ಶಾಲಾ-ಕಾಲೇಜು ಪುನರಾರಂಭ: ಇಲ್ಲಿದೆ ರಾಜ್ಯದ ಸರ್ಕಾರಿ ಶಾಲೆಗಳ ಸಂಪೂರ್ಣ ಚಿತ್ರಣ!
ಬೆಂಗಳೂರು, ಜ. 01: ರೂಪಾಂತರಿ ಕೊರೊನಾ ವೈರಸ್ ಆತಂಕದ ಮಧ್ಯೆ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಇಂದು (ಜ.01) ಪುನರಾರಂಭವಾಗಿವೆ. ಕಳೆದ 2020ರ ಮಾರ್ಚ್ ತಿಂಗಳಿನಲ್ಲಿ ಕೊರೊನಾ ವೈರಸ್, ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ನಂತರದ ದಿನಗಳಲ್ಲಿ ವಿದ್ಯಾಗಮ ಕಾರ್ಯಕ್ರಮದ ಮೂಲಕ ಮಕ್ಕಳ ಕಲಿಕೆಗೆ ಶಿಕ್ಷಣ ಇಲಾಖೆ ಒತ್ತು ನೀಡಿತ್ತು. ಆದರೆ ಶಿಕ್ಷಕರು ಹಾಗೂ ಮಕ್ಕಳಲ್ಲಿ ಸೋಂಕು ಕಂಡು ಬಂದಿದ್ದರಿಂದ ವಿದ್ಯಾಗಮವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಾಜ್ಯಾದ್ಯಂತ ಇಂದಿನಿಂದ ವಿದ್ಯಾಗಮ ಕಾರ್ಯಕ್ರಮ ಕೂಡ ಪುನರಾರಂಭವಾಗಿದೆ.
ಕೆಲವು ಶಾಲೆಗಳ ಆವರಣದಲ್ಲಿ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಶಿಕ್ಷಕರು, ಜಿಲ್ಲಾಧಿಕಾರಿಗಳು, ಸಿಒಇಗಳು ಮಾತನಾಡಿ ಆತ್ಮವಿಶ್ವಾಸ ಮೂಡಿಸುವ ಮಾತುಗಳನ್ನು ಹೇಳಿದ್ದು ಕಂಡು ಬಂದಿತು. ಜೊತೆಗೆ ಕೆಲವು ಶಾಲೆಗಳಲ್ಲಿ ಸರಸ್ವತಿ-ಗಣೇಶ ಭಾವಚಿತ್ರಗಳಿಗೆ ಪೂಜೆ ಮಾಡಿ, ಸರಸ್ವತಿ ಮತ್ತು ಗಣೇಶ ಸ್ತೋತ್ರಗಳನ್ನು ಮಕ್ಕಳು ಹೇಳುವ ಮೂಲಕ ಶಾಲೆ ಆರಂಭಕ್ಕೆ ಮುನ್ನಡಿ ಹಾಡಿದರು.
ಹತ್ತು ತಿಂಗಳುಗಳ ಬಳಿಕ ರಾಜ್ಯಾದ್ಯಂತ ಶಾಲೆಗಳು ಆರಂಭ!
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ತರಗತಿಯ ಪ್ರತಿ ಕೊಠಡಿಗಳಲ್ಲಿ 15 ವಿದ್ಯಾರ್ಥಿಗಳಿಗೆ ಕೂರಲು ಅವಕಾಶ ಮಾಡಿಕೊಡಲಾಗಿದೆ. ದೊಡ್ಡ ಕೊಠಡಿಗಳಲ್ಲಿ 20 ಮಕ್ಕಳಿಗೆ ಕೂರಲು ಅವಕಾಶ ಮಾಡಿ ಕೊಡಲಾಗಿದೆ. ಬಳ್ಳಾರಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯರು, ತಾಯಂದಿರು ಶಾಲಾ ಮಕ್ಕಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಂಡಿದ್ದು ಕಂಡು ಬಂದಿತು. ಶಾಲೆ ಆರಂಭವಾಗಿದ್ದು, ಅಲ್ಲಿನ ಮಕ್ಕಳು ಹಾಗೂ ಗ್ರಾಮಸ್ಥರಲ್ಲಿ ಖುಷಿ ಮೂಡಿಸಿದ್ದು ಕಂಡು ಬಂದಿತು. ಕೆಲವಡೆಗಳಲ್ಲಿ ಮಕ್ಕಳನ್ನು ಓಲಗ ವಾದ್ಯ, ತಮಟೆಗಳಿಂದ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಉಡುಪಿ ಜಿಲ್ಲೆಯಲ್ಲಿ ಆರಂಭವಾಗದ ಎರಡು ಶಾಲೆಗಳು!
ಹೂ ಕೊಟ್ಟು ಮಕ್ಕಳ ಸ್ವಾಗತ
ಕೊಪ್ಪಳದ ಹಲವು ಶಾಲೆಯಲ್ಲಿ ಶಿಕ್ಷಕರು ಗುಲಾಬಿ ಹೂ ನೀಡಿ ಮಕ್ಕಳನ್ನು ಬರಮಾಡಿಕೊಂಡರು. ರಾಯಚೂರು ಜಿಲ್ಲೆಯ ಕೆಲವು ಶಾಲೆಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಮಕ್ಕಳಿಂದ ಕೇಕ್ ಕತ್ತರಿಸಿ ತರಗತಿಗಳನ್ನು ಆರಂಭಿಸಲಾಯ್ತು. ಕೊರೊನಾ ಸಂಕಷ್ಟ ಕಳೆದು ಶಾಲಾರಂಭದ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿರುವಂತೆ ವಾತಾವರಣ ನಿರ್ಮಾಣವಾಗಿತ್ತು.
ಕೊರೊನಾವೈರಸ್ ಕರಿನೆರಳಿನ ನಡುವೆಯೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸಿದಂತೆಯೆ ಇಂದು ಕೂಡ ಶಾಲಾ-ಕಾಲೇಜುಗಳು ಆರಂಭವಾಗಿವೆ. ಶಾಲೆ ಆರಂಭವಾಗಿದ್ದರೂ, ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಲ್ಲ. ಹಾಜರಾತಿಯ ಬಗ್ಗೆ ಗೊಂದಲ ಬೇಡ. ಪೋಷಕರ ಒಪ್ಪಿಗೆ ಪತ್ರ ಇದ್ದಲ್ಲಿ ಮಾತ್ರ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶನಕ್ಕೆ ಅನುಮತಿ ಕೊಡಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮೊದಲೇ ಸ್ಪಷ್ಟವಾಗಿ ತಿಳಿಸಿದ್ದಾರೆ.
ಡಾ. ವೀರೇಂದ್ರ ಹೆಗ್ಗಡೆ ಸಲಹೆ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಸಿರಿಗೆರೆ ಶ್ರೀಗಳು, ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಶಾಲೆ ಆರಂಭವನ್ನು ಸ್ವಾಗತಿಸಿದ್ದಾರೆ. ಈ ಕಾರ್ಯ ಮೊದಲೇ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿ ಆಯಾ ಭಾಗದ ಹಲವಾರು ಶಾಸಕರು, ಜನಪ್ರತಿನಿಧಿಗಳು ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಹೂ ಕೊಟ್ಟು ಸ್ವಾಗತಿಸಿದ್ದಾರೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಿರ್ಸಿಯ ಸರ್ಕಾರಿ ಮಾರಿಕಾಂಬಾ ಪ್ರೌಢಶಾಲೆ ಸೇರಿದಂತೆ ಹಲವಾರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಬೀದರ್ ಜಿಲ್ಲೆಯ ಶಾಲೆಗೆ ಹೋಗಿ ಮಕ್ಕಳಿಗೆ ಸಹಿ ಹಂಚುವ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.
ಸ್ಯಾನಿಟೈಸರ್ ವಿತರಿಸಿದ ಸಚಿವ
ಬೆಂಗಳೂರಿನಲ್ಲಿ ಸಚಿವ ಕೆ. ಗೋಪಾಲಯ್ಯ ಕೆಲವು ತಮ್ಮ ವಿಧಾನಸಭಾ ಕ್ಷೇತ್ರದ ಶಾಲೆಗಳಿಗೆ ಭೇಟಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಿದ್ದಾರೆ. ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಪರಿಷತ್ ಸದಸ್ಯರಾದ ಡಾ. ವೈ.ಎ. ನಾರಾಯಣಸ್ವಾಮಿ, ಜ್ಯೋತಿ ಗಣೇಶ್, ಸಿ.ಎಸ್. ಪಟ್ಟರಾಜು, ಉಮಾನಾಥ ಕೋಟ್ಯಾನ್, ಡಾ. ರಾಜೇಶ್ ನಾಯಕ್ ಉಳಿಪ್ಪಾಡಿ ಸೇರಿದಂತೆ ರಾಜ್ಯದ ವಿವಿಧೆಡೆ ಹಲವಾರು ಶಾಸಕರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ತಾಪಂ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಹಲವಾರು ಕಡೆಗಳಲ್ಲಿ ಸ್ವಾಮೀಜಿಯವರು, ಶಾಲೆಗಳಿಗೆ ಭೇಟಿ ನೀಡಿದ ಮಕ್ಕಳು ಮತ್ತು ಪೋಷಕರಲ್ಲಿ ಭರವಸೆ ಮೂಡಿಸಿದ್ದು ವರದಿಯಾಗಿದೆ.
ಆತ್ಮವಿಶ್ವಾಸ ತಂದ ಹಾಜರಾತಿ
ಬಹುತೇಕ ಕಡೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರತ್ಯೇಕ ತಂಡಗಳಲ್ಲಿ ಭೇಟಿ ನೀಡಿ ಮಕ್ಕಳಲ್ಲಿ ಆತ್ಮವಿಶ್ವಾಸ ತಂಬುವ ಕೆಲಸ ಮಾಡಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಗಡಿಭಾಗದ ಹಳ್ಳಿಯಾದ ಗೋಲವಾಡದಲ್ಲಿ ಒಟ್ಟು 52 ಮಕ್ಕಳಲ್ಲಿ 45 ಮಕ್ಕಳು ತರಗತಿಗೆ ಹಾಜರಾಗಿದ್ದರು. ಮಧುಗಿರಿಯ ಬಡವನಹಳ್ಳಿ ಶಾಲೆಯಲ್ಲಿ 180ರಲ್ಲಿ 170 ಮಕ್ಕಳು ಹಾಜರಾಗಿದ್ದರು.
ಧಾರವಾಡದ ಆರ್ಎನ್ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಮತ್ತು ಕರ್ನಾಟಕ ಹೈಸ್ಕೂಲ್ಗಳಲ್ಲಿ ಜಿಲ್ಲಾಧಿಕಾರಿ ಮತ್ತು ಸಿಇಒಗಳು ಮಕ್ಕಳಿಗೆ ಹೂ ಕೊಟ್ಟು ಶಾಲೆಗೆ ಬರಮಾಡಿಕೊಂಡರು. ಹಲವಾರು ಕಡೆಗಳಲ್ಲಿ ದಾನಿಗಳು ಸೋಪು, ಸ್ಯಾನಿಟೈಜರ್, ಮಾಸ್ಕ್ಗಳನ್ನು ನೀಡಿ ಸಹಕಾರದ ಹಸ್ತ ಚಾಚಿದ್ದಾರೆ. ಮಾಗಡಿ ತಾಲೂಕಿನಲ್ಲಿ ದಾನಿಯೊಬ್ಬರು ಮಕ್ಕಳಿಗೆ ಹಂಚುವಂತೆ ಎರಡು ಸಾವಿರ ಮಾಸ್ಕ್ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೊಟ್ಟಿದ್ದಾರೆ.
ಪಾಲಕರ ಅಭಿಪ್ರಾಯ ಏನಿದೆ?
ವಿಜಯಪುರ ತಾಲೂಕಿನ ಟಕ್ಕಳಕಿ ತಾಂಡಾದ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು ಶಾಲೆ ಆರಂಭವಾದುದಕ್ಕೆ ಬೆಟ್ಟದಷ್ಟು ಖುಷಿಯಾಗಿದೆ ಎಂದು ಶಿಕ್ಷಕರ ಬಳಿ ಹೇಳುತ್ತಿದ್ದರು. ಟಕ್ಕಳಕಿ ತಾಂಡಾದ ವಿದ್ಯಾರ್ಥಿಯ ಪೋಷಕಿ ಮಲ್ಲಮ್ಮ ನಾಯಕ್ ಶಾಲೆ ಆರಂಭದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಶಾಲೆ ಆರಂಭವಾಗದಿರುವುದರಿಂದ ಮಕ್ಕಳು ಮನೆಮಠ ಬಿಟ್ಟು ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ತಿರುಗಾಡುತ್ತಿದ್ದರು. ಶಾಲೆ ಆರಂಭವಾಗಿರುವುದು ನಮಗೆ ಸಮಾಧಾನ ತಂದಿದೆ. ಇವರೆಲ್ಲ ಇನ್ನು ನಿಮ್ಮ ಮಕ್ಕಳು. ಚೆನ್ನಾಗಿ ನೋಡಿಕೊಳ್ಳಿ ಎಂದು ಶಾಲೆ ಆರಂಭಿಸಿದ್ದಕ್ಕೆ ಶಿಕ್ಷಕರಿಗೆ ಕೈಮುಗಿದು ಕೃತಜ್ಞತೆ ಹೇಳಿರುವುದು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರಿನ ವಿದ್ಯಾರ್ಥಿಯೊಬ್ಬನ ತಾಯಿ ಸುಮಿತ್ರಾ ಎಂಬುವರು, ಶಾಲೆ ಆರಂಭಿಸಿದ್ದು, ನಮಗೆ ಖುಷಿಯ ವಿಷಯವಾಗಿದೆ. ಹೆಚ್ಚುಕಮ್ಮಿ ಒಂದು ವರ್ಷದಿಂದ ಶಾಲೆ ಇಲ್ಲದ್ದರಿಂದ ಮಕ್ಕಳನ್ನು ಹಿಡಿಯುವುದೇ ನಮಗೆ ಕಷ್ಟವಾಗಿತ್ತು. ಇನ್ನಾದರೂ ಶಾಲೆ ಆರಂಭವಾಯಿತಲ್ಲ, ಶಾಲೆಗಳು ಯಾವುದೇ ತೊಂದರೆಯಿಲ್ಲದೇ ನಡೆಯಲು ಭಗವಂತ ಹರಸಲಿ ಎಂದು ಶಿಕ್ಷಕರೊಂದಿಗೆ ಮಾತನಾಡಿ ಆಶಿಸಿದರು.
Recommended Video