ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ತಮಿಳರ ಪರವಾಗಿವೆ: ವಾಟಾಳ್ ನಾಗರಾಜ್!
ಬೆಂಗಳೂರು, ಜು. 13: ಕೋಲಾರದಲ್ಲಿ ಹಾಕಿರುವ ತಮಿಳು ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಆಗ್ರಹಿಸಿದ್ದಾರೆ. "ರಾಜಕೀಯ ಲಾಭದ ಆಸೆಯಿಂದ ಎಲ್ಲ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ತಮಿಳರ ಪರವಾಗಿ ನಿಂತಿವೆ" ಎಂದು ಗಂಭೀರ ಆರೋಪವನ್ನು ವಾಟಾಳ್ ನಾಗರಾಜ ಮಾಡಿದ್ದಾರೆ. ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
"ಕೋಲಾರ ಚಿನ್ನದ ನಾಡು, ಗಂಡುಮೆಟ್ಟಿದ ನಾಡು. ಆದರೆ ಅದು ಈಗ ತಮಿಳು ರಾಜ್ಯವಾಗಿದೆ. ತಮಿಳರ ಕೋಟೆಯಾಗಿದೆ , ತಮಿಳೇ ಅಲ್ಲಿ ಪ್ರಭುತ್ವವಾಗಿದೆ. ಇಷ್ಟೇ ಅಲ್ಲ ಅಲ್ಲಿನ ಬಹುತೇಕ ಶಾಸಕರು ಕೂಡ ತಮಿಳರೇ ಆಗಿದ್ದಾರೆ. ಬಹಳ ವರ್ಷದ ಹಿಂದೆ ನಾವು ಅಲ್ಲಿಗೆ ಹೋಗಿದ್ದೇವು. ತಮಿಳು ನಾಮಫಲಕ ಕಿತ್ತೊಗೆದಿದ್ದೆವು. ಈಗ ಮತ್ತೆ ಅಲ್ಲಿ ತಮಿಳು ನಾಮಫಲಕ ಹಾಕಿದ್ದಾರೆ" ಎಂದು ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
"ಕೋಲಾರದಲ್ಲಿ ಪುರಸಭೆ ಅಧ್ಯಕ್ಷರು ಸೇರಿ ತಮಿಳರು ಹಾಕಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಅವರಿಗೆ ಮನವಿ ಸಲ್ಲಿಸಿದ್ದೇನೆ. ಇದು ಕನ್ನಡಿಗರ ಭೂಮಿ, ತಮಿಳರ ಭೂಮಿಯಲ್ಲ. ಇಲ್ಲಿ ಕನ್ನಡವೇ ಇರಬೇಕು, ಕನ್ನಡ ಬಿಟ್ಟು ಬೇರೆ ಭಾಷೆ ಬೇಡ. ನಮ್ಮ ಸರ್ಕಾರದ ನೀತಿ ಕನ್ನಡ ಭಾಷೆ. ಹೀಗಾಗಿ ರಾಜ್ಯ ಭಾಷೆ ಕನ್ನಡದಲ್ಲೇ ನಾಮಫಲಕ ಇರಬೇಕು. ಈ ಕೂಡಲೇ ಸರ್ಕಾರ ಅಲ್ಲಿನ ವರದಿ ತರಿಸಬೇಕು. ಅಲ್ಲಿನ ತಮಿಳು ನಾಮಫಲಕ ತೆರವುಗೊಳಿಸಲು ಮುಖ್ಯಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ" ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
Recommended Video
"ನಮ್ಮ ಮನವಿಗೆ ಸ್ಪಂಧಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೋಲಾರ ಜಿಲ್ಲಾಧಿಕಾರಿಯಿಂದ ವರದಿ ತರಿಸುವೆ ಎಂದಿದ್ದಾರೆ. ತಮಿಳು ಮತಗಳಿಗಾಗಿ ಎಲ್ಲಾ ಪಕ್ಷ ನಿಂತಿವೆ. ಹೀಗಾಗಿ ರಾಜ್ಯವನ್ನೇ ಅವರಿಗೆ ಮಾರಾಟ ಮಾಡುತ್ತಿದ್ದಾರೆ. ನಾನು ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ" ಎಂದು ವಿಧಾನಸೌಧದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.