ಪ್ರಜಾಕೀಯಕ್ಕೆ ಬೆನ್ನು ತೋರಿಸಿದ್ರಾ ಉಪೇಂದ್ರ?
ರಾಜಕೀಯವನ್ನು ತಿರುಗಾ ಮುರುಗಾ ಮಾಡುತ್ತೇನೆ, ಪ್ರಜೆಗಳನ್ನು ನಾಯಕರನ್ನಾಗಿ, ನಾಯಕರನ್ನು ಸೇವಕರನ್ನಾಗಿಸಿ ಆಡಳಿತ ಮಾಡುತ್ತೇನೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಉಪೇಂದ್ರ, ಚುನಾವಣೆ ಸಮಯ ಹತ್ತಿರ ಬಂದಾಗ ಸಡನ್ನಾಗಿ ಕಣ್ ತಪ್ಪಿಸಿಕೊಂಡಿದ್ದಾರೆ.
ತಾವೇ ಮುಂದೆ ನಿಂತು ಕಟ್ಟಿದ್ದ ಕೆಪಿಜೆಪಿ ಪಕ್ಷದಿಂದ ಅಸಮಾಧಾನಗೊಂಡು ಹೊರ ಬಂದಿದ್ದ ಉಪೇಂದ್ರ ಅವರು ಆ ನಂತರ ಮತ್ತೆ ಒಂದು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ ಹೊಸ ಪಕ್ಷ ಘೋಷಣೆ ಮಾಡಿದಾಗಿನಿಂದ ಉಪೇಂದ್ರ ನಾಪತ್ತೆ ಆಗಿದ್ದಾರೆ, ಆದರೆ ಇದೀಗ ಬಂದಿರುವ ಸುದ್ದಿ ಏನೆಂದರೆ ಅವರು ಸಿನಿಮಾ ಶೂಟಿಂಗ್ನಲ್ಲಿ ತೊಡಗಿಕೊಳ್ಳಲಿದ್ದಾರೆ ಎಂಬುದು.
ವಿಡಿಯೋ: ಉಪೇಂದ್ರ ಕನಸಿನ ಕರ್ನಾಟಕ ಹೇಗಿರಬೇಕು ಅಂದರೆ...
ಹೌದು, ಅವರು ಅಬ್ಬರದಿಂದ ಪ್ರಾರಂಭಿಸಿದ 'ಪ್ರಜಾಕೀಯ' ವರ್ಕ್ ಆದಂತೆ ಕಾಣುತ್ತಿಲ್ಲ ಹಾಗಾಗಿ ಅವರು ಚಿತ್ರರಂಗಕ್ಕೆ ಮರಳುವ ನಿರ್ಧಾರ ತಳೆದಂತಿದೆ. ಅವರು ತಮ್ಮ ಚಿತ್ರ 'ಹೋಮ್ ಮಿನಿಸ್ಟರ್' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆ ಬಿ-ಫಾರಂ ವಿತರಣೆಯಲ್ಲಿ ನಿರತರಾಗಿದ್ದರೆ ಉಪೇಂದ್ರ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದು ನೋಡಿದರೆ ಉಪೇಂದ್ರ ಅವರು ರಾಜಕೀಯದಿಂದ ದೂರಾಗಿದ್ದಾರೆಯೇ, ಪಕ್ಷ ಘೋಷಣೆ, ಪ್ರೆಸ್ ಮಿಟ್ಗಳು, ಭಾರಿ ಭಾಷಣಗಳು, ಫೇಸ್ಬುಕ್ ವಿಡಿಯೋಗಳು ಕೇವಲ 'ಆರಂಭ ಶೂರತ್ವವೇ' ಎಂಬ ಅನುಮಾನ ಪ್ರಾರಂಭವಾಗಿದೆ.