ದಲಿತರ ಮನೇಲಿ ಹೋಟೆಲ್ ತಿಂಡಿ ತಿಂದ ಬಿಎಸ್ವೈ ವಿರುದ್ಧ ದೂರು
ಚಿತ್ರದುರ್ಗ, ಮೇ 22 : 'ಅಸ್ಪೃಶ್ಯತೆ' ಪಾಲಿಸಿ ದಲಿತರಿಗೆ ಅವಮಾನ ಮಾಡಿದ್ದಾರೆಂದು ದಲಿತನೊಬ್ಬ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.
ಕೆಳಕೋಟೆಯಲ್ಲಿ ರುದ್ರಮುನಿ ಎಂಬ ದಲಿತ ಬಿಜೆಪಿ ನಾಯಕನ ಮನೆಗೆ ಯಡಿಯೂರಪ್ಪ ಮತ್ತಿತರರು ಭೇಟಿ ನೀಡಿದಾಗ ಆತ ಮನೆಯಲ್ಲಿ ತಯಾರಿಸಿದ ತಿಂಡಿಯನ್ನು ತಿನ್ನದೆ, ಹೋಟೆಲಿನಿಂದ ತರಿಸಿದ ಇಡ್ಲಿ, ವಡಾ, ಚಟ್ನಿ, ಸಾಂಬಾರ್ ಸೇವಿಸಿದ್ದರೆಂಬುದು ಅವರ ಮೇಲಿನ ಆರೋಪ.
ರಾಜ್ಯಕ್ಕೆ ಮಾದರಿಯಾಗಬೇಕಾದವರ ಈ ಕೃತ್ಯದಿಂದ ಸಹಸ್ರಾರು ದಲಿತರ ಭಾವನೆಗಳಿಗೆ ನೋವಾಗಿದೆ. ಯಡಿಯೂರಪ್ಪನವರ ತವರು ಜಿಲ್ಲೆಯಾದ ಮಂಡ್ಯದಲ್ಲಿ ಮರ್ಯಾದೆ ಹತ್ಯೆಗಳಾಗುತ್ತಿವೆ. ಯಡಿಯೂರಪ್ಪನವರ ಈ ನಡೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡಿದೆ ಎಂದು ಡಿ ವೆಂಕಟೇಶ್ ಎಂಬುವವರು ದೂರಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿಯೂ ದಲಿತನ ಮನೆಯಲ್ಲಿ ಯಡಿಯೂರಪ್ಪ ಹೋಟೆಲಿನಿಂದ ತರಿಸಿದ ತಟ್ಟೆ ಇಡ್ಲಿಯನ್ನು ತಿಂದಿರುವುದು ಟೀಕೆಗೆ ಗುರಿಯಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ಯಡಿಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ದಲಿತನ ಮನೆಯಲ್ಲಿ ಪುಲಾವ್ ತಯಾರಿಸಲಾಗಿತ್ತು. ಆದರೆ, ಹೇಳಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಎಸ್ ಯಡಿಯೂರಪ್ಪ ಬೆಂಬಲಿಗರು ಬಂದಿದ್ದರಿಂದ ಹೋಟೆಲಿನಿಂದ ಇಡ್ಲಿ ತಯಾರಿಸಲಾಯಿತು. ಯಡಿಯೂರಪ್ಪನವರು ದಲಿತನ ತಯಾರಿಸಿದ ಪುಲಾವ್ ಅನ್ನೂ ತಿಂದಿದ್ದಾರೆ ಎಂದು ಆ ದಲಿತ ನಾಯಕ ಹೇಳಿಕೆ ನೀಡಿದ್ದರು.