ರಾಜ್ಯದ ಎಲ್ಲಾ ಲೋಕಸಭೆ ಕ್ಷೇತ್ರದಿಂದ ಉಪೇಂದ್ರ ಪಕ್ಷ ಸ್ಪರ್ಧೆ, ಅಭ್ಯರ್ಥಿ ಆಯ್ಕೆ ಡಿಫರೆಂಟ್!
ಬೆಂಗಳೂರು, ಜನವರಿ 26 : ಉಪೇಂದ್ರ ಸ್ಥಾಪಿಸಿರುವ ಉತ್ತಮ ಪ್ರಜಾಕೀಯ ಪಕ್ಷವು ರಾಜ್ಯದ ಎಲ್ಲಾ 28 ಕ್ಷೇತ್ರಗಳಿಂದಲೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದೆ. ಈ ಬಗ್ಗೆ ಉಪೇಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷದಿಂದ ಸುದ್ದಿಗೋಷ್ಠಿ ಕರೆದಿದ್ದ ಅವರು, ಆಟೋ ಚಿಹ್ನೆಯ ಉತ್ತಮ ಪ್ರಜಾಕೀಯಕ ಪಕ್ಷವು ರಾಜ್ಯದ ಎಲ್ಲ ಲೋಕಸಭೆ ಕ್ಷೇತ್ರಗಳಿಂದ ಸ್ಪರ್ಧೆಗಿಳಿಯಲಿದ್ದು, ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ ಎಂದರು. ಅಭ್ಯರ್ಥಿ ಆಯ್ಕೆಗೆ ಮಾತ್ರ ಭಿನ್ನ ಮಾನದಂಡಗಳನ್ನು ಉಪೇಂದ್ರ ಅನುಸರಿಸುತ್ತಿದ್ದಾರೆ.
ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ತಾವು ಹೇಗೆ ಜನಪರವಾಗಿ ಕೆಲಸ ಮಾಡುತ್ತೇವೆ ಎಂಬುದನ್ನು ಉಪೇಂದ್ರ ನೇತೃತ್ವದ ಸಮಿತಿಗೆ ವರದಿ ಸಲ್ಲಿಸಬೇಕು. ಅದರಲ್ಲಿ ಯಾವ ಕೆಲಸ ಎಷ್ಟು ವರ್ಷದಲ್ಲಿ ಮುಗಿಸುತ್ತೇವೆ, ಕ್ಷೇತ್ರದ ಜನರಿಗೆ ಏನು ಬೇಕಿದೆ. ಜನರೊಂದಿಗೆ ಬೆರೆತಾಗ ಅವರು ಹೇಳಿಕೊಂಡ ಸಮಸ್ಯೆಗಳು ಯಾವುವು? ಅವರು ಅವುಗಳನ್ನು ಹೇಗೆ ಬಗೆಹರಿಸುತ್ತೀರಿ? ಎಂಬಿತ್ಯಾದಿ ವಿವರಗಳನ್ನು ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಲ್ಲಿಸಬೇಕು.
ಉಪೇಂದ್ರ ನೇತೃತ್ವದ ಸಮಿತಿಯು ಅಭ್ಯರ್ಥಿಯ ವರದಿಯನ್ನು ನೋಡಿ ಉತ್ತಮವಾದುದನ್ನು ಮತ್ತೆ ಜನರ ಮುಂದೆ ಆಯ್ಕೆಗೆ ಇಡುತ್ತಾರೆ. ಯಾವ ಅಭ್ಯರ್ಥಿಯನ್ನು ಜನರು ಆಯ್ಕೆ ಮಾಡುತ್ತಾರೋ ಅವರಿಗೆ ಪಕ್ಷದ ಟಿಕೆಟ್ ನೀಡಲಾಗುತ್ತದೆ. ಇದು ಉಪೇಂದ್ರ ಅವರು ಪಕ್ಷದ ಅಭ್ಯರ್ಥಿಗಳನ್ನು ಆರಿಸುವ ವಿಧಾನ.
ಪ್ರಜಾಕೀಯದ ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಬೇಕಾದ ಬಗ್ಗೆ ನಿಯಮಗಳು, ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಉಪೇಂದ್ರ ಅವರು ಹೇಳಿದ್ದಾರೆ.
ತಮ್ಮ ಪಕ್ಷ ಕ್ಯಾಶ್ಲೆಸ್ ಪಕ್ಷವಾಗಿದ್ದು, ಯಾವುದೇ ದೇಣಿಗೆಗಳನ್ನು ಸಹ ಸ್ವೀಕರಿಸುವುದಿಲ್ಲ. ಪಕ್ಷ ಸಂಘಟನೆಗೆ ಬರುವ ಸಣ್ಣ ಖರ್ಚುಗಳನ್ನು ತಾವೇ ಸ್ವಂತ ಹಣದಿಂದ ಖರ್ಚು ಮಾಡುತ್ತೇವೆ ಎಂದು ಉಪೇಂದ್ರ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.