ಸ್ಥಳೀಯ ಸಂಸ್ಥೆ ಚುನಾವಣೆ: ಮೇ 23ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು ಮೇ 17. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧದ ಅರ್ಜಿಗಳ ವಿಸ್ತೃತ ವಿಚಾರಣೆಗೆ ಹೈಕೋರ್ಟ್ ಒಲವು ತೋರಿದೆ.
ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್, ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಾವುದೇ ನೆಪ ಹೇಳದೆ ತಕ್ಷಣ ನಡೆಸಬೇಕೆಂದು ಕಟ್ಟಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ಕೋರಿ ಚುನಾವಣಾ ಆಯೋಗದ ಮೆಮೋ ಸಲ್ಲಿಸಿತ್ತು.
ಆ ಹಿನ್ನೆಲೆಯಲ್ಲಿ ಇಂದು ನ್ಯಾ.ಎಸ್.ಜಿ.ಪಂಡಿತ್ ಮತ್ತು ನ್ಯಾ.ಎಂ.ಜಿ.ಉಮಾ ಅವರಿದ್ದ ರಜಾಕಾಲದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು.
ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ, ಸುಪ್ರೀಂ ಕೋರ್ಟ್ ಸೂಚಿಸಿದ ಮೇಲೆ ಮತ್ತೇಕೆ ಮೆಮೋ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿತು.
ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿ, ಚುನಾವಣಾ ಆಯೋಗದ ಅಧಿಕಾರವನ್ನು ಸರ್ಕಾರ ಹಿಂಪಡೆದಿದೆ.ಆ ಬಗ್ಗೆ ಹೈಕೋರ್ಟ್ ನಿಂದ ಸೂಕ್ತ ನಿರ್ದೇಶನ ಅಗತ್ಯವಿದೆ. ಎಂದರು.
ಆಗ ನ್ಯಾಯಪೀಠ, ಹಾಗಿದ್ದರೆ ಸಮಗ್ರ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು, ಬೇಸಿಗೆ ರಜೆ ಮುಗಿದು ಕೋರ್ಟ್ ಕಲಾಪ ಪುನಾರಂಭವಾಗುವ ದಿನ ಅಂದರೆ ಮೇ.23 ಕ್ಕೆ ಮುಂದೂಡಿತು.
ಆಯೋಗದ ಮನವಿ ಏನು?
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಿ, ಬಾಕಿ ಇರುವ ಎಲ್ಲ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ನಿರ್ದೇಶನ ನೀಡಿದೆ. ಅದರಂತೆ, ರಾಜ್ಯದಲ್ಲಿ ಬಾಕಿ ಇರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸಬೇಕಾಗಿದೆ.
ಈಗಾಗಲೇ ಚುನಾವಣೆ ಸಾಕಷ್ಟು ವಿಳಂಬವಾಗಿದೆ. ಈ ಕುರಿತ ಚುನಾವಣಾ ಆಯೋಗದ ಅರ್ಜಿ ವಿಚಾರಣಾ ಹಂತದಲ್ಲಿ ಬಾಕಿ ಇದೆ. ಹಾಗಾಗಿ ಸುಪ್ರೀಂಕೋರ್ಟ್ ತೀರ್ಪಿನಿಂದ ತುರ್ತು ಸ್ಥಿತಿ ಎದುರಾಗಿದೆ ಎಂದು ಚುನಾವಣಾ ಆಯೋಗ ಮೆಮೋದಲ್ಲಿ ನ್ಯಾಯಪೀಠಕ್ಕೆ ತಿಳಿಸಿದೆ.
ಆಯೋಗದ ಸಿದ್ಧತೆಗೆ ಸರ್ಕಾರ ಬ್ರೇಕ್:
ರಾಜ್ಯ ಚುನಾವಣಾ ಆಯೋಗ ಕಳೆದ ವರ್ಷ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ರಾಜ್ಯದ ಜಿ.ಪಂ ಹಾಗೂ ತಾ.ಪಂಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿತ್ತು. ಅದಕ್ಕಾಗಿ ಚುನಾವಣಾ ಆಯೋಗ ಕ್ಷೇತ್ರ ಪುನರ್ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿಯನ್ನೂ ಸಹ ಪ್ರಕಟ ಮಾಡಿತ್ತು ಹಾಗೂ ಮೀಸಲು ನಿಗದಿಯ ಕರಡು ಸಹ ಪ್ರಕಟಿಸಲಾಗಿತ್ತು. ಇನ್ನೇನು ದಿನಾಂಕ ಘೋಷಣೆ ಮಾಡಬೇಕೆನ್ನುವಷ್ಟರಲ್ಲಿ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲು ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಅದನ್ನು
ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಆ ಅರ್ಜಿ ಇನ್ನೂ ವಿಚಾರಣಾ ಹಂತದಲ್ಲಿದೆ.