ಚಾರಣ ಪ್ರಿಯರನ್ನು ಸ್ವಾಗತಿಸುತ್ತಿದೆ ಉತ್ತರಕನ್ನಡ
ಕಾರವಾರ, ಸೆಪ್ಟೆಂಬರ್ 22: ನಿಸರ್ಗ ಪ್ರೇಮಿಗಳ, ಚಾರಣಿಗರ ಸ್ವರ್ಗವೇ ಆದ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಮೈಲಿಗಲ್ಲು ನಿರ್ಮಿಸಿದೆ. ಇಲ್ಲಿನ ಕಾರವಾರ ತಾಲೂಕಿನ ಕೋಡಿಬಾಗದ ಕಾಳಿ ನದಿ ತಟದಲ್ಲಿ ಉದ್ಯಾನವನ ನಡೆಸುತ್ತಿರುವ ಮಂಗಳೂರಿನ ಲೀಸರ್ ರೂಟ್ಸ್ ಸಂಸ್ಥೆಯು ಪ್ರವಾಸೋದ್ಯಮ ಚಟುವಟಿಕೆಯ ಭಾಗವಾದ ಚಾರಣ (ಟ್ರೆಕ್ಕಿಂಗ್) ವನ್ನು ಇತ್ತೀಚೆಗೆ ಪ್ರಾರಂಭಿಸಿದೆ.
ಈಗಾಗಲೇ ಅನೇಕ ಜಲಸಾಹಸ ಕ್ರೀಡೆಗಳನ್ನು ಪ್ರಾರಂಭಿಸಿ ಜನಮನ್ನಣೆ ಗಳಿಸಿರುವ ಸಂಸ್ಥೆ, ಈಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಚಾರಣ ಪ್ರವಾಸವನ್ನು ಪರಿಚಯಿಸುವ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಜಿಲ್ಲೆಯತ್ತ ಬರಮಾಡಿಕೊಳ್ಳುತ್ತಿದೆ.
ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಜೋಯಿಡಾ ಹೊರಕ್ಕೆ
'ಉತ್ತರಕನ್ನಡವು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ಜಿಲ್ಲೆ. ಅದರಲ್ಲಿಯೂ ಕಾರವಾರವಂತೂ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ನಗರ. ಇಲ್ಲಿನ ಕಡಲತೀರ, ಕಾಳಿ ನದಿ, ಪ್ರಕೃತಿ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತವೆ. ಅಂತೆಯೇ ಇಲ್ಲಿನ ಅನೇಕ ಹಳ್ಳಿಗಳು, ಬೆಟ್ಟ- ಗುಡ್ಡಗಳು ಚಾರಣಕ್ಕೆ ಅನುಕೂಲಕರ ವ್ಯವಸ್ಥೆಗಳನ್ನು ಹೊಂದಿವೆ. ನಗರದ ದಕ್ಷಿಣ ಭಾಗದ, ಸಮುದ್ರ ಮಟ್ಟದಿಂದ 800 ಮೀ. ಎತ್ತರದಲ್ಲಿರುವ ಗುಡ್ಡಳ್ಳಿಯು ಅದರಲ್ಲಿ ಪ್ರಮುಖ ಚಾರಣ ಸ್ಥಳ. ನಗರದ ಹೊರವಲಯ ಅರಗಾದಿಂದ 7.5 ಕಿ.ಮೀ. ಕ್ರಮಿಸಿದರೆ ಸಿಗುವ ಈ ಗ್ರಾಮ ಅದ್ಭುತ ಹಾಗೂ ಆಕರ್ಷಿಣೀಯ' ಎನ್ನುತ್ತಾರೆ ಲೀಸರ್ ರೂಟ್ಸ್ ಸಂಸ್ಥೆಯ ಮಾಲೀಕ ರೋಶನ್ ಪಿಂಟೊ.
ಬಣ್ಣ ಬದಲಿಸುತ್ತಿದ್ದ ಕಾರವಾರ ಕಡಲ ತೀರ ಸಹಜ ಸ್ಥಿತಿಗೆ
'ಅಲ್ಲಿನ ಬಂಡೆಗಲ್ಲಿನ ಬಳಿ ನಿಂತು ನೋಡಿದರೆ ಕಾರವಾರ ನಗರ, ಕಾಳಿ ನದಿ, ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ, ಸೀಬರ್ಡ್ ನೌಕಾನೆಲೆ, ಬೈತ್ ಖೋಲ್ ಬಂದರು, ಬೇಲೆಕೇರಿ ಬಂದರು ಪ್ರದೇಶ, ಕೊಂಕಣ ರೈಲ್ವೆ ಮಾರ್ಗಗಳು ಕಣ್ಣಿಗೆ ಮುದ ನೀಡುತ್ತವೆ. ರವೀಂದ್ರನಾಥ ಟ್ಯಾಗೋರ್ ಕಡಲತೀರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ, ನಗರಸಭೆ, ಜಿಲ್ಲಾಡಳಿತದ ಸಹಕಾರದಿಂದ ಇದು ಸಾಧ್ಯವಾಗಿದೆ' ಎಂದು ಹೇಳುತ್ತಾರೆ.
ಬೆಂಗಳೂರಿನಿಂದ ಮೊದಲ ತಂಡ
ಅಧಿಕೃತವಾಗಿ ಚಾಲನೆಗೊಂಡ ಗುಡ್ಡಳ್ಳಿ ಚಾರಣಕ್ಕೆ ಮೊದಲ ತಂಡ ಬೆಂಗಳೂರಿನ 'ಮ್ಯಾರಥಾನ್ ರನ್ನರ್ಸ್ 360' ಹೊರಟಿತು. ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡ ಸುಮಾರು 21 ಮಂದಿಯ ಈ ತಂಡ, ಅರಗಾದಿಂದ ಹೊರಟು ಸುಮಾರು ಮೂರೂವರೆ ಗಂಟೆಯ ಬಳಿಕ ಅಲ್ಲಿನ ಶಿಖರ ತಲುಪಿತ್ತು. ಮಧ್ಯದಲ್ಲಿ ವಿಶ್ರಾಂತಿ ಪಡೆದು, ಉಪಹಾರ ಸೇವಿಸಿ ಪ್ರಯಾಣ ಆರಂಭಿಸಿತ್ತು. ತಂಡ ರಾತ್ರಿ ಶಿಬಿರ (ಕ್ಯಾಂಪ್) ಹೂಡಿ, ಅಲ್ಲಿಯೇ ನೆಲೆಯೂರಿತ್ತು.
ಸಾಂಪ್ರದಾಯಿಕ ಹಳ್ಳಿ ಊಟ
ರಾತ್ರಿ ಊಟಕ್ಕೆ ಕರಾವಳಿಗರ ಮೀನು ಊಟದ ಜತೆಗೆ, ವಿಶೇಷ ವಿವಿಧ ಸಾಂಪ್ರದಾಯಿಕ ಹಳ್ಳಿಯ ಊಟವನ್ನು ನೀಡಲಾಗಿತ್ತು. ಜತೆಗೆ ಗ್ರಾಮದ ಕಲಾವಿದರ ಗ್ರಾಮೀಣ ನೃತ್ಯಗಳಾದ ಹಾಲಕ್ಕಿ ಕುಣಿತ, ಸುಗ್ಗಿ ಕುಣಿತ, ಜನಪದ ಹಾಡು ಚಾರಣ ಸಾಹಸಿಗರನ್ನು ರಂಜಿಸಿತು.
ಹಾಲಕ್ಕಿಗರ ಗ್ರಾಮ ಗುಡ್ಡಳ್ಳಿ
ಗುಡ್ಡಳ್ಳಿ ಹಾಲಕ್ಕಿ ಜನಸಮುದಾಯ ವಾಸಿಸುವ ಒಂದು ಪುಟ್ಟ ಹಳ್ಳಿ. ಸುಮಾರು 30 ಮನೆಗಳನ್ನು ಹೊಂದಿರುವ ಈ ಗ್ರಾಮ ಹಚ್ಚ ಹಸಿರಿನಿಂದ ಕೂಡಿದ ಸಾಲು ಸಾಲು ಮರ, ಗಿಡ, ಪೊದೆಗಳಿಂದ ಕೂಡಿದೆ. ಇಲ್ಲಿನ ನಿಸರ್ಗದ ನೈಜ ಸೌಂದರ್ಯಕ್ಕೆ ಮಾರುಹೋಗದವರೆ ಇಲ್ಲ. ಈ ಗ್ರಾಮದ ತುತ್ತ ತುದಿಯಲ್ಲಿ ಪೊಲೀಸ್ ಇಲಾಖೆಯ ಸಂವಹನ ಕೇಂದ್ರ ಕೂಡ ಇದೆ.
ಬ್ರಿಟೀಷರ ಕಾಲದ ಕುರುಹು
ಬ್ರಿಟೀಷರ ಕಾಲದಲ್ಲಿಯೂ ಕೂಡ ಇಲ್ಲಿ ವಾಸಿಸುತ್ತಿದ್ದ ಬಗ್ಗೆ ಕುರುಹುಗಳಿವೆ. ಇದು ಅಂದಿನ ಸುರಕ್ಷಾ ತಾಣ ಕೂಡ ಆಗಿತ್ತು ಎಂದು ಇಲ್ಲಿನ ಗ್ರಾಮಸ್ಥರ ಹೇಳಿಕೆ. ಇಲ್ಲಿನ ಬಂಡೆಗಲ್ಲಿನ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳಲು ಹೆಚ್ಚಿನ ಮಂದಿ ಕಾತರ ಪಡುತ್ತಾರೆ. ಆದರೆ ಎಚ್ಚರ ತಪ್ಪಿದರೆ ಇದು ಅಪಾಯಕಾರಿ ಜಾಗ ಕೂಡ ಹೌದು.