ಆಮದು ನಿಷೇಧ ಅಡಿಕೆ ಬೆಳೆಗಾರರ ಹಿತ ಕಾಯುವುದೆ?
ನವದೆಹಲಿ, ಜೂನ್ 29: ಅಡಿಕೆ ಬೆಳಗಾರರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅಭಯ ನೀಡಿದ್ದಾರೆ.
ರಾಜ್ಯದ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಮತ್ತು ಸ್ಥಳೀಯ ಅಡಕೆಗೆ ಉತ್ತಮ ಮಾರುಕಟ್ಟೆ ಒದಗಿಸಲು ಅಡಿಕೆ ಆಮದಿಗೆ ತಾತ್ಕಾಲಿಕ ನಿಷೇಧ ಹೇರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.[ಅಡಿಕೆ ಧಾರಣೆ ಕುಸಿತಕ್ಕೆ ನಿಜ ಕಾರಣ ಗೊತ್ತಾಯ್ತು!]
A delegation led by Shri @BSYBJP, @AnanthKumar_BJP, @DVSBJP & @gmsiddeshwara met me y'day on arecanut issues. https://t.co/J4xgeabdAm
— Nirmala Sitharaman (@nsitharaman) June 29, 2016
ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರ ನಿವಾಸದಲ್ಲಿ ಮಂಗಳವಾರ ಕೇಂದ್ರ ಸಚಿವರನ್ನೂ ಒಳಗೊಂಡ ಬಿಜೆಪಿ ಮುಖಂಡರ ನಿಯೋಗ ಹಾಗೂ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ ಮಾತುಗಳು ಬೆಳೆಗಾರರ ವಿಶ್ವಾಸ ಹೆಚ್ಚಿಸಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಿಯೋಗ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಕೆ ಮಾಡಿತು.[ಅಡಿಕೆ ಧಾರಣೆ ಕುಸಿತ: 13 ಜಿಲ್ಲೆಗಳ ಬಂದ್ಗೆ ಮಿಶ್ರ ಪ್ರತಿಕ್ರಿಯೆ]
ಆಮದು ಬೇಡ
ಭಾರತದಲ್ಲಿ ಬೆಳೆಯುವ ಅಡಿಕೆ ಅತ್ಯುತ್ತಮ ಗುಣಮಟ್ಟ ಹೊಂದಿದ್ದು, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಸೇರಿ ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಆಮದಾಗುತ್ತಿರುವ ಅಡಿಕೆ ಕಳಪೆಯಾಗಿದೆ ಅದರ ಬಳಕೆ ನಮ್ಮ ದೇಶಕ್ಕೆ ಬೇಡ ಎಂದು ನಿಯೋಗ ನಿರ್ಮಲಾ ಅವರ ಬಳಿ ಹೇಳಿದೆ.
40 ಸಾವಿರ ರು. ಸಿಗಲಿ
ಪ್ರತಿ ಕ್ವಿಂಟಲ್ ಅಡಿಕೆಗೆ ಕನಿಷ್ಠ 40 ಸಾವಿರ ರು. ದರ ದೊರೆತಲ್ಲಿ ಬೆಳೆಗಾರರಿಗೆ ಅನುಕೂಲವಾಗಲಿದೆ. ಬೆಳೆಗಾರರ ಸಂಕಷ್ಟ ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಬೆಂಬಲ ಬೆಲೆ ಘೋಷಿಸುವಂತೆಯೂ ಆಗ್ರಹಿಸಲಾಯಿತು.
ನಿಯೋಗದಲ್ಲಿ ಯಾರ್ಯಾರಿದ್ದರು?
ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಆಯನೂರು ಮಂಜುನಾಥ,ಜೀವರಾಜ್, ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಹೊಳಲ್ಕೆರೆ ಚಂದ್ರಪ್ಪ, ಕ್ಯಾಂಪ್ಕೋ ಸಂಸ್ಥೆಯ ಕೋಂಕೋಡಿ ಪದ್ಮನಾಭ ನಿಯೋಗದಲ್ಲಿ ಇದ್ದರು.
ಅಡಿಕೆ ಬೆಳೆಯುವ ಜಿಲ್ಲೆಗಳು
ಕರ್ನಾಟಕದಲ್ಲಿ ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿದಂತೆ 13 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಈ ಎಲ್ಲ ಜಿಲ್ಲೆಗಳ ಜನಪ್ರತಿನಿಧಿಗಳು ಮನವಿ ಸಲ್ಲಿಕೆ ನಿಯೋಗದಲ್ಲಿ ಇದ್ದರು.
ಬಂದ್ ಗೆ ಸಿಗದ ಬೆಂಬಲ
ಅಡಿಕೆ ಮತ್ತು ತೆಂಗು ಬೆಳೆಗಾರರ ಹಿತ ಕಾಪಾಡಲು ಕರೆ ನೀಡಿದ್ದ 13 ಜಿಲ್ಲೆಗಳ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಾವಣೆಗೆರೆಯಲ್ಲಿ ಮಾತ್ರ ಬಂದ್ ಬಿಸಿ ತಾಗಿತ್ತು.