ತಮಿಳುನಾಡು ಪೊಲೀಸರ ಕೈಗೆ ಸಿಕ್ಕಿಬಿದ್ದ ಮರಿ ವೀರಪ್ಪನ್
ಬುಧವಾರ ಮುಂಜಾನೆ ವೇಳೆಗೆ ತಮಿಳುನಾಡಿನ ಪೆನ್ನಾಗರಂ ತಾಲೂಕಿನ ಗೋವಿಂದಪಾಡಿಯಲ್ಲಿ ಸರವಣನ್ನನ್ನು ಮೆಟ್ಟೂರು ಠಾಣಾ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವಂತೆ ಕರ್ನಾಟಕ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಏ.20ರಂದು ರಾಜ್ಯ ಹುಲಿ ರಕ್ಷಣಾ ಪಡೆಯ ಸಿಬ್ಬಂದಿ ಮೇಲೆ ಸರವಣನ್ ಗುಂಡಿನ ದಾಳಿ ನಡೆಸಿದ್ದ, ಅಂದಿನಿಂದಲೂ ಅವನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದರು.
ಕಳೆದ ಐದು ವರ್ಷಗಳಿಂದ ಮರಿ ವೀರಪ್ಪನ್ ಎಂದು ಹೆಸರು ಪಡೆದಿದ್ದ ಸರವಣನ್, ಆನೆ ಮತ್ತು ಕಾಡುಮೃಗಗಳ ಬೇಟೆಯಲ್ಲಿ ನಿರತನಾಗಿದ್ದ. 5 ಆನೆಗಳನ್ನು ಕೊಂದಿರುವ ಆರೋಪ ಮತ್ತು ಹತ್ತಾರು ಪ್ರಾಣಿಗಳನ್ನು ಕೊಂದು ಚರ್ಮ ಮಾರಾಟ ಮಾಡಿರುವ ಆರೋಪಗಳು ಇವನ ಮೇಲಿವೆ. ಕಾಡುಗಳ್ಳ ವೀರಪ್ಪನ್ ಅಡಗಿದ್ದ ಮಹದೇಶ್ವರ ಬೆಟ್ಟ ಮತ್ತು ಸತ್ಯಮಂಗಲ ಅರಣ್ಯದಲ್ಲಿಯೂ ಸರವಣನ್ ತನ್ನ ಕಾರ್ಯಾಚರಣೆ ನಡೆಸುತ್ತಿದ್ದ. [ಮಹದೇಶ್ವರ ಬೆಟ್ಟದಲ್ಲಿ ವೀರಪ್ಪನ್-2 ಹಾವಳಿ]
ಆನೆ ದಂತ, ಹುಲಿಯ ಚರ್ಮಗಳ ಕಳ್ಳ ಸಾಗಾಣೆ ಸೇರಿದಂತೆ ಸರವಣನ್ ವಿರುದ್ಧ ಕರ್ನಾಟಕದಲ್ಲಿ 5 ಪ್ರಕರಣಗಳು ದಾಖಲಾಗಿವೆ. 2001ರಲ್ಲಿ ತಮಿಳುನಾಡು ಪೊಲೀಸರು ಸರವಣನ್ ಅನ್ನು ಬಂಧಿಸಿದ್ದರು. ಆದರೆ, ಜಾಮೀನು ಪಡೆದು ಹೊರಬಂದ ಈತ ಪುನಃ ಕಾಡುಗಳ್ಳನಾಗಿದ್ದ ಮತ್ತು ದಟ್ಟ ಕಾಡುಗಳಲ್ಲಿ ತಲೆ ಮರಿಸಿಕೊಂಡಿದ್ದ. ಸರವಣನ್ ಸುಮಾರು 20 ಮಂದಿಯ ಗುಂಪನ್ನು ಹೊಂದಿದ್ದಾನೆ ಎಂದು ಶಂಕಿಸಲಾಗಿದೆ.