ಕನ್ನಡ ರಾಜ್ಯೋತ್ಸವ: ಮನೆ-ಮನಗಳಲ್ಲಿ ಕನ್ನಡ ತುಂಬಿರಲಿ ಎಂದು ಮನವಿ ಮಾಡಿದ ಸುನಿಲ್ ಕುಮಾರ್!
ಬೆಂಗಳೂರು, ಅ. 24: "ಮನೆ ಹಾಗೂ ಮನಗಳಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡ ವಾತಾವರಣ ನಿರ್ಮಾಣ ಆಗಬೇಕಿದೆ. ಕನ್ನಡ ನಮ್ಮ ಸಂಸ್ಕೃತಿ. ಇದನ್ನು ಉಳಿಸಿ ಬೆಳೆಸಲು ದೊಡ್ಡ ಪ್ರಮಾಣದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಲಾಲ್ಬಾಗ್ನಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ 'ಕನ್ನಡಕ್ಕಾಗಿ ನಾವು' ವಿಶೇಷ ಅಭಿಯಾನಕ್ಕಾಗಿ ರಚಿಸಲಾದ 'ಮಾತಾಡ್ ಮಾತಾಡ್ ಕನ್ನಡ' ಎನ್ನುವ ಕಿರು ನಾಟಕಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
'ಮಾತಾಡ್ ಮಾತಾಡ್ ಕನ್ನಡ' ಎಂಬ ಘೊಷವಾಕ್ಯದೊಂದಿಗೆ ಆರಂಭವಾಗಿರುವ ಅಭಿಯಾನ ಅಕ್ಟೋಬರ್ 31ರವರೆಗೆ ನಡೆಯಲಿದೆ. ಮುಂದಿನ ಒಂದು ವಾರ ನಾಡಿನಾದ್ಯಂತ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ನಮ್ಮ ಕನ್ನಡ ಭಾಷೆಯ ಬಗ್ಗೆ ಹೆಮ್ಮೆಯಿರಲಿ!
ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ ಕುರಿತ ಹೆಮ್ಮೆ ಮೂಡಿಸಬೇಕು. ಕನ್ನಡಲ್ಲಿ ಸಹಿ ಮಾಡುವ ರೂಢಿಯೂ ಹೆಚ್ಚಾಗ ಬೇಕು. ಕನ್ನಡ ಸಂದೇಶಗಳನ್ನು ಕಳಿಸುವ ಪದ್ಧತಿ ಶುರು ಆಗಬೇಕು. ಈ ಮೂಲಕ 'ಕನ್ನಡಕ್ಕಾಗಿ ನಾವು' ಅಭಿಯಾನ ಯಶಸ್ವಿಯಾಗಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ನಾಡಿನ ಜನರಲ್ಲಿ ಮನವಿ ಮಾಡಿದರು.
ಸಾಮೂಹಿಕವಾಗಿ ಕನ್ನಡ ಗೀತೆಗಳನ್ನು ಹಾಡಿ!
'ಕನ್ನಡಕ್ಕಾಗಿ ನಾವು' ಅಭಿಯಾನದ ಹಿನ್ನೆಲೆಯಲ್ಲಿ ಅ.28 ರಂದು ಬೆಳಗ್ಗೆ 11 ಗಂಟೆಗೆ ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ವಿಶೇಷ ಪ್ರಯತ್ನವನ್ನು ಈ ಬಾರಿ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಗುಂಪು ಗುಂಪಾಗಿ, ಕಚೇರಿಗಳ ಮುಂಭಾಗ, ಕಾರ್ಖಾನೆಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ, ಗಡಿನಾಡು-ಹೊರನಾಡುಗಳಲ್ಲಿಯೂ ಕನ್ನಡದ ಗೀತೆಗಳನ್ನು ಹಾಡಬೇಕಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಸೆಲ್ಪಿ ತೆಗೆದುಕೊಂಡು ಉದ್ಘಾಟಿಸಿದ ಸುನಿಲ್ ಕುಮಾರ್!
ಇದೇ ಸಂದರ್ಭದಲ್ಲಿ ಕುವೆಂಪು ಭಾಷಾ ಭಾರತಿಯಿಂದ ಪ್ರಕಟಿಸಿರುವ 'ಕನ್ನಡೇತರರಿಗೆ ಕನ್ನಡ ಕಲಿಸುವ ಕಿರು ಹೊತ್ತಿಗೆ'ಯನ್ನು ಸಾರ್ವಜನಿಕರಿಗೆ ಸಚಿವ ಸುನಿಲ್ ಕುಮಾರ್ ವಿತರಣೆ ಮಾಡಿದರು. ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ಅಭಿಯಾನದ ಸ್ವಯಂ ಭಾವ ಚಿತ್ರ ಕೇಂದ್ರದಲ್ಲಿ (ಸೆಲ್ಫಿ) ಸ್ವತಃ ಸಚಿವರೇ ಸ್ವಯಂ ಭಾವಚಿತ್ರ ತೆಗೆದುಕೊಂಡು ಉದ್ಘಾಟಿಸಿದರು. ನಂತರ ಮೆಟ್ರೋ ನಿಲ್ದಾಣದಲ್ಲಿ ಮಾತಾಡ್ ಮಾತಾಡ್ ಕನ್ನಡ ಘೋಷ ವಾಕ್ಯದ ಭಿತ್ತಿ ಪತ್ರಗಳನ್ನು ಅಂಟಿಸಿದರು.
ಒಂದಿಡೀ ವಾರ ಕನ್ನಡದ ಕಾರ್ಯಕ್ರಮಗಳು!
ಅಭಿಯಾನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಮೈಸೂರಿನ ರಂಗಾಯಣ ಹಮ್ಮಿಕೊಂಡಿರುವ ಡಾ. ಎಸ್. ಎಲ್. ಭೈರಪ್ಪ ಅವರ ಕಾದಂಬರಿ ಆಧಾರಿತ 'ಪರ್ವ' ನಾಟಕಕ್ಕೆ ವಿ. ಸುನಿಲ್ ಕುಮಾರ್ ಚಾಲನೆ ನೀಡಿದರು. 'ಕನ್ನಡಕ್ಕಾಗಿ ನಾವು' ಅಭಿಯಾನದ ಹಿನ್ನೆಲೆಯಲ್ಲಿ ತಯಾರಿಸಲಾದ ವಿವಿಧ ವಿಡಿಯೋ ಪ್ರದರ್ಶನದ ಎಲ್.ಇ.ಡಿ. ಪರದೆ ಹೊಂದಿರುವ ವಾಹನಕ್ಕೂ ಚಾಲನೆ ನೀಡಿದರು.
ಒಟ್ಟಾರೆ ಕನ್ನಡ ರಾಜ್ಯೋತ್ಸವ ಆಚರಣೆಯ ಮೊದಲಿನ ಒಂದು ವಾರ ಸಂಪೂರ್ಣವಾಗಿ ಕನ್ನಡದ ವಾತಾವರಣ ನಿರ್ಮಾಣ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
ಮುಂದಿನ ಒಂದು ವಾರ ನಡೆಯಲಿದೆ ಅಭಿಯಾನ:
ಅ. 25 ರಂದು ಸಂಜೆ 5 ಗಂಟೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ 'ಮೂಕನ ಮಕ್ಕಳು' ನಾಟಕ ಪ್ರದರ್ಶನವಾಗಲಿದೆ.
ಅ. 26ರ ಸಂಜೆ 6.30ಕ್ಕೆ ರಂದು ಶಿವಮೊಗ್ಗ ರಂಗಾಯಣದವರಿಂದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ 'ಚಾಣಕ್ಯ ಪ್ರಪಂಚ' ನಾಟಕ ಪ್ರದರ್ಶನ ಗೊಳ್ಳಲಿದೆ.
ಅ. 27 ರಂದು ಸಂಜೆ 6.30ಕ್ಕೆ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ದಾವಣಗೆರೆ ವೃತಿ ರಂಗಾಯಣದವರಿಂದ 'ಕನ್ನಡ ಕಲಿಯೋಣ ಬಾ' ನಾಟಕ, ಧಾರವಾಡ ರಂಗಾಯಣದವರಿಂದ ಮಲ್ಲೇಶ್ವರಂ ಕುವೆಂಪು ಸಭಾಂಗಣದಲ್ಲಿ 'ಕತ್ತಲೆಯ ಕೊರೊನಾ' ನಾಟಕ ನಡೆಯಲಿದೆ.
ಅ. 28ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಕುರುಬಾರಹಳ್ಳಿಯ ರಾಜ್ಕುಮಾರ ಸಭಾಂಗಣದಲ್ಲಿ 'ಕತ್ತಲೆ ಕರೊನಾ' ನಾಟಕ, ಸುಚಿತ್ರ ಫಿಲಂ ಸೋಸೈಟಿಯಲ್ಲಿ 'ಶ್ರದ್ಧ ಮತ್ತು ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು' ನಾಟಕ, ಕಲಬುರಗಿ ರಂಗಾಯಣ ದವರಿಂದ ಆರ್ಪಿಸಿ ಬಡಾವಣೆಯ ಗ್ರಂಥಾಲಯ ಸಭಾಗಂಣದಲ್ಲಿ ಸಿರಿಪುರಂದರ ನಾಟಕ ನಡೆಯಲಿದೆ.
ಅ. 29 ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಬ್ಯಾಟರಾಯನಪುರ ನಗರಸಭಾ ಸಭಾಂಗಣದಲ್ಲಿ 'ಕತ್ತಲೆ ಕರೊನಾ' ನಾಟಕ, ಕಲಬುರಗಿ ರಂಗಾಯಣದಿಂದ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಸಿರಿ ಪುರಂದರ ನಾಟಕಗಳು ನಡೆಯಲಿದೆ.
ಅ. 30ರಂದು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರಿಂದ ಕಾಮಾಕ್ಷಿಪಾಳ್ಯದ ರಾಘವೇಂದ್ರ ಆಡಿಟೋರಿಯಂನಲ್ಲಿ 'ಕಾನಿನ ಪೌರಾಣಿಕ' ನಾಟಕ ಪ್ರದರ್ಶನವಾಗಲಿದೆ.
ಅ. 31 ರಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಮಲ್ಲೇಶ್ವರಂನ ಸೇವಾಸದನದಲ್ಲಿ 'ಕನ್ನಡ ಗೀತೆಗಳಿಗೆ ನೃತ್ಯ' ಕಾಯಕ್ರಮ ನಡೆಯಲಿದೆ. ಇಂದಿನಿಂದ ಅ. 31ರವರೆಗೆ ಅಭಿಯಾನದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.