ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಬೆಂಗಳೂರು, ಮಾರ್ಚ್ 13: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯಿಲಿ ಸೇರಿದಂತೆ 20 ಬರಹಗಾರರು 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ರಾಜಕಾರಣದ ಜತೆ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಎಂ. ವೀರಪ್ಪ ಮೊಯಿಲಿ ಅವರ 'ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ' ಮಹಾಕಾವ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಆಯ್ಕೆಯಾಗಿದೆ.
ಪ್ರಶಸ್ತಿಯು 1 ಲಕ್ಷ ರೂ ನಗದು ಪುರಸ್ಕಾರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಹ.ಸ ಬ್ಯಾಕೋಡ ಅವರ 'ನಾನೂ ಅಂಬೇಡ್ಕರ್' ಕಾದಂಬರಿಯು 'ಬಾಲ ಸಾಹಿತ್ಯ ಪುರಸ್ಕಾರ'ಕ್ಕೆ ಭಾಜನವಾಗಿದೆ. ಕೆ.ಎಸ್. ಮಹದೇವ ಸ್ವಾಮಿ ಅವರು 'ಯುವ ಪುರಸ್ಕಾರ'ಕ್ಕೆ ಆಯ್ಕೆಯಾಗಿದ್ದಾರೆ. ಈ ಎರಡೂ ಪುರಸ್ಕಾರಗಳು ತಲಾ 50 ಸಾವಿರ ರೂ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಲಾ ಒಂದು ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಏಳು ಕವನ ಸಂಕಲನ, ನಾಲ್ಕು ಕಾದಂಬರಿಗಳು, ಐದು ಸಣ್ಣಕಥೆ, ಎರಡು ನಾಟಕಗಳು, ಒಂದು ಆತ್ಮಚರಿತ್ರೆ ಮತ್ತು ಒಂದು ಮಹಾಕಾವ್ಯಕ್ಕೆ ಪ್ರಶಸ್ತಿ ಲಭಿಸಿದೆ.
Recommended Video
ಸಾಹಿತಿಗಳಾದ ಅರವಿಂದ ಮಾಲಗತ್ತಿ ಮತ್ತು ಎಸ್ಜಿ ಸಿದ್ದರಾಮಯ್ಯ ಅವರನ್ನು ಒಳಗೊಂಡ ತೀರ್ಪುಗಾರರ ಮಂಡಳಿ ಈ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.