೂಲದ ಸೋನಿಯಾ ಗಾಂಧಿ ಸ್ಪರ್ಧಿಸಿದಾಗ ಪ್ರಶ್ನಿಸದವರು ನನ್ನ ಸ್ಪರ್ಧೆಗೆ ಯಾಕೆ ತಕರಾರು ಎತ್ತುತ್ತಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕರ್ನಾಟಕದ ಬದಲಿಗೆ ರಾಜಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ.
ಹಾಗಂತ, ಇದನ್ನು 'ವೆಂಕಯ್ಯ ಸಾಕಯ್ಯ' ಎನ್ನುವ ಕನ್ನಡಪರ ಹೋರಾಟಗಾರರ ಪ್ರತಿಭಟನೆಯ ಫಲ ಎನ್ನಬಹುದೇ? ಒಂದು ವೇಳೆ ಬಿಜೆಪಿ, ಕನ್ನಡ ಮೂಲದವರನ್ನು ವೆಂಕಯ್ಯ ನಾಯ್ಡು ಬದಲಿಗೆ ನಿಲ್ಲಿಸಿದ್ದರೆ ಹೌದು ಇದು ಪ್ರತಿಭಟನೆಯ ಫಲ ಎನ್ನಬಹುದಿತ್ತೇನೋ? (ರಾಜ್ಯಸಭೆಗೆ ವೆಂಕಯ್ಯ ಬದಲಿಗೆ ನಿರ್ಮಲಾ)
ಕನ್ನಡಪರ ಸಂಘಟನೆಗಳ ಹೋರಾಟದ ಮೂಲ ಉದ್ದೇಶವೇನು? ಕನ್ನಡಿಗರು ರಾಜ್ಯಸಭೆಗೆ ಆಯ್ಕೆಯಾಗಬೇಕು ಎನ್ನುವುದಾದರೆ, ನಿರ್ಮಲಾ ಸೀತಾರಾಮನ್ ಆಯ್ಕೆ ಹಿನ್ನಡೆಯೆಂದೇ ವ್ಯಾಖ್ಯಾನಿಸಬಹುದು.
ಕನ್ನಡದವರೇ ರಾಜ್ಯಸಭೆಗೆ ಕರ್ನಾಟಕದಿಂದ ಪ್ರತಿನಿಧಿಸಬೇಕು ಎನ್ನುವುದು ಹೋರಾಟದ ಒಟ್ಟಾರೆ ಉದ್ದೇಶಯಾಗಿದ್ದಲ್ಲಿ, ತಮಿಳುನಾಡಿನಲ್ಲಿ ಹುಟ್ಟಿ, ಆಂಧ್ರದಲ್ಲಿ ಬೆಳೆದ ನಿರ್ಮಲಾ ಸೀತಾರಾಮನ್ ಆಯ್ಕೆಯ ಬಗ್ಗೆ ಹೋರಾಟ ಇನ್ನೂ ತೀವ್ರ ಸ್ಪರೂಪಗೊಳ್ಲಬೇಕಲ್ಲವೇ? (VenkayyaSakayya ಎಂದ ರೊಚ್ಚಿಗೆದ್ದ ಕನ್ನಡಿಗರು)
ವೆಂಕಯ್ಯ ನಾಯ್ಡು ಆಯ್ಕೆಯ ವಿರುದ್ದ ಅಭಿಯಾನ ತೀವ್ರಗೊಂಡ ಈ ಸಂದರ್ಭದಲ್ಲೂ, ಬೆಂಗಳೂರಿನಲ್ಲಿ ನಡೆದ (ಮೇ 27) ವಿಕಾಸಪರ್ವದ ಸಾರ್ವಜನಿಕ ಸಭೆಯಲ್ಲಿ ವೆಂಕಯ್ಯ ನಾಯ್ಡು ತೆಲುಗಿನಲ್ಲಿ ಭಾಷಣ ಮಾಡಿದ್ದು 'ಉದ್ದಟತನ' ಎನ್ನುವ ಮಾತು ಒಪ್ಪಿಕೊಳ್ಳುವ ವಿಚಾರವಾದರೂ, ಹೋರಾಟದ ಉದ್ದೇಶಕ್ಕೆ ರಾಜಕೀಯ ಮಿಶ್ರಣ ಇರಬಾರದು ಎನ್ನುವುದು ಬಹುಜನರ ಅನಿಸಿಕೆ. ಮುಂದೆ ಓದಿ..
ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಬಿಜೆಪಿ ರಾಷ್ಟ್ರೀಯ ಘಟಕ
ಸಾಮಾಜಿಕ ತಾಣದಲ್ಲಿ ಅತ್ಯಂತ ಚುರುಕಾಗಿರುವ ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಬಿಜೆಪಿ ರಾಷ್ಟ್ರೀಯ ಘಟಕ, ಒಂದು ವೇಳೆ ವೆಂಕಯ್ಯ ನಾಯ್ಡು ವಿರುದ್ದ ನಡೆಯುತ್ತಿರುವ ಅಭಿಯಾನಕ್ಕೆ ಸ್ಪಂದಿಸಿ, ನಿರ್ಮಲಾ ಸೀತರಾಮನ್ ಅವರನ್ನು ಆಯ್ಕೆ ಮಾಡಿದ್ದೇ ಆಗಿದ್ದಲ್ಲಿ ಇದೊಂದು ಕಣ್ಣೊರೆಸುವ ತಂತ್ರವಲ್ಲವೇ? ಇದಲ್ಲದೇ, ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದ ಸೊಸೆ ಎಂದು ಬಿಜೆಪಿಯವರು ಬಿಂಬಿಸಲಾರಂಭಿಸಿದ್ದಾರೆ.
ವೆಂಕಯ್ಯ ನಾಯ್ಡು ಮತ್ತು ನಿರ್ಮಲಾ ಸೀತರಾಮನ್
ನರೇಂದ್ರ ಮೋದಿ ಸರಕಾರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸಚಿವರಲ್ಲಿ ವೆಂಕಯ್ಯ ನಾಯ್ಡು ಮತ್ತು ನಿರ್ಮಲಾ ಸೀತರಾಮನ್ ಕೂಡಾ ಪ್ರಮುಖರು. ಹಾಗಾಗಿ, ಈ ಇಬ್ಬರೂ ಸಚಿವರು ಯಾವುದೇ ತೊಂದರೆಯಿಲ್ಲದೇ ಆಯ್ಕೆಯಾಗುವುದು ಬಿಜೆಪಿಗೆ ಅತಿ ಮುಖ್ಯ. ರಾಜಸ್ಥಾನದ ಸಿಎಂ ತೀವ್ರ ಒತ್ತಡ ತಂದು ವೆಂಕಯ್ಯ ನಾಯ್ಡು ಅವರನ್ನು ರಾಜಸ್ಥಾನದಿಂದ ಸ್ಪರ್ಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಮಧುರೈನಲ್ಲಿ ಹುಟ್ಟಿದ ನಿರ್ಮಲಾ
ತಮಿಳುನಾಡಿನ ಮಧುರೈನಲ್ಲಿ ಹುಟ್ಟಿದ ನಿರ್ಮಲಾ ಸೀತಾರಾಮನ್ ಪದವೀಧರರಾಗಿದ್ದು ತಿರುಚಿನಾಪಳ್ಳಿಯಲ್ಲಿ. ದೆಹಲಿಯ JNUನಲ್ಲಿ ಎಂಎ ವ್ಯಾಸಂಗ ಮುಗಿಸಿದ ನಿರ್ಮಲಾ ನಂತರ ಪಿಎಚ್ದಿ ಮುಗಿಸಿದರು. ಬಿಬಿಸಿ ಸಂಸ್ಥೆಯಲ್ಲಿ ಕೂಡಾ ನಿರ್ಮಲಾ ಕೆಲಸ ಮಾಡಿದ್ದರು.
ಗಂಡನ ತಾಯಿ ಕಾಂಗ್ರೆಸ್ ಶಾಸಕಿ
ನೆಹರೂ ವಿವಿಯಲ್ಲಿ ತನ್ನ ಸಹಪಾಠಿಯಾಗಿದ್ದ, ಆಂಧ್ರದ ನರಸಾಪುರದ ಪರಕಾಲ ಪ್ರಭಾಕರ್ ಅವರನ್ನು ನಿರ್ಮಲಾ ಮದುವೆಯಾದರು. ಗಮನಿಸಬೇಕಾದ ವಿಚಾರವೆಂದರೆ, ಗಂಡನ ತಾಯಿ ಕಾಂಗ್ರೆಸ್ ಶಾಸಕಿ ಮತ್ತು ತಂದೆ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದವರು.
ಸುಷ್ಮಾ ಸ್ವರಾಜ್
ತನ್ನ ವ್ಯಾಸಂಗದ ವೇಳೆ ಬಿಜೆಪಿ/ಆರ್ ಎಸ್ ಎಸ್ ಸಿದ್ದಾಂತಕ್ಕೆ ಮಾರುಹೋಗಿದ್ದ ನಿರ್ಮಲಾ, ಹೈದರಾಬಾದಿನ ಅತ್ಯಂತ ಪ್ರಸಿದ್ದ 'ಪ್ರಣವ' ಶಾಲೆಯ ಸಂಸ್ಥಾಪಕಿ ಕೂಡಾ. ಮಹಿಳಾ ಆಯೋಗದ ಸದಸ್ಯೆಯಾಗಿದ್ದ ನಿರ್ಮಲಾ ಅವರ ವೃತ್ತಿಪರತೆಯನ್ನು ಗುರುತಿಸಿ ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನ ಕೊಡಿಸಿದವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್.
ಕನ್ನಡಿಗರು ಪ್ರಶ್ನಿಸಿಕೊಳ್ಳಬೇಕಾಗಿರುವುದು
ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಸಿಗಬೇಕಾದ ಮರ್ಯಾದೆ ಸಿಗುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು? ಕನ್ನಡಿಗರಲ್ಲಿರುವ ಭಾಷಾಭಿಮಾನ, ಸ್ವಾಭಿಮಾನದ ಕೊರತೆಯೇ? ಕನ್ನಡಪರ ಸಂಘಟನೆಗಳ ಹೋರಾಟ ಕಾಟಾಚಾರವಾಗುತ್ತಿದೆಯೇ? ಕನ್ನಡ ಹೋರಟದಲ್ಲೂ ರಾಜಕೀಯ ತಾಂಡವಾಡುತ್ತಿದೆಯೇ ? ಇದನ್ನು ಮೊದಲು ಕನ್ನಡಿಗರು ಪ್ರಶ್ನಿಸಿಕೊಳ್ಳಬೇಕಾಗಿದೆ...