ಉತ್ತರ ಕರ್ನಾಟಕ ಪ್ರತ್ಯೇಕತೆ ಬೇಡ, ಅಭಿವೃದ್ಧಿ ಮಾಡಿ: ಕರವೇ
ಬೆಂಗಳೂರು, ಆಗಸ್ಟ್ 2: 'ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದಾಗಿ ಆ ಭಾಗವು ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ' ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಆರೋಪಿಸಿದರು.
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಸುವ ಬೇಡಿಕೆಯನ್ನು ವಿರೋಧಿಸಿ ಹಾಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ನಾರಾಯಣ ಗೌಡ ನೇತೃತ್ವದಲ್ಲಿ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಪರ-ವಿರೋಧದ ಘೋಷಣೆ
ಬೇರೆ ಭಾಗದ ಒಬ್ಬ ಶಾಸಕ ತನ್ನ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತೆಗೆದುಕೊಂಡು ಹೋಗಿ ಅಭಿವೃದ್ಧಿ ಮಾಡಿಸುತ್ತಾನೆ ಎಂದರೆ, ಉತ್ತರ ಕರ್ನಾಟಕದ ಶಾಸಕರಿಗೆ ಏಕೆ ಸಾಧ್ಯವಾಗಿಲ್ಲ ಎಂದು ನಾರಾಯಣ ಗೌಡ ಪ್ರಶ್ನಿಸಿದರು.
ರಾಜ್ಯ ಪ್ರತ್ಯೇಕತೆ ಕೂಗು: ನಮಗೀಗ ರಾಜ್ಯ ಪುನರ್ವಿಂಗಡಣೆ ಆಯೋಗ ಬೇಕಿದೆ
ಪ್ರತಿಭಟನೆ ಬಳಿಕ ನಾರಾಯಣ ಗೌಡ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರತ್ಯೇಕ ರಾಜ್ಯಕ್ಕೆ ಅವಕಾಶ ನೀಡದಂತೆ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ ಸಲ್ಲಿಸಿದರು
ಹಠ ಕಟ್ಟಿ ಅನುದಾನ ಪಡೆಯಲಿ
ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬೇಕು, ಕೊಡಿ ಎಂದು ಸರ್ಕಾರದ ಮುಂದೆ ಹಟ ಮಾಡಿ ಸಾವಿರಾರು ಕೋಟಿ ಅನುದಾನ ತೆಗೆದುಕೊಂಡು ಹೋಗಲು ಏಕೆ ಆಗಿಲ್ಲ ಎನ್ನುವುದು ನನ್ನ ಪ್ರಶ್ನೆ.
ಬೇಜವಾಬ್ದಾರಿತನ ಬಿಟ್ಟು ಶಾಸನ ಸಭೆಯಲ್ಲಿ ಸರ್ಕಾರದ ಮುಂದೆ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಪ್ರತಿಭಟಿಸಬೇಕು. ಆ ವಿಚಾರದಲ್ಲಿ ಹೋರಾಟ ನಡೆಸಬೇಕು. ಅಭಿವೃದ್ಧಿ ವಿಚಾರದಲ್ಲಿ ಹೋರಾಟ, ಚಳವಳಿ ನಡೆಸಿ ಸರ್ಕಾರವನ್ನು ಎಚ್ಚರಿಸೋಣ. ಅದು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಯಾರಿಂದಲೂ ಬರುವುದು ಬೇಡ ಎಂದು ನಾರಾಯಣ ಗೌಡ ಹೇಳಿದರು.
ಕರ್ನಾಟಕವೆಂದರೆ ಬೆಂಗಳೂರು, ಮೈಸೂರು ಅಲ್ಲ
ರಾಜ್ಯ ಸರ್ಕಾರಕ್ಕೆ ಹೇಳ್ತೀವಿ ಬೆಂಗಳೂರು, ಮೈಸೂರು ಅಥವಾ ಮಂಡ್ಯವೇ ಕರ್ನಾಟಕ ಅಲ್ಲ. ಅಖಂಡವಾದ ಕರ್ನಾಟಕದ ಕನಸು ನಮ್ಮ ಹಿರಿಯರದ್ದು. ಹರಿದು ಹಂಚಿಹೋಗಿದ್ದ ನಾಡು ಒಂದಾಗಬೇಕು ಎಂದು ನಮ್ಮ ನಾಡಿನ ಹಿರಿಯರು ಮಾಡಿದ ತ್ಯಾಗ ಬಲಿದಾನಗಳಿಂದ ಏಕೀಕರಣ ಆಯ್ತು.
ಭಾವನೆ ಕೆರಳಿಸುವುದು ಬೇಡ
ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅನುದಾನ ಹಂಚಿಕೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದು ಬೇಡ. ಮಲತಾಯಿ ಧೋರಣೆ ಅನುಸರಿಸುವುದು ಬೇಡ. ಸಂಪೂರ್ಣ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಬೇಕು.
ಉತ್ತರ ಕರ್ನಾಟಕದ ಅಭಿವೃದ್ಧಿ ಸೂಕ್ಷ್ಮ ವಿಚಾರ. ಮುಖ್ಯಮಂತ್ರಿಗಳು ಅಥವಾ ಸರ್ಕಾರದ ಪ್ರತಿನಿಧಿಗಳು ಯಾರ ಭಾವನೆಗಳಿಗೂ ಕೆರಳಿಸುವ ರೀತಿಯಲ್ಲಿ ಇದರ ಬಗ್ಗೆ ಮಾತನಾಡಬಾರದು. ನಮ್ಮ ನಿಯೋಗ ಸಿಎಂ ಭೇಟಿ ಮಾಡಿ ಮನವಿ ಮಾಡಲಿದೆ.
ಪ್ರತ್ಯೇಕತೆ ಮಾನದಂಡ ಅಲ್ಲ
ಪ್ರತ್ಯೇಕ ರಾಜ್ಯ ನಿರ್ಮಾಣ ಅಭಿವೃದ್ಧಿಯ ಮಾನದಂಡ ಅಲ್ಲ. ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲ ಒಟ್ಟಾಗಿ ಹೋರಾಟ ಮಾಡೋಣ. ವಿಧಾನಸಭೆಗೆ ಮುತ್ತಿಗೆ ಹಾಕೋಣ 30 ಜಿಲ್ಲಾ ಕೇಂದ್ರಗಳಲ್ಲಿಯೂ ಚಳವಳಿ ನಡೆಯಲಿ. ರಾಜ್ಯವನ್ನು ವಿಭಜನೆ ಮಾಡುವ ಮಾತು ಆಡಬಾರದು. ಅಖಂಡ ಕರ್ನಾಟಕ ಚೆನ್ನಾಗಿರಬೇಕು. ಅಖಂಡ ಕರ್ನಾಟಕ ಅಭಿವೃದ್ಧಿ ನಮ್ಮ ಹಿರಿಯ ಕನಸು.
ನಂಜುಂಡಪ್ಪ ವರದಿ ಜಾರಿಗೆ ತರಲಿ
ಅಖಂಡ ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿ ಆಗಲು ಡಾ. ನಂಜುಂಡಪ್ಪ ವರದಿಯನ್ನು ಅನುಷ್ಠಾನಗೊಳಿಸಲೇಬೇಕು.
ನಂಜುಡಪ್ಪ ವರದಿ ಜಾರಿಯಾದರೆ ಉತ್ತರ ಕರ್ನಾಟಕ ಅಭಿವೃದ್ಧಿಯ ಕನಸು ನನಸಾಗುತ್ತದೆ. ಹಾಗಾಗಿ 30 ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆಸಲಿದ್ದೇವೆ.
ಯಾವ ಪ್ರದೇಶ ಅಭಿವೃದ್ಧಿ ಆಗಿದೆ, ಯಾವುದು ಆಗಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು.
ಉದ್ಯಮಗಳು ಬರಲಿ
ಮೈಸೂರು, ಬೆಂಗಳೂರು ಮುಂತಾದೆಡೆ ಇರುವ ಉದ್ಯಮಗಳನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಗೆ ಕೊಂಡೊಯ್ಯಬೇಕು. ಆ ಭಾಗಗಳಲ್ಲಿ ನೀರಾವರಿ ಯೋಜನೆಗಳು ಚುರುಕುಗೊಳ್ಳಬೇಕು. ರಸ್ತೆ, ಆಸ್ಪತ್ರೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರ ತಕ್ಷಣ ಮಾಡಬೇಕು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಎನ್ನುವ ವಿಚಾರ ಬರಬಾರದು ಎನ್ನುವುದಾದರೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕರ್ನಾಟಕದ ಜನತೆ ಉತ್ತರ ಕರ್ನಾಟಕದ ಪರವಾಗಿ ಅಭಿವೃದ್ಧಿಯ ಪರವಾಗಿ ಇದ್ದೇವೆ.
ಒಂದೇ ಇರಬೇಕು ಎನ್ನುವುದು ಆಶಯ
ಅಖಂಡ ಕರ್ನಾಟಕದ ಒಂದೇ ಇರಬೇಕು ಎಂಬುದು ನಮ್ಮ ಆಶಯ. ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಮುಖ್ಯಮಂತ್ರಿ ಸರಿಪಡಿಸುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ 6.72 ಕೋಟಿ ಜನರಿದ್ದಾರೆ. ಒಂದು ಹೋರಾಟ ಮಾಡುವಾಗ ತಾರ್ಕಿಕ ಭಿನ್ನಾಭಿಪ್ರಾಯ ಬರುತ್ತದೆ. ಎಲ್ಲರನ್ನೂ ಕರೆದು ಮಾತನಾಡಬೇಕು. ಸಮಾನತೆ, ಬ್ರಾತೃತ್ವ ಮುಖ್ಯ. ಆದರೆ, ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯ ಬಸವರಾಜ ದಿಣ್ಣೂರ್ ಹೇಳಿದರು.
ಧರಣಿ ಮಾಡುತ್ತೇವೆ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಬಂದ್ಗೆ ಕರೆ ನೀಡಿದ್ದರೂ ಜನರಿಗೆ ತೊಂದರೆಯಾಗುವಂತೆ ಬಂದ್ ಮಾಡಿಲ್ಲ.
ಸುವರ್ಣ ಸೌಧದಲ್ಲಿ ಆ ಭಾಗದ ಎಲ್ಲ ಶಾಸಕರು, ಮುಖಂಡರು ಮತ್ತು ಮಠಾಧೀಶರ ಸಭೆ ಕರೆದು ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ಆಕ್ರೋಶ ಈ ಭಾಗದ 96 ಶಾಸಕರು, ಹಿಂದೆ ಆಯ್ಕೆಯಾದ ಜನಪ್ರತಿನಿಧಿಗಳ ಮೇಲೆ.
ಈ ಹೋರಾಟಕ್ಕೆ ಬಾರದ ಅವರ ಮನೆ ಮುಂದ ಧರಣಿ ಮಾಡ್ತೀವಿ. ಇಷ್ಟು ದಿನ ನಡೆದು ಹೋಯಿತು. ಸಾಂಕೇತಿಕ ಧರಣಿ ಮಾಡಿದ್ದೀವಿ. ಮುಖ್ಯಮಂತ್ರಿಗಳಿಗೆ ಮತ್ತೆ ಮನವಿ ಕೊಟ್ಟು, ಆ ಭಾಗಕ್ಕೆ ಬಂದು ನಮ್ಮ ಮನವಿ ಆಲಿಸಬೇಕೆಂದು ಕೇಳುತ್ತೇವೆ ಎಂದರು.
ಪ್ರತ್ಯೇಕ ಎಂಬ ಪದ ಬೇಡ
ಪ್ರತ್ಯೇಕ ಎಂಬ ಶಬ್ದ ಬಳಸಬೇಡಿ. ಅದು ನವ ಕರ್ನಾಟಕ. ಅದರಲ್ಲಿ ಅಖಂಡತೆ ಇದೆ, ಇಬ್ಭಾಗ ಬೇಡ.
ಈ ಸಂಬಂಧ ಮುಖ್ಯಮಂತ್ರಿಗಳು ಸಮಿತಿ ನೇಮಕ ಮಾಡಿದ್ದನ್ನು ಸ್ವಾಗತಿಸುತ್ತೇವೆ. 13 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ 15 ದಿನದಲ್ಲಿ ಅದಕ್ಕೊಂದು ರೂಪು ನೀಡುವ ಆಶಯವಿದೆ. ಮುಖ್ಯಮಂತ್ರಿಗಳು ರಾಜ್ಯ ಮಾಡಿ ಎಂದರೆ ದುಡ್ಡು ಎಲ್ಲಿಂದ ತರಬೇಕು ಎಂದು ಕೇಳುತ್ತಿದ್ದಾರೆ. ನಮ್ಮ ಹುಡುಗರು ಶಾಣ್ಯಾ ಇದ್ದಾರೆ. ಮೂರು ಕೋಟಿ ಜನ ಇದ್ದಾರೆ. ಜನರಿಂದ ಹಣ ಸಂಗ್ರಹಿಸುವುದು ಕಷ್ಟವಾಗುವುದಿಲ್ಲ ಎಂದರು.
15 ಟಿಎಂಸಿ ಕಣ್ಣೀರು
ಮಹದಾಯಿ ಸಣ್ಣ ಸಮಸ್ಯೆ. ಅದರಿಂದ ಸಿಗುವುದು 7.50 ಟಿಂಎಸಿ ನೀರು. ಆದರೆ ಅದಕ್ಕಾಗಿ 3.17 ಕೋಟಿ ಜನರ ಪರವಾಗಿ ಅಲ್ಲಿ ಕುಳಿತು ಕಣ್ಣೀರು ಹಾಕಿದ್ದಾರಲ್ಲ, ಆ ಕಣ್ಣೀರೇ 15 ಟಿಎಂಸಿ ಹೋಗೈತಿ.
ಈಗೇನೋ ಪುಣ್ಯಕ್ಕೆ ಮಳೆ ಬಂದಿದೆ. ನಮ್ಮ ಮುಖ್ಯಮಂತ್ರಿ ಇಲ್ಲಿ ಕೃಷ್ಣರಾಜ ಸಾಗರಕ್ಕೆ ಬಾಗಿನ ಅರ್ಪಿಸುತ್ತಾರೆ. ಅಲ್ಲಿ ಆಲಮಟ್ಟಿ ತುಂಬಿದರೂ ಯಾರೂ ಕ್ಯಾರೇ ಅನ್ನುತ್ತಿಲ್ಲ, ಯಾರೂ ಬರಲಿಲ್ಲ.