ಅನಂತಮೂರ್ತಿ ನಿಧನಕ್ಕೆ ಗಣ್ಯರಿಂದ ಸಂತಾಪ
ಬೆಂಗಳೂರು, ಆ.23 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ನಿಧನಕ್ಕೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಲವಾರು ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅನಂತಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ದೇಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ರಾಷ್ಟ್ರಪತಿ ಟ್ವಿಟ್ ಮಾಡಿದ್ದಾರೆ. [ಸಾಹಿತಿ ಯು.ಆರ್ ಅನಂತಮೂರ್ತಿ ಅಸ್ತಂಗತ]
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅನಂತಮೂರ್ತಿ ನಿಧನ ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ. ಅನಂತಮೂರ್ತಿ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಟ್ವಿಟ್ ಮಾಡಿದ್ದಾರೆ. [ಕನ್ನಡದ 'ಆಚಾರ್ಯ' ಅನಂತಮೂರ್ತಿ ವ್ಯಕ್ತಿಚಿತ್ರ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಸಾಹಿತಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಪ್ರತಿಪಾದಿಸಿದ ಅನಂತಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದರು. ತಮ್ಮ ಸ್ಪಷ್ಟ ಅಭಿಪ್ರಾಯ ಹಾಗೂ ದಿಟ್ಟ ನಿಲುವು ಪ್ರಕಟಿಸುವಲ್ಲಿ ಅವರು ಎಂದೂ ಹಿಂಜರಿಯುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಗಣ್ಯರ ಸಂತಾಪಗಳು [ಅಂತ್ಯಕ್ರಿಯೆ ಕುರಿತ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ]
|
ಸಂತಾಪ ಸೂಚಿಸಿದ ರಾಷ್ಟ್ರಪತಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅನಂತಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
|
ಪ್ರಧಾನಿ ನರೇಂದ್ರ ಮೋದಿಯಿಂದ ಟ್ವಿಟ್
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಯಡಿಯೂರಪ್ಪ ಸಂತಾಪ
ಯುಆರ್ ಅನಂತಮೂರ್ತಿ ಅವರ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದ ಡಾ.ಅನಂತಮೂರ್ತಿ ಅವರು ರಾಜ್ಯದ ಕೀರ್ತಿ ಹೆಚ್ಚಿಸಿದ್ದರು. ನಾಡಿನ ಜನ ಮನ್ನಣೆ ಪಡೆದಿದ್ದು, ಜ್ಞಾನಪೀಠ ಪ್ರಶಸ್ತಿಯಿಂದ ಕನ್ನಡ ಸಾಹಿತ್ಯ ಲೋಕ ವಿಸ್ತಾರಕ್ಕೆ ಕಾರಣರಾಗಿದ್ದರು ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಿಂದ ಸಂತಾಪ
ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಯುಆರ್ ಅನಂತಮೂರ್ತಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದು, ಕಾದಂಬರಿ, ಲೇಖನಗಳ ಮೂಲಕ ಹೊಸ ಚಿಂತನೆ ಹುಟ್ಟು ಹಾಕುವಂತಹ ದೃಷ್ಟಿಕೋನ ಹೊಂದಿದ್ದ ಅನಂತಮೂರ್ತಿಯವರ ಬರಹ ಸಮಾಜದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದವು. ಸರಳ ವ್ಯಕ್ತಿತ್ವದ ಸಜ್ಜನ ವ್ಯಕ್ತಿಯಾಗಿದ್ದ ಅವರು ವಿರೋಧಿಗಳನ್ನು ದ್ವೇಷಿಸುತ್ತಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.
ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅನಂತಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅನಂತಮೂರ್ತಿ ಅವರು ಧರ್ಮಸ್ಥಳದ ನಾನಾ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಮೂಢನಂಬಿಕೆಗಳನ್ನು ಹಾಗೂ ಕಂದಾಚಾರಗಳನ್ನು ಕಟುವಾಗಿ ಟೀಕಿಸಿ ವಿರೋಧಿಸುತ್ತಿದ್ದರು. ಅವರು ಸ್ವತಂತ್ರ ಚಿಂತಕರಾಗಿದ್ದು, ವೈಜ್ಞಾನಿಕ ಮನೋಭಾವಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಯಾವುದೇ ಒತ್ತಡ ಹಾಗೂ ಮುಲಾಜಿಗೆ ಒಳಗಾಗದೆ ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ವ್ಯಕ್ತಪಡಿಸುತ್ತಿದ್ದರು ಎಂದು ಹೆಗ್ಗೆಡೆ ಅವರು ಹೇಳಿದ್ದಾರೆ.
ಪೇಜಾವರ ಶ್ರೀಗಳಿಂದ ಸಂತಾಪ
ಕನ್ನಡ ಸಾಹಿತ್ಯವನ್ನು ತಮ್ಮ ಕೃತಿಗಳಿಂದ ಶ್ರೀಮಂತಗೊಳಿಸಿದ ಹಾಗೂ ಸಮೃದ್ಧಗೊಳಿಸಿದ ಮಹಾನ್ ಸಾಹಿತಿ ಅನಂತಮೂರ್ತಿ ಅವರ ಅನಿರೀಕ್ಷಿತ ನಿಧನದಿಂದ ನಮಗೆ ಅತ್ಯಂತ ಆಘಾತವಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಎಷ್ಟೋ ವಿಷಯಗಳಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೂ ನಮಗಂತೂ ಅವರು ಆತ್ಮೀಯರೂ, ಅತ್ಯಂತ ಆತ್ಮೀಯ ಅಭಿಮಾನಿಗಳೂ ಆಗಿದ್ದರು ಎಂದು ಶ್ರೀಗಳು ನೆನಪು ಮಾಡಿಕೊಂಡಿದ್ದಾರೆ.
ಎಸ್.ಎಂ.ಕೃಷ್ಣಾ ಸಂತಾಪ
ಅನಂತಮೂರ್ತಿ ಅವರ ನಿಧನಕ್ಕೆ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸಂತಾಪ ಸೂಚಿಸಿದ್ದಾರೆ. ವಿಚಾರ ಕ್ರಾಂತಿಗೆ ಹೆಸರಾಗಿದ್ದ ಜ್ಞಾನಪೀಠ ಪುರಸ್ಕೃತರು ವೈಚಾರಿಕ ದೃಷ್ಟಿಕೋನದ ಸಾಹಿತಿಯೂ ಆಗಿದ್ದರು. ಕನ್ನಡದ ಪ್ರಜ್ಞೆ ಮತ್ತು ಪರಿಸರ ಆಗಿದ್ದಂತಹವರು ವೈಚಾರಿಕ ನೆಲೆಗಟ್ಟನ್ನು ಭದ್ರವಾಗಿ ಸ್ಥಾಪಿಸಿದರು ಎಂದು ಎಸ್.ಎಂ.ಕೃಷ್ಣಾ ಸಂತಾಪ ಸೂಚಿಸಿದ್ದಾರೆ.
ಅವರ ಬರಹ ಸ್ಫೂರ್ತಿಯಾಗಿತ್ತು
ಅನಂತಮೂರ್ತಿ ಅವರ ಬದುಕು ಮತ್ತು ಬರಹ ನಮಗೆ ಸ್ಫೂರ್ತಿಯಾಗಿತ್ತು. ಅನ್ನಿಸಿದ್ದನ್ನು ನೇರವಾಗಿ ಹೇಳುವ ಅವರ ಗುಣ ನನಗೆ ಬಹಳ ಮೆಚ್ಚುಗೆಯಾಗಿತ್ತು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಸಂತಾಪ ಸೂಚಿಸಿದ್ದಾರೆ.
ಕನ್ನಡ ಜ್ಞಾನಪೀಠಕ್ಕೆ ಘನತೆ ತಂದುಕೊಟ್ಟವರು
ಅನಂತಮೂರ್ತಿ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಸಂತಾಪ ಸೂಚಿಸಿದ್ದಾರೆ. ಖಚಿತ ನಿಲುವು, ಸವಿಸ್ತಾರ ಚಿಂತನೆಯ ಡಾ.ಯು.ಆರ್.ಅನಂತಮೂರ್ತಿ ಕನ್ನಡದ ಅನರ್ಘ್ಯ ಆಸ್ತಿ. ಕನ್ನಡಕ್ಕೆ ಜ್ಞಾನಪೀಠದ ಘನತೆ ತಂದು ಕೊಟ್ಟಿದ್ದರು ಎಂದು ನೆನಪುಮಾಡಿಕೊಂಡಿದ್ದಾರೆ.
ನಿಸಾರ್ ಅಹಮದ್ ಸಂತಾಪ
ಅನಂತಮೂರ್ತಿ ಅವರ ನಿಧನಕ್ಕೆ ಕವಿ ನಿಸಾರ್ ಅಹಮದ್ ಸಂತಾಪ ಸೂಚಿಸಿದ್ದಾರೆ. ನನ್ನ ಸಹ ಲೇಖಕರಾಗಿ ಕಳೆದ 50 ವರ್ಷಗಳಿಂದ ಪರಿಚಿತರು. ನಾವಿಬ್ಬರೂ ಬಹುತೇಕ ಏಕವಚನಗಳಾಗಿಯೇ ಮಾತನಾಡುತ್ತಿದ್ದೆವು. ಸಮಾಜದ ಬಗ್ಗೆ ಅಪಾರವಾದ ಕಳಕಳಿ ಇಟ್ಟುಕೊಂಡಿದ್ದ ವ್ಯಕ್ತಿ ಅವರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.