ಹೈಕಮಾಂಡ್ ವಿರುದ್ಧವೇ ತೊಡೆತಟ್ಟಿರುವ ಅತೃಪ್ತ ಕಾಂಗ್ರೆಸ್ ಶಾಸಕರು
Recommended Video
ಬೆಂಗಳೂರು, ಜೂನ್ 08: ಸಚಿವ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನಗೊಂಡಿರುವ ಶಾಸಕರು ಒಗ್ಗಟ್ಟಾಗಿದ್ದು, ರಾಜ್ಯ ಕಾಂಗ್ರೆಸ್ ಹಿರಿಯ ನಾಕರ ವಿರುದ್ಧವೇ ತೊಡೆತಟ್ಟಿದ್ದಾರೆ. ಹೈಕಮಾಂಡ್ ಎಚ್ಚರಿಕೆಗೂ ಅವರು ಸೊಪ್ಪುಹಾಕುತ್ತಿಲ್ಲ.
18 ಕಾಂಗ್ರೆಸ್ ಶಾಸಕರು ಮತ್ತು ಇಬ್ಬರು ಪರಾಜಿತ ಅಭ್ಯರ್ಥಿ ಸೇರಿ ಒಟ್ಟು 20 ಜನ ರಾಜ್ಯ ಕೈ ನಾಯಕರ ವಿರುದ್ಧ ತೊಡೆ ತಟ್ಟಿದ್ದು, ಸಚಿವ ಪಟ್ಟ ಗಿಟ್ಟಿಸಿಕೊಂಡೇ ಸಿದ್ಧ ಎಂದು ಕೂತಿದ್ದಾರೆ. ಹೈಕಮಾಂಡ್ನ ಪ್ರತಿನಿಧಿ ವೇಣುಗೋಪಾಲ್ ಅವರ ಎಚ್ಚರಿಕೆಗೂ ಅವರು ಕ್ಯಾರೆ ಎನ್ನುತ್ತಿಲ್ಲ.
ಕ್ಯಾಬಿನೆಟ್ ಬಸ್ ಮಿಸ್ ಮಾಡಿಕೊಂಡ ಪ್ರಮುಖ ಕಾಂಗ್ರೆಸ್ ಶಾಸಕರು
ಅತೃಪ್ತ ಶಾಸಕರ ಬಳಗಕ್ಕೆ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ನಾಯಕತ್ವ ವಹಿಸಿದ್ದು, ಅತೃಪ್ತ ಶಾಸಕರನ್ನೆಲ್ಲಾ ಒಂದೆಡೆ ಸೇರಿಸುವ ಮೂಲಕ ಹೈಕಮಾಂಡ್ಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲೂ ಇದನ್ನು ಸೂಚ್ಯವಾಗಿ ಹೇಳಿರುವ ಪಾಟೀಲ, 'ನಮ್ಮದು ತಂಡವಿದೆ ನಾವೆಲ್ಲರೂ ಒಟ್ಟಿಗಿದ್ದೇವೆ, ಮುಂದಿನ ನಿರ್ಣಯ ಒಟ್ಟಿಗೆ ತೆಗೆದುಕೊಳ್ಳಲಿದ್ದೇವೆ' ಎಂದಿದ್ದಾರೆ.
ಬಿಜೆಪಿಗೆ ಹಾರುವ ಭಯ
ಬಿಜೆಪಿಗೆ ಅಧಿಕಾರ ಮಾಡಲು ಬೇಕಿರುವುದು ಕೇವಲ 8 ಶಾಸಕರ ಬಲ, ಹಾಗೇನಾದರೂ ಅತೃಪ್ತ ಶಾಸಕರ ತಮ್ಮ ನಿಷ್ಠೆ ಬದಲಿಸಿದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು ಹೋಗುವುದು ಖಂಡಿತ. ಬಿಜೆಪಿ ಕೂಡ ಇದನ್ನೇ ಕಾಯುತ್ತಿದ್ದು, ಅತೃಪ್ತರ ತಂಡದಲ್ಲಿನ ಬಲಿಷ್ಠ ನಾಯಕರು ಬಿಜೆಪಿ ಹೋಗುವುದರೆಂದರೆ ರತ್ನಗಂಬಳಿಯ ಸ್ವಾಗತ ದಕ್ಕುವುದು ಖಾತ್ರಿ.
ಅತೃಪ್ತರಲ್ಲಿದ್ದಾರೆ ಬಲಿಷ್ಠ ನಾಯಕರು
ಅಲ್ಲದೆ ಅತೃಪ್ತ ಶಾಸಕರ ತಂಡದಲ್ಲಿ ಎಂ.ಬಿ.ಪಾಟೀಲ, ಎಚ್ಎಂ ರೇವಣ್ಣ, ಸತೀಶ ಜಾರಕಿಹೊಳಿ, ಎಂಟಿಬಿ ನಾಗರಾಜು, ಎಚ್.ಕೆ.ಪಾಟೀಲ್, ಎನ್ಎ ಹ್ಯಾರಿಸ್, ಈಶ್ವರ ಖಂಡ್ರೆ,ಬಿ.ಸಿ.ಪಾಟೀಲ,ಸುಧಾಕರ್ ಅವರಂತಹ ಸಮುದಾಯದ ನಾಯಕರುಗಳಿದ್ದು ಅವರು ಪಕ್ಷ ತ್ಯಜಿಸಿದರೆ ಮುಂದೆ ಕಾಂಗ್ರೆಸ್ಗೆ ಭಾರಿ ಪೆಟ್ಟಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಭಿನ್ನಮತೀಯರ ಗುಂಪಿನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?
ಅತೃಪ್ತರ ಮುಂದೆ ಮಂಡಿ ಊರಿರುವ ನಾಯಕರು
ಸದ್ಯ ರಾಜ್ಯ ಕಾಂಗ್ರೆಸ್ ನಾಯಕರು ಜಾಣತನದಿಂದಲೇ ಅತೃಪ್ತರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಸಾಲು-ಸಾಲು ರಾಜ್ಯ ಮುಖಂಡರು ಒಬ್ಬರ ಹಿಂದೊಬ್ಬರು ಅತೃಪ್ತರ ಮುಂದೆ ಮಂಡಿ ಊರುತ್ತಿದ್ದಾರೆ ಆದರೆ ಎಂ.ಬಿ.ಪಾಟೀಲ ಅವರ ಹಠದ ಮುಂದೆ ಎಲ್ಲರೂ ಸೋಲುತ್ತಿದ್ದಾರೆ.
ಎಂಬಿ.ಪಾಟೀಲ್ ಮನೆಗೆ ಮುಖಂಡರ ಪರೇಡ್, ಸಿಎಂ ಕೂಡ ಬಂದು ಹೋದರು
ಖಾತೆ ಹಂಚಿಕೆ ತಡ
ಇಂದು (ಜೂನ್ 08)ಕ್ಕೆ ಖಾತೆ ಹಂಚಿಕೆ ಅಂತಿಮಗೊಳಿಸಲು ಮೈತ್ರಿ ಸರ್ಕಾರ ಸಿದ್ಧವಾಗಿತ್ತು ಆದರೆ ಅತೃಪ್ತ ಶಾಸಕರ ಬಂಡಾಯ ಹೆಚ್ಚಾದ ಕಾರಣ ಖಾತೆ ಹಂಚಿಕೆ ಮುಂದೆ ಹೋಗಿದೆ. ಬಂಡಾಯ ಶಮನವಾಗುವವರೆಗೂ ಆಡಳಿತ ಯಂತ್ರ ಸರಾಗವಾಗಿ ಸಾಗುವುದು ಕಷ್ಟ ಹಾಗಾಗಿ ರಾಜ್ಯ ನಾಯಕರು ಹೈಕಮಾಂಡ್ ಅನ್ನು ಮಧ್ಯ ಪ್ರವೇಶಿಸಿ ಆದಷ್ಟು ಬೇಗ ಅತೃಪ್ತರನ್ನು ಒಲಿಸಿಕೊಳ್ಳುವಂತೆ ಮನವಿ ಮಾಡಿದೆ.
ಅತೃಪ್ತರನ್ನು ಭೇಟಿ ಮಾಡಿದ ಮುಖಂಡರಿವರು
ಅತೃಪ್ತಶಾಸಕರನ್ನು ಸಮಾಧಾನ ಪಡಿಸುವ ಜವಾಬ್ದಾರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಯಿತು ಅವರು ಭೇಟಿ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಆ ನಂತರ ಇಂದು ಉಪ ಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಡಿಕೆ ಶಿವಕುಮಾರ್, ಕೆಜೆ ಜಾರ್ಜ್ ಜೊತೆಗೆ ಆರ್ವಿ ದೇಶಪಾಂಡೆ, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್ ಭೇಟಿ ಮಾಡಿ ಮಾತನಾಡಿದರು ಆದರೆ ಫಲ ನೀಡಲಿಲ್ಲ. ಕೊನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಭೇಟಿ ಮಾಡಿದರೂ ಆದರೂ ಅವರು ಹಠ ಬಿಟ್ಟಿಲ್ಲ.
ಹೈಕಮಾಂಡ್ ಭೇಟಿ ಮಾಡಲಿದ್ದಾರೆ ಅತೃಪ್ತರು?
ಇಂದು ಸಂಜೆ ಅಥವಾ ನಾಳೆ ಅತೃಪ್ತ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದ್ದು, ಅಲ್ಲಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ. ಇಂದು ರಾಜ್ಯದ ಕಾಂಗ್ರೆಸ್ ಸಂಸದರು ರಾಹುಲ್ ಗಾಂಧಿ ಅವರನ್ನು ಭೇಟಿಗೆ ಅವಕಾಶ ಕೋರಿದ್ದು ರಾಜ್ಯದ ರಾಜಕೀಯ ಚಿತ್ರಣವನ್ನು ಅವರಿಗೆ ನೀಡಲಿದ್ದಾರೆ.