ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಗರಿಗೆದರಿದ ಚನ್ನಪಟ್ಟಣ ಪಾಲಿಟಿಕ್ಸ್
ರಾಜ್ಯದ ಕೆಲವೊಂದು ಕ್ಷೇತ್ರಗಳು ಹಾಗೆಯೇ, ಚುನಾವಣೆಗೆ ಮುನ್ನವೂ ಸುದ್ದಿಯಲ್ಲಿ, ಚುನಾವಣಾ ನಂತರವೂ ಸುದ್ದಿಯಲ್ಲಿ. ಅಂತಹ ಕ್ಷೇತ್ರಗಳಲ್ಲೊಂದು ಚನ್ನಪಟ್ಟಣ. ಕ್ಷೇತ್ರದ ಹಾಲೀ ಶಾಸಕ ಸಿ.ಪಿ. ಯೋಗೀಶ್ವರ್ ರಾಜೀನಾಮೆ ನೀಡಿದ ನಂತರ ಚನ್ನಪಟ್ಟಣದ ರಾಜಕೀಯ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.
ಪಕ್ಷಾಂತರ ಎನ್ನುವುದು ಯೋಗೀಶ್ವರ್ ಅವರಿಗೆ ಹೊಸದೇನಲ್ಲ, ಈ ಚುನಾವಣೆಯಲ್ಲಿ ಒಂದು ಪಕ್ಷದ ಟಿಕೆಟಿನಿಂದ ಗೆದ್ದು, ಇನ್ನೊಂದು ಚುನಾವಣೆಯಲ್ಲಿ ಅದೇ ಪಕ್ಷದ ಟಿಕೆಟಿನಿಂದ ಸ್ಪರ್ಧಿಸುತ್ತಾರೆ ಎನ್ನುವುದು ಕ್ಷೇತ್ರದ ಮತದಾರರಿಗೆ ಬಿಡಿ.. ಖುದ್ದು ಅವರಿಗೇ ಗ್ಯಾರಂಟಿ ಇರುವುದಿಲ್ಲವೋ ಏನೋ?
ಕಾಂಗ್ರೆಸ್ ತೊರೆದ ಶಾಸಕ ಸಿಪಿ ಯೋಗೇಶ್ವರ ಚಿತ್ತ ಎತ್ತ
ಆದರೂ, ಪ್ರತೀ ಚುನಾವಣೆ ಯೋಗೀಶ್ವರ್ ಗೆಲ್ಲುತ್ತಾರೆಂದರೆ, ಪಕ್ಷಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ವರ್ಚ್ಚಸ್ಸು. ಕಾಂಗ್ರೆಸ್ ಪಕ್ಷಕ್ಕೆ 'ಮತ್ತೆ' ವಿದಾಯ ಹೇಳಿರುವ ಯೋಗೀಶ್ವರ್, ಜೆಡಿಎಸ್ ಅಥವಾ ಬಿಜೆಪಿ ಟಿಕೆಟೆನಿಂದ ಸ್ಪರ್ಧಿಸಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಆದರೆ, ಕಳೆದ ಬಾರಿ ಯೋಗೀಶ್ವರ್ ವಿರುದ್ದ ಸೋಲು ಅನುಭವಿಸಿದ್ದ ಗೌಡ್ರ ಮನೆಯ ಸೊಸೆ ಅನಿತಾ ಕುಮಾರಸ್ವಾಮಿ, ಮತ್ತೆ ಚನ್ನಪಟ್ಟಣದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿಯಿರುವುದರಿಂದ, ಯೋಗೀಶ್ವರ್ ಬಹುತೇಕ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು.
ಡಿಕೆಶಿ ಸಹೋದರರ ಜೊತೆ ಮುನಿಸಿಕೊಂಡು ಯೋಗೀಶ್ವರ್, ಕಾಂಗ್ರೆಸ್ ತೊರೆದಿದ್ದಾರೆ ಎನ್ನುವ ಸುದ್ದಿಯ ನಡುವೆ, ಗುರುವಾರ (ಅ 20) ಇಂಧನ ಸಚಿವ ಡಿ ಕೆ ಶಿವಕುಮಾರ್, ಯೋಗೀಶ್ವರ್ ವಿರುದ್ದ ವಾಗ್ದಾಳಿ ನಡೆಸಿದ್ದು, ಅವರು ತೊಡೆಯನ್ನಾದರೂ ತಟ್ಟಿಕೊಳ್ಳಲಿ, ಇನ್ನೇನಾದರೂ ತಟ್ಟಿಕೊಳ್ಳಲಿ ಎಂದು ಹೇಳಿದ್ದಾರೆ. ಮುಂದೆ ಓದಿ..
ಸಹೋದರನಿಗಾಗಿ ಯೋಗೀಶ್ವರ್ ಜೊತೆ ರಾಜಿ ಮಾಡಿಕೊಂಡಿದ್ದರೇ ಡಿಕೆಶಿ?
ಅಸಲಿಗೆ ಡಿಕೆಶಿ ಮತ್ತು ಯೋಗೀಶ್ವರ್ ನಡುವಿನ ಸಂಬಂಧ ಹಿಂದಿನಿಂದಲೂ ಅಷ್ಟಕಷ್ಟೇ. ಆದರೆ ಸಹೋದರ ಡಿ ಕೆ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರ ಬರುವುದರಿಂದ ಇಬ್ಬರು ರಾಜಿಮಾಡಿಕೊಂಡು, ಯೋಗೀಶ್ವರ್ 2014ರಲ್ಲಿ ಕಾಂಗ್ರೆಸ್ ಸೇರಿದ್ದರು.
ಕಾಂಗ್ರೆಸ್ ನಲ್ಲಿ ಬೆಳೆಯಲು ಡಿ ಕೆ ಶಿವಕುಮಾರ್ ಬಿಟ್ಟಿಲ್ಲ
ಕಾಂಗ್ರೆಸ್ ಸೇರುವ ವೇಳೆ ಅದೇನು ಮಾತುಕತೆಯಾಗಿತ್ತೋ? ನನ್ನನ್ನು ಕಾಂಗ್ರೆಸ್ ನಲ್ಲಿ ಬೆಳೆಯಲು ಡಿ ಕೆ ಶಿವಕುಮಾರ್ ಬಿಟ್ಟಿಲ್ಲ, ಹಾಗಾಗಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಅವರ ಎದುರು ತೊಡೆತಟ್ಟಿ ನಿಲ್ಲಲಿದ್ದೇನೆಂದು ಯೋಗೀಶ್ವರ್ ವಾಗ್ದಾಳಿ ನಡೆಸಿದ್ದರು.
ನಾನ್ಯಾಕೆ ಅವರಿಗೆ ಸಚಿವ ಸ್ಥಾನ ತಪ್ಪಿಸಲಿ
ಇದಕ್ಕೆ, ಪ್ರತಿಕ್ರಿಯಿಸಿದ್ದ ಡಿಕೆಶಿ, ಯೋಗೀಶ್ವರ್ ಅವರ ತೊಡೆಯನ್ನು ನಾನು ನೋಡಲು ಹೋಗಿಲ್ಲ. ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ನಾನೇ ಸಚಿವ ಸ್ಥಾನವಿಲ್ಲದೇ ಎಷ್ಟೋ ತಿಂಗಳು ಇರಲಿಲ್ಲವೇ, ಹಾಗಿರುವಾಗ ನಾನ್ಯಾಕೆ ಅವರಿಗೆ ಸಚಿವ ಸ್ಥಾನ ತಪ್ಪಿಸಲಿ ಎಂದು ತಿರುಗೇಟು ನೀಡಿದ್ದರು.
ಡಿಕೆಶಿ ಸಹೋದರ ಡಿ ಕೆ ಸುರೇಶ್ ಸ್ಪರ್ಧೆ
ಇನ್ನು, ಯೋಗೀಶ್ವರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲೇಬೇಕೆಂದು ಹಠತೊಟ್ಟಂತಿರುವ ಡಿಕೆಶಿ, ತನ್ನ ಸಹೋದರ ಡಿ ಕೆ ಸುರೇಶ್ ಅವರನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯಿದೆ.
ಯೋಗೀಶ್ವರ್, ಅನಿತಾ ಕುಮಾರಸ್ವಾಮಿ, ಡಿ ಕೆ ಸುರೇಶ್
ಒಂದು ವೇಳೆ ಈಗಿನ ಲೆಕ್ಕಾಚಾರ, ಚುನಾವಣಾ ಆಖಾಡದವರೆಗೂ ಮುಂದುವರಿದರೆ, ಚನ್ನಪಟ್ಟಣದಲ್ಲಿ ತ್ರಿಕೋಣ ಸ್ಪರ್ಧೆ (ಯೋಗೀಶ್ವರ್, ಅನಿತಾ ಕುಮಾರಸ್ವಾಮಿ, ಡಿ ಕೆ ಸುರೇಶ್) ನಿಶ್ಚಿತ. ಇನ್ನು, ನಮ್ಮ ಕುಟುಂಬದಿಂದ ಇಬ್ಬರು (ಎಚ್ಡಿಕೆ, ರೇವಣ್ಣ) ಮಾತ್ರ ಸ್ಪರ್ಧಿಸುತ್ತಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ದೇವೇಗೌಡರು ಮತ್ತು ಎಚ್ಡಿಕೆ ಏನು ಹೇಳುತ್ತಾರೋ ಕಾದು ನೋಡಬೇಕಿದೆ?