'ಸೆ. 30ರೊಳಗೆ ಸಂಪುಟ ವಿಸ್ತರಿಸಿ, ಇಲ್ಲವೇ ನಮ್ಮ ದಾರಿ ನೋಡಿಕೊಳ್ಳುತ್ತೇವೆ'
ಬೆಂಗಳೂರು, ಸೆಪ್ಟೆಂಬರ್ 17: ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಾ ಬಂದಿದ್ದ ಸಮ್ಮಿಶ್ರ ಸರ್ಕಾರಕ್ಕೆ ಸಂಪುಟ ವಿಸ್ತರಣೆ ಸಮಸ್ಯೆ ಉರುಳಾಗುವ ಅಪಾಯ ಎದುರಾಗಿದೆ.
ಸಚಿವ ಮತ್ತು ನಿಗಮ ಮಂಡಳಿಗಳ ಸ್ಥಾನದ ಆಕಾಂಕ್ಷಿಗಳು ಮಹತ್ವದ ಹುದ್ದೆಗಳಿಂದ ವಂಚಿತರಾಗಿ ಉಳಿದುಕೊಂಡು ಇನ್ನೂ ಕಾಯಲು ಸಿದ್ಧರಿಲ್ಲ ಎಂದು ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕರ್ನಾಟಕ: ಸೆ.17ರ ಟಾಪ್ 5 ರಾಜಕೀಯ ಬೆಳವಣಿಗೆಗಳು
ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ವಿರುದ್ಧ ಬಂಡಾಯ ಏಳಲು ಮುಂದಾಗಿದ್ದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದ ವಿರುದ್ಧ ಅನೇಕ ಕೈ ನಾಯಕರಲ್ಲಿನ ಅಸಮಾಧಾನ ಭುಗಿಲೆದ್ದಿದೆ. ಸೆ. 30ರ ಒಳಗೆ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅತೃಪ್ತ ಶಾಸಕ ಬಣ ಸರ್ಕಾರಕ್ಕೆ ಗಡುವು ನೀಡಿದೆ.
ರಮೇಶ್ ಮನೆಯಲ್ಲಿ ಚರ್ಚೆ
ಅತೃಪ್ತ ಶಾಸಕರೆಲ್ಲರೂ ಸೋಮವಾರ ಬೆಳಿಗ್ಗೆ ರಮೇಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ಗಡುವು ನೀಡುವ ಬಗ್ಗೆ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ.
ಸೆ. 30ರವರೆಗೆ ಕಾದು ನೋಡುವಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೀಡಿರುವ ಸೂಚನೆಗೆ ಬದ್ಧವಾಗಿರಲು ಶಾಸಕರು ತೀರ್ಮಾನಿಸಿದ್ದಾರೆ.
ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು
ಯಾಕೆ ಅತೃಪ್ತಿ?
ಸರ್ಕಾರ ರಚನೆಯಾಗಿ ಹಲವು ತಿಂಗಳುಗಳು ಕಳೆದರೂ ಪೂರ್ಣಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗಿಲ್ಲ. ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆಯಾಗಿಲ್ಲ.
ಅಧಿಕಾರಿಗಳ ವರ್ಗಾವಣೆ, ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಕಾಂಗ್ರೆಸ್ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಜೆಡಿಎಸ್ಗಿಂತ ದೊಡ್ಡ ಪಕ್ಷವಾಗಿದ್ದರೂ ಆ ಪಕ್ಷದ ಶಾಸಕರಿಗೆ ಸಿಗುತ್ತಿರುವ ಮನ್ನಣೆ ತಮಗೆ ಸಿಗುತ್ತಿಲ್ಲ ಎಂಬುದು ಕಾಂಗ್ರೆಸ್ನ ಅನೇಕ ಶಾಸಕರ ಅತೃಪ್ತಿಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ : ಶಾಸಕಾಂಗ ಪಕ್ಷದ ಸಭೆ ಕರೆದ ಯಡಿಯೂರಪ್ಪ!
ಯಾವ ಶಾಸಕರು ಆಕಾಂಕ್ಷಿಗಳು?
ಸಚಿವ ರಮೇಶ್ ಜಾರಕಿಹೊಳಿ (ಗೋಕಾಕ್), ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಬಳ್ಳಾರಿ ಶಾಸಕ ನಾಗೇಂದ್ರ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್, ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ವಿಜಯನಗರ ಶಾಸಕ ಆನಂದ್ ಸಿಂಗ್, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್.
ನಮ್ಮ ದಾರಿ ನೋಡಿಕೊಳ್ಳುತ್ತೇವೆ
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಅತೃಪ್ತ ಶಾಸಕರು, ಸೆ. 30ರ ಒಳಗೆ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿ ನಡೆಯಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೆ ಇದ್ದರೆ ಪಕ್ಷ ತೊರೆಯಲು ಕೂಡ ಅವರು ಸಿದ್ಧರಾಗಿದ್ದಾರೆ.
ಕೆಲವು ಪ್ರಭಾವಿ ಮುಖಂಡರು ತಾವು ಹೇಳಿದವರಿಗೆ ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಸ್ಥಾನ ನೀಡುವಂತೆ ಒತ್ತಡ ಹೇರಿದ್ದಾರೆ. ಇನ್ನು ಕೆಲವು ಶಾಸಕರು ವಿವಿಧ ಖಾತೆಗಳಿಗೆ ಬೇಡಿಕೆ ಇರಿಸಿದ್ದಾರೆ. ತಮಗೆ ನ್ಯಾಯ ಸಿಗದೆ ಇದ್ದರೆ ನಮ್ಮ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ತೀಕ್ಷ್ಣ ಸಂದೇಶ ರವಾನಿಸಿದ್ದಾರೆ.
ಸಚಿವನಾಗಿ ಸಭೆ ನಡೆಸಿದ್ದು...
ಶಾಸಕರೊಂದಿಗೆ ಸಭೆ ನಡೆಸಿದ್ದರಲ್ಲಿ ಯಾವ ತಪ್ಪೂ ಇಲ್ಲ. ಸಚಿವನಾಗಿ ಶಾಸಕರ ಜತೆಗೆ ಸಭೆ ನಡೆಸುವುದು ತಪ್ಪೇ ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಸಿದ್ದರಾಮಯ್ಯ ನನ್ನನ್ನು ಕರೆದಿಲ್ಲ. ನಾನೇ ಅವರನ್ನು ಭೇಟಿ ಮಾಡಲು ಹೊರಟಿದ್ದೇನೆ ಎಂದಿದ್ದಾರೆ. ಬೇಡಿಕೆಗಳು ಈಡೇರದೆ ಇದ್ದರೆ ರಾಜೀನಾಮೆ ನೀಡುತ್ತೀರಾ ಎಂಬ ಪ್ರಶ್ನೆಗೆ 'ನಾನ್ಯಾಕೆ ರಾಜೀನಾಮೆ ನೀಡಲಿ' ಎಂದು ಮರುಪ್ರಶ್ನೆ ಹಾಕಿದ್ದಾರೆ.