ಶ್ರೀಗಳು ಅಪೇಕ್ಷಿಸಿದರೆ ಎಲ್ಲಾ ರೀತಿಯ ಸಹಕಾರಕ್ಕೂ ಸಿದ್ದ: ಯೋಗಿ ಆದಿತ್ಯನಾಥ್
ಸಾಗರ, ಮೇ 3: ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಖನಾಥ ಮಠದ ಮುಖ್ಯಸ್ಥ ಯೋಗಿ ಆದಿತ್ಯನಾಥ್, ಗುರುವಾರ (ಮೇ 3) ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಸಾಗರದ ಶ್ರೀರಾಘವೇಶ್ವರ ಸಭಾಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ರಾಘವೇಶ್ವರ ಶ್ರೀಗಳ ಮಹತ್ವಾಕಾಂಕ್ಷಿ ಯೋಜನೆಯಾದ, ಉತ್ತರಕನ್ನಡದ ಭಾನ್ಕುಳಿಯಲ್ಲಿ ನಿರ್ಮಾಣವಾಗುತ್ತಿರುವ "ಗೋಸ್ವರ್ಗ"ದ ಕುರಿತು ಮಾಹಿತಿ ಪಡೆದು, ಗೋಸ್ವರ್ಗದ ಕುರಿತಾದ ಪ್ರಸ್ತುತಿಯನ್ನು ವೀಕ್ಷಿಸಿದ ಯೋಗಿ ಆದಿತ್ಯನಾಥ್, "ಗೋಸ್ವರ್ಗ ಸಾಕಾರವಾದರೆ ಗೋಸಂರಕ್ಷಣಾ ಆಂದೋಲನಕ್ಕೆ ಮಹತ್ವದ ಹೆಜ್ಜೆಯಾಗಲಿದೆ, ಇದು ದೇಶಕ್ಕೆ ಒಂದು ದೊಡ್ಡ ಕೊಡುಗೆಯಾಗಲಿದೆ ಎಂದಿದ್ದಾರೆ.
ಹಿಂದೂ ವಿರೋಧಿ ಸರ್ಕಾರ: ಶಿರಸಿಯಲ್ಲಿ ಕಾಂಗ್ರೆಸ್ ವಿರುದ್ಧ ಯೋಗಿ ವಾಗ್ದಾಳಿ
ಈ ಕುರಿತಾಗಿ ಶ್ರೀಗಳು ಅಪೇಕ್ಷಿಸಿದರೆ ಎಲ್ಲಾ ರೀತಿಯ ಸಹಕಾರಕ್ಕೂ ಸಿದ್ದನಿದ್ದೇನೆ. ಕರ್ನಾಟಕದಲ್ಲಿ ಇಂತಹ ಕ್ಲಿಷ್ಟಕಾಲಗಟ್ಟದಲ್ಲೂ ಗೋಸಂರಕ್ಷಣೆ ಕಾರ್ಯ ಮಾಡುತ್ತಿರುವ ರಾಘವೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದ ಯೋಗಿ, ಗೋಸ್ವರ್ಗ ಯೋಜನೆಯ ಕುರಿತು ಶ್ಲಾಘಿಸಿ ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಗೋಸಂರಕ್ಷಣೆಯ ವಿಷಯದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡ ಯೋಗಿ ಸರ್ಕಾರದ ಕಾರ್ಯಪರತೆಯನ್ನು ರಾಘವೇಶ್ವರ ಶ್ರೀಗಳು ಶ್ಲಾಘಿಸಿದರೆ, ರಾಘವೇಶ್ವರ ಶ್ರೀಗಳ ಗೋಸಂರಕ್ಷಣಾ ಕಾರ್ಯಗಳ ಕುರಿತು ಯೋಗಿ ಆದಿತ್ಯನಾಥ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸಂಬಂಧ ಭಾರತಕ್ಕಿಂತ ಇಟಲಿ ಜೊತೆ ಚೆನ್ನಾಗಿದೆ : ಯೋಗಿ ವ್ಯಂಗ್ಯ
ಗೋಸಂರಕ್ಷಣೆಯ ವಿಚಾರದಲ್ಲಿ ತೊಡಗಿಸಿಕೊಂಡಿರುವ ಸಂತರಿಬ್ಬರ ಸಮಾಗಮ ಹೊಸ ಪರ್ವಕ್ಕೆ ನಾಂದಿಹಾಡಿದ್ದು, ಮಹತ್ವದ ಮೈಲಿಗಲ್ಲಾಗಿದೆ. "ಗೋಸ್ವರ್ಗ" ಲೋಕಾರ್ಪಣೆ ಮೇ 27 ರಂದು ಉತ್ತರ ಕನ್ನಡದ ಭಾನ್ಕುಳಿಯಲ್ಲಿ ನಡೆಯಲಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಶಯವನ್ನು ಆದಿತ್ಯನಾಥ್ ವ್ಯಕ್ತಪಡಿಸಿದರು.
ಸಾಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ 'ಗೋಸ್ವರ್ಗ" ದ ವಿಚಾರ ಪ್ರಸ್ತಾಪಿಸಿದ ಯೋಗಿ ಆದಿತ್ಯನಾಥ್, ನಿಮ್ಮ ಊರಿನ ಸಮೀಪ ಇಂತಹಾ ಮಹತ್ವದ ಯೋಜನೆ ಸಾಕಾರವಾಗುತ್ತಿರುವುದು ಭಾಗ್ಯವಾಗಿದೆ. ಗೋಸ್ವರ್ಗ ನಿರ್ಮಾಣವಾದರೆ ದೇಶಕ್ಕೊಂದು ಕೊಡುಗೆಯಾಗಲಿದೆ, ಗೋಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದರು.