ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ!
ಬೆಂಗಳೂರು, ಡಿ. 02: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತುಗಳು ಕೇಳಿ ಬಂದಿರುವ ಸಂದರ್ಭದಲ್ಲಿಯೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಅನುಮತಿ ಕೊಟ್ಟಿಲ್ಲ. ಇದು ಯಡಿಯೂರಪ್ಪ ಅವರಿಗೆ ಆಗಿರುವ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಧಾನ ಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮಹತ್ವದ ಪತ್ರ ಬರೆದಿದ್ದಾರೆ.
ಬಿಜೆಪಿಯಲ್ಲಿ ವಲಸೆ-ಹೊಸಬರು ಸೇರಿದಂತೆ ಅನೇಕ ಬಹಿರಂಗ ಚರ್ಚೆಗಳು ನಡೆದಿರುವ ಸಂದರ್ಭದಲ್ಲಿ ವಿ. ಸುನಿಲ್ ಕುಮಾರ್ ಅವರ ಪತ್ರ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಏಕಾಏಕಿ ನಿಗಮ ಮಂಡಳಿಗಳಿಗೆ ನೇಮಕ. ಆ ನೇಮಕದ ಕುರಿತು ಹಾಗೂ ಸಂಪುಟ ವಿಸ್ತರಣೆ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಸಚೇತಕ ವಿ. ಸುನಿಲ್ ಕುಮಾರ್ ಅವರು ರಾಜ್ಯಾಧ್ಯಕ್ಷರಿಗೆ ಬರೆದಿರುವ ಪತ್ರ ಸಿಎಂ ಯಡಿಯೂರಪ್ಪ ಅವರಿಗೆ ಆಗುತ್ತಿರುವ ಮತ್ತೊಂದು ಬಹುದೊಡ್ಡ ಹಿನ್ನಡೆ ಎಂದೆ ಹೇಳಲಾಗುತ್ತಿದೆ.
ಶಾಸಕ ವಿ. ಸುನಿಲ್ ಕುಮಾರ್ ಪತ್ರ
ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಸಕ ಸುನಿಲ್ ಕುಮಾರ್ ಅವರು ಕಟೀಲ್ ಅವರಿಗೆ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ. ಪತ್ರದಲ್ಲಿ ತಕ್ಷಣ ಶಾಸಕರ ಸಭೆ ಕರೆಯುವಂತೆ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ. ಇದು ಮುಂದಿನ ಬೆಳವಣಿಗೆಗಳ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.
ಸಾಮಾನ್ಯವಾಗಿ ನಾಯಕತ್ವ ಬದಲಾವಣೆಯಂತಹ ಬೆಳವಣಿಗೆಗಳು ನಡೆಯುವಾಗಲೇ ಶಾಸಕಾಂಗ ಪಕ್ಷದ ಸಭೆಯನ್ನು ಕೆಯಲಾಗುತ್ತದೆ. ಆದರೆ ಸುನಿಲ್ ಕುಮಾರ್ ಅವರು ಒತ್ತಾಯಿಸಿರುವುದು ಶಾಸಕರ ಸಭೆ ಕರೆಯುವಂತೆ. ಮುಂದೆ ಶಾಸಕಾಂಗ ಪಕ್ಷದ ಸಭೆಗೂ ಇದು ನಾಂದಿ ಆಗಬಹುದು ಎಂಬ ಚರ್ಚೆಗಳು ಆರಂಭವಾಗಿದೆ.
ಅನಿವಾರ್ಯತೆ ಸೃಷ್ಟಿಯಾಗಿದೆ
ಪಕ್ಷದಲ್ಲಿನ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪತ್ರ ಬರೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಿಂದ ಮಂತ್ರಿಗಳು, ಕೆಲವು ಶಾಸಕರು ಕೊಡುತ್ತಿರುವ ಹೇಳಿಕೆಗಳು ಪಕ್ಷದ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತಿವೆ. ಒಂದು ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಅವರ ಹೇಳಿಕೆಗಳು ನೋವನ್ನುಂಟು ಮಾಡುತ್ತಿವೆ ಎಂದು ಕಟೀಲ್ ಅವರಿಗೆ ಬರೆದಿರುವ ಪತ್ರದಲ್ಲಿ ಸುನಿಲ್ ಕುಮಾರ್ ಉಲ್ಲೇಖಿಸಿದ್ದಾರೆ.
ತಕ್ಷಣ ಶಾಸಕರ ಸಭೆ ಕರೆಯಿರಿ
ನಿಗಮ ಮಂಡಳಿಗಳಿಗೆ ನೇಮಕಾತಿ, ಮಂತ್ರಿ ಮಂಡಳದ ರಚನೆ ಕುರಿತು ನಮ್ಮಂತಹ ಶಾಸಕರು ಪಕ್ಷದ ಚೌಕಟ್ಟಿನಲ್ಲಿ ನಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ತಾವು ಆಲಿಸಬೇಕು ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಬೆಳವಣಿಗೆಗಳು, ನಿರ್ಧಾರಗಳು ಮತ್ತು ಪಕ್ಷದಲ್ಲಿನ ಚಟುವಟಿಕೆಗಳ ಕುರಿತಂತೆ ನಮ್ಮ ಭಾವನೆಗಳನ್ನು-ಸಲಹೆಗಳನ್ನು ನಿಮ್ಮ ಎದುರು ಹಂಚಿಕೊಳ್ಳಬೇಕಾಗಿದೆ. ನಾವು ಕೊಡುವ ಸಲಹೆಗಳು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ ಸರ್ಕಾರದ ಆಡಳಿತ ಸುಗಮವಾಗಿ ನಡೆಯುವಂತೆ ಆಗಲಿದೆ ಎಂದಿದ್ದಾರೆ.
ಸಭೆ ಕರೆಯುತ್ತಾರಾ ಕಟೀಲ್?
ಸರ್ಕಾರದ ಮುಖ್ಯ ಸಚೇತಕ, ಶಾಸಕ ವಿ. ಸುನಿಲ್ ಕುಮಾರ್ ಅವರು ಪತ್ರ ಬರೆದಿರುವುದರಿಂದ ಶಾಸಕರ ಸಭೆ ಕರೆಯುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅನಿವಾರ್ಯವಾಗಿದೆ. ಪಕ್ಷದ ಶಾಸಕರಿಗೆ ವಿಪ್ ಕೊಡುವುದು ಸೇರಿದಂತೆ ಶಿಸ್ತು ಬದ್ಧವಾಗಿ ಶಾಸಕರು ಇರುವಂತೆ ಮಾಡುವುದು ಮುಖ್ಯ ಸಚೇತಕರ ಕೆಲಸ. ಹೀಗಾಗಿ ಬಹುತೇಕ ಸಭೆ ಕರೆಯುವುದು ಖಚಿತ.
ಶಾಸಕರ ಸಭೆಯಲ್ಲಿ ಖಡಕ್ ಅಭಿಪ್ರಾಯಗಳು ವ್ಯಕ್ತವಾಗುವ ಸಾಧ್ಯತೆಗಳು ಇವೆ. ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಸಿಎಂ ಯಡಿಯೂರಪ್ಪ ಅವರು ಏಕಾಏಕಿ ದಿಢೀರ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ. ಇದು ಯಡಿಯೂರಪ್ಪ ಅವರ ದಿಢೀರ್ ನಿರ್ಧಾರಗಳಿಗೆ ಕಡಿವಾಣ ಹಾಕಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.