ಸಿದ್ದಾರ್ಥ ಸಾವು; ಕಂಕನಾಡಿ ಪೊಲೀಸರಿಂದ ಐಟಿ ಇಲಾಖೆ ಮುಖ್ಯಸ್ಥರ ವಿಚಾರಣೆ?
ಬೆಂಗಳೂರು, ಆಗಸ್ಟ್ 01: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿಡೇ ಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ನಿಗೂಢ ನಾಪತ್ತೆ, ಸಾವಿನ ಪ್ರಕರಣದಿಂದ ಅನೇಕ ಪ್ರಶ್ನೆಗಳು ಎದ್ದಿವೆ. ಮುಖ್ಯವಾಗಿ "ಐಟಿ ಇಲಾಖೆಯಿಂದ ಸಿದ್ದಾರ್ಥರಿಗೆ ಕಿರುಕುಳವಾಗಿತ್ತೇ?" ಎಂಬ ಅಂಶವನ್ನು ಪರಿಗಣಿಸಿ ಕಂಕನಾಡಿ ಪೊಲೀಸರು ತನಿಖೆ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಜುಲೈ 29ರಂದು ಸಂಜೆ 7 ಗಂಟೆ ಸುಮಾರಿಗೆ ಮಂಗಳೂರು- ಉಳ್ಳಾಲ- ಕೇರಳಕ್ಕೆ ಸಂಪರ್ಕ ಹೊಂದಿಸುವ ಹೆದ್ದಾರಿಯಲ್ಲಿರುವ ನೇತ್ರಾವತಿ ನದಿ ಸೇತುವೆ ಬಳಿಯಿಂದ ಸಿದ್ದಾರ್ಥ ಕಾಣೆಯಾಗುತ್ತಿದ್ದಂತೆ ದಾಖಲಾಗಿದ್ದ ನಾಪತ್ತೆ ಪ್ರಕರಣ, 36 ಗಂಟೆಗಳ ನಂತರ ಹೊಯ್ಗೆ ಬಜಾರಿನಲ್ಲಿ ಶವ ಪತ್ತೆಯಾದ ಮೇಲೆ ಅಸಹಜ ಸಾವಿನ ಪ್ರಕರಣವಾಗಿ ದಾಖಲಾಗಿದೆ. ಸಿದ್ದಾರ್ಥ ಅವರ ಕಾರು ಚಾಲಕ ಬಸವರಾಜ್ ಪಾಟೀಲ ನೀಡಿದ ದೂರಿನ ಅನ್ವಯ ಸದ್ಯಕ್ಕೆ ತನಿಖೆ ಕೈಗೊಳ್ಳಲಾಗಿದೆ.
"ಒಂದು ತಂಡ ಸದ್ಯ ಬೆಂಗಳೂರಿನಲ್ಲಿದ್ದು, ಕಾಫಿ ಡೇ ಕೇಂದ್ರ ಕಚೇರಿಯಲ್ಲಿರುವ ಸಿದ್ದಾರ್ಥ ಅವರ ಬಳಕೆ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ. ಮತ್ತೊಂದು ತಂಡ ಮರಣೋತ್ತರ ಪರೀಕ್ಷಾ ವರದಿಯನ್ನು ಪರಿಗಣಿಸಿ ತನಿಖೆ ಕೈಗೊಳ್ಳಲಿದೆ" ಹಿರಿಯ ತನಿಖಾಧಿಕಾರಿ ಹೇಳಿದ್ದಾರೆ.
ಕಾಫಿ ಡೇ ಸಿದ್ದಾರ್ಥ ಸಾವಿನ ಪ್ರಕರಣ ತನಿಖೆಗೆ ಹಿರೇಮಠ ಆಗ್ರಹ
"ತನಿಖೆಯ ಭಾಗವಾಗಿ ಹಲವಾರು ಮಂದಿಯ ಹೇಳಿಕೆ ಪಡೆಯಲಾಗುತ್ತಿದೆ. ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ, ಮಾಹಿತಿ ಸಂಗ್ರಹಿಸಲಾಗುವುದು" ಎಂದರು.
ಸಿದ್ದಾರ್ಥ ಬರೆದಿದ್ದಾರೆ ಎನ್ನಲಾದ ಪತ್ರ
ಜುಲೈ 27ರಂದು ಬೋರ್ಡ್ ಸದಸ್ಯರಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಐಟಿ ಇಲಾಖೆಯಿಂದ ಆಗಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ ಎಂಬ ಅಂಶವನ್ನು ಪೊಲೀಸ್ ಅಧಿಕಾರಿಗಳು ಪರಿಗಣಿಸಿದ್ದು, ಇತ್ತೀಚೆಗೆ ತಮ್ಮ ಹುದ್ದೆಯಿಂದ ನಿವೃತ್ತರಾದ ಆದಾಯ ತೆರಿಗೆ ಡಿಜಿ ಬಾಲಕೃಷ್ಣನ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
2017ರಲ್ಲಿ ಸಿದ್ದಾರ್ಥ ಅವರ ಆಸ್ತಿ ಪಾಸ್ತಿ ಮೇಲೆ ಐಟಿ ದಾಳಿ ನಡೆದಾಗ ಬಾಲಕೃಷ್ಣನ್ ಅವರು ಐಟಿ ಇಲಾಖೆಯ ತನಿಖಾ ವಿಭಾಗದ ಪ್ರಧಾನ ನಿರ್ದೇಶಕರಾಗಿದ್ದರು. ಸುಮಾರು 650 ಕೋಟಿ ರು ಬೇನಾಮಿ ಆಸ್ತಿ ಇದೆ ಎಂದು ಪ್ರಕಟಿಸಲಾಗಿತ್ತು. ಸಿದ್ದಾರ್ಥ ಬರೆದ ಪತ್ರದಲ್ಲಿ ಬಾಲಕೃಷ್ಣನ್ ಅವರ ಬಗ್ಗೆ ಹೇಳಿದ್ದಾರೆ, ಕಾಲಕಾಲಕ್ಕೆ ವಿಚಾರಣೆಗೆ ಕರೆದು ಕಿರುಕುಳ ನೀಡಿದ್ದರು, ಇದರಿಂದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು ಎಂಬ ಸುದ್ದಿಯೂ ಇದೆ.
ಮೈಂಡ್ ಟ್ರೀಯಲ್ಲಿದ್ದ ಷೇರು ಮಾರಾಟದ ತೊಂದರೆ
ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ. ಭಾರತದಲ್ಲಿ ವಿಸ್ತೃತವಾದ ಕಾಫಿ ಮಳಿಗೆಯನ್ನು ವಿಸ್ತರಿಸುವಲ್ಲಿ ಸಂಸ್ಥೆಯ ಸ್ಥಾಪಕ ವಿಜಿ ಸಿದ್ದಾರ್ಥ ಅವರ ಪಾತ್ರ ದೊಡ್ಡದು.
1996ರಿಂದ ಇಲ್ಲಿ ತನಕ ಹಲವು ಏರಿಳಿತ ಕಂಡಿರುವ ಸ್ವದೇಶಿ ಬ್ರ್ಯಾಂಡ್ ಕೆಫೆ ಕಾಫಿ ಡೇ ಈಗ ಅಮೆರಿಕದ ಕೋಕ ಕೋಲಾ ಕಂಪನಿ ಪಾಲಾಗುವ ಮಾತುಕತೆ ನಡೆದಿತ್ತು. ಕಾಫಿ ಡೇ ಸಂಸ್ಥೆ ಆದಾಯ 1,777 ಕೋಟಿ ರು ಹಾಗೂ 2020ರ ವೇಳೆಗೆ 2250 ಕೋಟಿ ರು ಗಳಿಕೆ ಗುರಿ ಹೊಂದಿದ್ದರು. ಇತ್ತೀಚೆಗೆ ಸಿದ್ದಾರ್ಥ ಅವರು ಮೈಂಡ್ ಟ್ರೀಯಲ್ಲಿದ್ದ ತಮ್ಮ 20.3% ಷೇರುಗಳನ್ನು ಎಲ್ ಅಂಡ್ ಟಿ ಕಂಪನಿಗೆ ಮಾರಿದ್ದರು. ಆದರೆ, ಈ ಷೇರುಗಳನ್ನು ಮಾರಲು ಐಟಿ ಇಲಾಖೆ ತಡೆಯೊಡ್ಡಿತ್ತು. ಸಿದ್ದಾರ್ಥ ಅವರು ಬೇರೆ ಆಸ್ತಿ ಜಪ್ತಿ ಮಾಡಲು ಅನುವು ಮಾಡಿಕೊಟ್ಟ ಬಳಿಕ ಷೇರು ಮಾರಲು ಐಟಿ ಇಲಾಖೆ ಒಪ್ಪಿತ್ತು ಎಂಬ ವಾದವಿದೆ.
2017ರ ಐಟಿ ದಾಳಿ ಸಂದರ್ಭ
2017ರಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ವಿಜಿ ಸಿದ್ದಾರ್ಥ ಅವರ ಒಡೆತನದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದರು. ಬೆಂಗಳೂರು, ಮುಂಬೈ, ಚೆನ್ನೈ, ಚಿಕ್ಕಮಗಳೂರಿನಲ್ಲಿ ದಾಳಿ ನಡೆದಿತ್ತು.
ಸಿದ್ದಾರ್ಥ್ ಹಾಗೂ ಅವರ ಸಂಬಂಧಿಗಳಾದ ನಿತಿನ್ ಬಾಗ್ ಮನೆ, ರಾಜಾ ಬಾಗ್ ಮನೆ, ನಾಗವೇಣಿ ಹಾಗೂ ಗುರುಚರಣ್ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ದೂರು ಸಲ್ಲಿಸಲಾಗಿತ್ತು. ಸುಮಾರು 21 ಕಂಪನಿಗಳ ಹೆಸರು ಇದರಲ್ಲಿತ್ತು.
ಅರಣ್ಯ ಭೂಮಿ ಒತ್ತುವರಿ ಆರೋಪ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ 200 ಎಕರೆಗೂ ಅಧಿಕ ಸರಕಾರಿ ಜಮೀನನ್ನು ಸಿದ್ಧಾರ್ಥ ಅವರ ಎಬಿಸಿ ಕಂಪನಿ ಒತ್ತುವರಿ ಮಾಡಿದೆ. ಅರಣ್ಯ ಭೂಮಿ ಒತ್ತುವರಿ ಸರಿಪಡಿಸಿ ಎಂದು ಹಿರೇಮಠ್ ದೂರು ನೀಡಿದ್ದರು. ಈ ಬಗ್ಗೆ ಕೂಡಾ ತನಿಖೆ ನಡೆಸಲಾಗಿತ್ತು. ಸಿದ್ದಾರ್ಥ ಅವರ ಆಸ್ತಿ ಪಾಸ್ತಿ ಉಳಿಸಲಿಕ್ಕೆಂದೇ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಬಿಜೆಪಿ ಸೇರಿದ್ದು ಎಂದು ಕೂಡಾ ಹಿರೇಮಠ್ ಆರೋಪಿಸಿದ್ದರು.