ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ರೋಗಕ್ಕೆ ಲಸಿಕೆ ಅಭಿಯಾನ ಆರಂಭ!
ಬೆಂಗಳೂರು, ಸೆ. 07: ರೈತರಿಗೆ ಆರ್ಥಿಕ ಹಾನಿ ತರುವುದರೊಂದಿಗೆ ಪ್ರಾಣ ಹಾನಿಯನ್ನೂ ಮಾಡಬಹುದಾದ ಪ್ರಾಣಿಜನ್ಯ ಖಾಯಿಲೆ ಕಂದು ರೋಗದ ವಿರುದ್ಧ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದೆ. ಪ್ರಾಣಿಗಳಿಗೆ ತಗಲುವ ಈ ರೋಗ, ಪ್ರಾಣಿಗಳ ಮೂಲಕ ಮನುಷ್ಯರಿಗೂ ಹರಡುವ ಮೂಲಕ ಜೀವಹಾನಿಯೂ ಆಗಬಹುದಾದ ಸಾಧ್ಯತೆಗಳಿರುತ್ತವೆ.
ಪ್ರಾಣಿಗಳಿಂದ ಮನುಷ್ಯರಿಗೆ ಈ ರೋಗ ತಗಲುವುದನ್ನು ತಪ್ಪಿಸಲು 4 ರಿಂದ 8 ತಿಂಗಳ ದನ ಹಾಗೂ ಎಮ್ಮೆ ಕರುಗಳಿಗೆ ಕರುಗಳಿಗೆ ಜೀವಿತಾವಧಿಯಲ್ಲಿ ಒಮ್ಮೆ ಲಸಿಕೆ ಹಾಕಿಸುವುದರಿಂದ ರೋಗ ನಿಯಂತ್ರಣ ಮಾಡಬಹುದು. ಹೀಗಾಗಿ ಕಂದು ರೋಗ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಸಿಕಾ ಕಾರ್ಯಕ್ರಮವನ್ನು 3 ಹಂತಗಳಲ್ಲಿ ನಡೆಸುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಈ ರೋಗ ನಿಯಂತ್ರಣಕ್ಕೆ ರಾಜ್ಯ ಪಶುಸಂಗೋಪನಾ ಇಲಾಖೆ ಮಾಡುತ್ತಿರುವ ಲಸಿಕೆ ಅಭಿಯಾನ ಹಾಗೂ ಲಸಿಕೆ ಹಾಕಿಸದಿದ್ದರೇ ರೈತರಿಗೆ ಆಗುವ ತೊಂದರೆಗಳ ಕುರಿತು ಸಮಗ್ರ ಮಾಹಿತಿ ಮುಂದಿದೆ.
ಒಂದು ಬಾರಿ ಲಸಿಕೆ ಹಾಕಿಸಿ
"ದನ ಮತ್ತು ಎಮ್ಮೆ ಹೆಣ್ಣು ಕರುಗಳಿಗೆ ಜೀವಿತಾವಧಿಯಲ್ಲಿ ಒಂದು ಬಾರಿ ಕಂದು ರೋಗದಿಂದ (Brucellosis) ರಕ್ಷಿಸಲು 4 ರಿಂದ 8 ತಿಂಗಳ ವಯೋಮಾನದ ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸಿ. ಜಾನುವಾರು ಸಂಪತ್ತನ್ನು ರಕ್ಷಿಸಿ ರಾಜ್ಯವನ್ನು ಕಂದು ರೋಗ ಮುಕ್ತ ಮಾಡಲು ಸಹಕರಿಸಿ" ಎಂದು ರಾಷ್ಟ್ರೀಯ ಕಂದು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಬೀದರ್ ಜಿಲ್ಲೆಯ ಔರಾದ್ನಲ್ಲಿ ಚಾಲನೆ ನೀಡಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಮಾತನಾಡಿದ್ದಾರೆ.
ನಾಲ್ಕು ವಿಭಾಗಗಳಲ್ಲಿ ಲಸಿಕೆ ಸಂಗ್ರಹ
ಈ ಲಸಿಕೆ ಅಭಿಯಾನ ಸೆಪ್ಟೆಂಬರ್-2021, ಜನೆವರಿ-2022 ಹಾಗೂ ಮೇ 2022ರ ವರೆಗೆ ನಡೆಯಲಿದೆ. ಯೋಜನೆ ಮೂಲಕ ರಾಜ್ಯಾದ್ಯಂತ ಸುಮಾರು 10 ಲಕ್ಷ ದನ, ಎಮ್ಮೆ ಹೆಣ್ಣು ಕರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಲಸಿಕೆಗಳನ್ನು ಸಂಗ್ರಹಿಸಿ ಇಡಲಾಗಿದೆ. ರಾಜ್ಯದ ದಕ್ಷಿಣ ಭಾಗದ ಜಾನುವಾರುಗಳಿಗೆ ಲಸಿಕೆ ಹಾಕಲು ಬೆಂಗಳೂರಿನಲ್ಲಿ 2,36,000 ಡೋಸ್, ಬೆಳಗಾವಿಯಲ್ಲಿ 2,82,000 ಡೋಸ್ ಹಾಗೂ ರಾಯಚೂರಿನಲ್ಲಿ 1,49,000 ಡೋಸ್ ಸಂಗ್ರಹಿಸಿ ಕೊಡಲಾಗುತ್ತದೆ. ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಸೇರಿದಂತೆ ಒಟ್ಟು 6,303 ಸಿಬ್ಬಂದಿಯನ್ನು ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ ಎಂದು ಸಚಿವ ಚೌಹಾಣ್ ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಎಚ್ಚರಿಕೆ!
ಕಂದುರೋಗ ನಿಯಂತ್ರಣಕ್ಕೆ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ತೋರಿಸಬಾರದು. ರೈತರ ಪರ ಕಾಳಜಿ ವಹಿಸಿ ಕೆಲಸಮಾಡಬೇಕು. ನೆಪ ಒಡ್ಡಿ ಕರ್ತವ್ಯ ಲೋಪವಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇಲಾಖೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಕಂದು ರೋಗ ಲಸಿಕಾ ಕಾರ್ಯಕ್ರಮ ಶೇಕಡಾ ನೂರರಷ್ಟು ಯಶಸ್ವಿ ಆಗಲೇಬೇಕು ಅಲ್ಲದೇ ನಿಗದಿತ ಅವಧಿಯಲ್ಲಿ ಲಸಿಕೆ ನೀಡುವ ಕಾರ್ಯ ಸಹ ಸಂಪೂರ್ಣವಾಗಬೇಕು ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಜೊತೆಗೆ ಕಂದು ರೋಗದ ನಿರ್ಮೂಲನೆಗೆ ರಾಜ್ಯದ ಎಲ್ಲ ಪಶು ಪಾಲಕರು, ಗ್ರಾಮಸ್ಥರು ಹಾಗೂ ರೈತರು ಸಹಕರಿಸಿ ಜಾನುವಾರುಗಳನ್ನು ಕಂದು ರೋಗದಿಂದ ರಕ್ಷಿಸುವಲ್ಲಿ ಪಶುಸಂಗೋಪನೆ ಇಲಾಖೆಗೆ ಸಹಕರಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ.
Recommended Video
ಕಂದು ರೋಗದ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ..!
ಕಂದು ರೋಗಕ್ಕೆ ಸಂಬಂಧ ಪಟ್ಟಂತೆ ಯಾವುದೇ ಮಾಹಿತಿ ಬೇಕಾದಲ್ಲಿ ಪಶು ಕಲ್ಯಾಣ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ:
Helpline - Prani Kalyana Sahayavani
+91 82771 00200
Helpline for Animal welfare by the Department of Animal Husbandry and Veterinary Services, Government of Karnataka
Helpline - Prani Kalyana Sahayavani
ಕಂದು ರೋಗದ ಲಸಿಕಿ ನಿಮ್ಮ ಗ್ರಾಮಗಳಲ್ಲಿ ಒಂದು ವೇಗೆ ಆಯೋಜನೆ ವಿಳಂಬವಾದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ. ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ತಕ್ಷಣಕ್ಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಚೌಹಾಣ್ ಮನವಿ ಮಾಡಿದ್ದಾರೆ.