ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಕ್ಕೆ ಪುಣ್ಯಾನಂದ ಸ್ವಾಮೀಜಿ
ಬೆಂಗಳೂರು, ಜೂನ್ 6: ಪಕ್ಷದ ಮುಖಂಡರ ವಿರುದ್ಧ ಸಿಡಿದೆದ್ದು, ಸದ್ಯಕ್ಕೆ ತಣ್ಣಗಾಗಿರುವ ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪುಣ್ಯಾನಂದ ಪುರಿ ಸ್ವಾಮೀಜಿ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಆತುರದಿಂದ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ರಮೇಶ್ ಜಾರಕಿಹೊಳಿ ಅವರಿಗೆ ಸಲಹೆ ನೀಡಿದರು. ಈ ಭೇಟಿ ವೇಳೆ ರಾಜಕೀಯ ಸನ್ನಿವೇಶಗಳ ಕುರಿತು ಸಹ ಸಮಾಲೋಚನೆ ನಡೆಸಲಾಯಿತು ಎನ್ನಲಾಗಿದೆ. ಆದರೆ, ರಾಜಕೀಯ ಚರ್ಚೆಗಳು ನಡೆಯಲಿಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸ್ವಾಮೀಜಿ ಹೇಳಿದ ಬುದ್ದಿಮಾತೇನು?
ಇದಕ್ಕೂ ಮೊದಲು ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ ಅವರು ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ತೆರಳು ಮಾತುಕತೆ ನಡೆಸಿದ್ದರು. ದೃಢಮನಸ್ಸಿನಿಂದ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದರು.
ರಮೇಶ್ ಜಾರಕಿಹೊಳಿ ಅವರಿಗೆ ವಾಲ್ಮೀಕಿ ಸಮುದಾಯದ ಪೀಠ ಮೊದಲಿನಿಂದಲೂ ಬೆಂಬಲ ನೀಡಿತ್ತು. ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಂಬಂಧ ಹೋರಾಟ ನಡೆಸುವುದಾಗಿ ಭರವಸೆ ಕೊಟ್ಟಿತ್ತು. ಶಾಖಾ ಮಠದ ಪ್ರಮುಖರು ರಮೇಶ್ ಅವರೊಂದಿಗೆ ಮಾತನಾಡಿದ್ದರು. ಈಗ ಸ್ವತಃ ಪುಣ್ಯಾನಂದ ಪುರಿ ಸ್ವಾಮೀಜಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಶೇ 7.5 ಮೀಸಲಾತಿ ಸಿಕ್ಕಿಲ್ಲ
'ವಾಲ್ಮೀಕಿ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ವಾಲ್ಮೀಕಿ ಸಮುದಾಯವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಈ ಸರ್ಕಾರದ ಕಾರ್ಯವನ್ನು ಹೋಲಿಕೆ ಮಾಡಿದಾಗ ನಮಗೆ ಅನುಕೂಲ ಆಗಿಲ್ಲ. ಸಮುದಾಯಕ್ಕೆ ಶೇ 7.5 ಮೀಸಲಾತಿ ಸಿಕ್ಕಿಲ್ಲ' ಎಂದು ಪುಣ್ಯಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಅನುದಾನ ಬಳಕೆಯೇ ಆಗುತ್ತಿಲ್ಲ
'ಸಮುದಾಯಕ್ಕೆ 20 ಸಾವಿರ ಕೋಟಿ ಅನುದಾನ ನೀಡಿದ್ದೇವೆ ಎನ್ನುತ್ತಿದ್ದಾರೆ. ಆದರೆ, ನೂರು ಕೋಟಿ ರೂ ಕೂಡ ಬಳಕೆಯಾಗಿಲ್ಲ. ಅನುದಾನ ಬಳಕೆಗೆ ನೂರಾರು ನಿರ್ಬಂಧಗಳನ್ನು ವಿಧಿಸಿ ಅದರ ಉಪಯೋಗ ಆಗದಂತೆ ಮಾಡಿದ್ದಾರೆ. ಈ ರೀತಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳ ಚರ್ಚೆ ಮಾಡಿದ್ದೇವೆ' ಎಂದು ಸ್ವಾಮೀಜಿ ತಿಳಿಸಿದರು.
ಬಿಜೆಪಿ ಮುಖಂಡರ ಜೊತೆ ರಮೇಶ್ ಜಾರಕಿಹೊಳಿ ತಡರಾತ್ರಿ ಚರ್ಚೆ
ಬುದ್ಧಿಮಾತು ಹೇಳಿದ್ದ ಸ್ವಾಮೀಜಿ
ಕೆಲವು ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದ ಚಿಕ್ಕಬಳ್ಳಾಪುರ ವಾಲ್ಮೀಕಿ ಪೀಠದ ಕಿರಿಯ ಬ್ರಹ್ಮಾನಂದ ಸ್ವಾಮೀಜಿ ಅವರು ರಾಜಕೀಯ ನಡೆಯಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ. ಗೊಂದಲದಿಂದ ನಿರ್ಧಾರ ತೆಗೆದುಕೊಳ್ಳಬಾರದು. ಸಮುದಾಯದ ದೊಡ್ಡ ನಾಯಕರಾಗಿ ಹೊರಹೊಮ್ಮುವ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದೆ ಎಂದು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದೆ.
ಡಿಸಿಎಂ ಹುದ್ದೆ ನೀಡಿ
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ವಾಲ್ಮೀಕಿ ಸಮುದಾಯದ ನಾಲ್ವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈ ಸರ್ಕಾರದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಮುದಾಯಕ್ಕೆ ಅನ್ಯಾಯವಾಗಿದೆ. ಆದ್ದರಿಂದ ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಬ್ರಹ್ಮಾನಂದ ಸ್ವಾಮೀಜಿ ಹೇಳಿದ್ದರು.