ಪರಪ್ಪನ ಅಗ್ರಹಾರದಲ್ಲಿ 'ಕನ್ನಡತಿ'ಯಾಗಿ ಬದಲಾದ ಶಶಿಕಲಾ
ಬೆಂಗಳೂರು, ಜನವರಿ 13: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ರಾಜಕಾರಣಿ ವಿ.ಕೆ ಶಶಿಕಲಾ 'ಕನ್ನಡತಿ'ಯಾಗಿ ಬದಲಾಗಿದ್ದಾರೆ. ಸಂಪೂರ್ಣವಾಗಿಯಲ್ಲ; ಸ್ವಲ್ಪ.
ತಮಿಳುನಾಡು ಬಿಟ್ಟು ಕನ್ನಡದ ನೆಲಕ್ಕೆ ಕಾಲಿಟ್ಟ ಅವರು ಕನ್ನಡ ಅಭ್ಯಾಸ ಶುರುವಿಟ್ಟುಕೊಂಡಿದ್ದಾರೆ. ಮೂಲಗಳ ಪ್ರಕಾರ ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ವಯಸ್ಕರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಶಿಕಲಾ ಕನ್ನಡ ಕಲಿಯುತ್ತಿದ್ದಾರೆ. ಕನ್ನಡ ಅಂಕಿಗಳು, ಓದು ಮತ್ತು ಉಚ್ಛಾರಣೆಯನ್ನು ಶಶಿಕಲಾ ಅಭ್ಯಾಸ ಮಾಡುತ್ತಿದ್ದಾರೆ.
ಕನ್ನಡ ಓದು ಮತ್ತು ಬರವಣಿಗೆ ಜತೆ ಕಂಪ್ಯೂಟರ್ ವಿಜ್ಞಾನವನ್ನೂ ಶಶಿಕಲಾ ಕಲಿಯುತ್ತಿದ್ದಾರೆ. ಶಶಿಕಲಾರಿಗೆ ಅವರ ಸೊಸೆ, ಜೈಲು ಸಹವಾಸಿ ಜೆ. ಇಳವರಿಸಿ ಕನ್ನಡ ತರಗತಿಗಳಲ್ಲಿ ಜತೆಯಾಗಿದ್ದಾರೆ. ಇಬ್ಬರೂ ಸೇರಿ ಕನ್ನಡ ಕಲಿಯುತ್ತಿದ್ದಾರೆ.
ಮೌಖಿಕ ಪರೀಕ್ಷೆಗಳಲ್ಲಿ ಶಶಿಕಲಾ ಉತ್ತಮವಾಗಿ ಎದುರಿಸಿಲ್ಲ ಎನ್ನಲಾಗಿದೆ. ಆದರೆ ಬರವಣಿಗೆ ವಿಚಾರಕ್ಕೆ ಬಂದಾಗ ಮಾತ್ರ ಆಕೆ ಪರೀಕ್ಷೆಗಳನ್ನು ಉತ್ತಮವಾಗಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇನ್ನು ಓದಿನ ಬಗ್ಗೆಯೂ ಶಶಿಕಲಾ ಹೆಚ್ಚಿನ ಆಸಕ್ತಿ ತಾಳಿದ್ದಾರೆ ಎಂಬುದು ಗೊತ್ತಾಗಿದೆ. ಪರಿಣಾಮ ಮಹಿಳೆಯರಿಗಾಗಿಯೇ ಹೊಸ ಗ್ರಂಥಾಲಯ ಪರಪ್ಪನ ಅಗ್ರಹಾರದಲ್ಲಿ ಆರಂಭವಾಗುತ್ತಿದೆ. ಇಲ್ಲಿಯವರಿಗೆ ಪುರುಷ ಖೈದಿಗಳಿಗೆ ಮಾತ್ರ ಜೈಲಿನಲ್ಲಿ ಲೈಬ್ರರಿ ಇತ್ತು. ಇದೀಗ ನೂತನ ಗ್ರಂಥಾಲಯ ಮಹಿಳೆಯರಿಗಾಗಿ ಆರಂಭವಾಗುತ್ತಿದೆ.
ಶಶಿಕಲಾ ಕನ್ನಡ ಕಲಿಯುತ್ತಿರುವುದು ಒಳ್ಳೆ ವಿಷಯವೇ. ಆದರೆ ತಮಿಳುನಾಡು ರಾಜಕೀಯದ ಮೇಲೆ ಶಶಿಕಲಾ ಹಿಡಿತ ಸಡಿಲವಾಗುತ್ತಿದ್ದು, ಕನ್ನಡ ಕಲಿತು ಕರ್ನಾಟಕದ ರಾಜಕಾರಣವೇ ಉತ್ತಮ ಅಂತ ಇಲ್ಲಿಯೇ ನೆಲೆ ನಿಂತರೆ ಮಾತ್ರ ಕಷ್ಟ.