ಬೆಳಗಾವಿಯಲ್ಲಿ ಅಮಿತ್ ಶಾ ಹೇಳಿದ 'ಡಬಲ್ ಇಂಜಿನ್ ಸರಕಾರ'ದ ನಿಜವಾದ ಅರ್ಥ ಇದೇನಾ?
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬೆಳಗಾವಿ ಜನಸೇವಕ್ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, "ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಡಬಲ್ ಇಂಜಿನ್ ತರಹ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶೇಕಡಾ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕಾಗಿದೆ" ಎಂದು ಹೇಳಿದ್ದರು.
ಅಮಿತ್ ಶಾ ಅವರ ಬಳಸಿದ ಡಬಲ್ ಇಂಜಿನ್ ಪದಕ್ಕೆ ವಿರೋಧ ಪಕ್ಷಗಳು ವ್ಯಂಗ್ಯವಾಗಿ ನಾನಾರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದರೆ, ಅಮಿತ್ ಶಾ ಅವರು ಗೌಪ್ಯವಾಗಿ ನಡೆಸಿದ ಸಭೆಯಲ್ಲಿನ ಅಂಶಗಳನ್ನು ಗಮನಿಸಿದರೆ, ಈ ಪದದ ಅರ್ಥ ಬೇರೇನಾದರೂ ಇದೆಯಾ ಎನ್ನುವ ಪ್ರಶ್ನೆ ಎದುರಾಗುತ್ತಿದೆ.
ಬೆಳಗಾವಿಯಲ್ಲಿ ಅಮಿತ್ ಶಾ ಭಾಷಣ ಕೇಳಿ ನಗು ತಡೆಯಲಾಗಲಿಲ್ಲ!
"ಅಮಿತ್ ಶಾ ಡಬಲ್ ಇಂಜಿನ್ ತರುತ್ತೇವೆ ಎಂದಿದ್ದಾರೆ. ಡಬಲ್ ಇಂಜಿನ್ ರಾಜ್ಯವನ್ನು ಹಾಳು ಮಾಡಿವೆ. ಬಿಜೆಪಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ" ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದರೆ, "ಅಭಿವೃದ್ಧಿ ಕೆಲಸಗಳು ಆಗಬೇಕೆಂದರೆ ಡಬಲ್ ಎಂಜಿನ್ ಸರ್ಕಾರ ಇರಬೇಕು ಎನ್ನುತ್ತಿದ್ದರು. ಈಗ ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಇನ್ನಾದರೂ ಅಭಿವೃದ್ದಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿ"ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದರು.
ಯಡಿಯೂರಪ್ಪ ಸೇರಿ ಸಂಪುಟದಲ್ಲಿ ಒಟ್ಟು 33 ಸಚಿವರಿದ್ದಾರೆ. ಅದರಲ್ಲಿ, ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಬಂದು ಸಚಿವರಾದವರ ಸಂಖ್ಯೆ ಹನ್ನೆರಡು. ಈ ಹನ್ನೆರಡು ಸಚಿವರ ಕಾರ್ಯವೈಖರಿಯ ಬಗ್ಗೆ ಅಮಿತ್ ಶಾ ಮೆಚ್ಚುಗೆ ವ್ಯಕ್ತ ಪಡಿಸಿದ್ದರಿಂದ ಡಬಲ್ ಇಂಜಿನ್ ಎನ್ನುವ ಪದಕ್ಕೆ ಬೇರೆ ಅರ್ಥವಿದೆಯಾ ಎನ್ನುವ ಗುಮಾನಿ ಎದುರಾಗಿದೆ.
ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ
ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪನವರನ್ನು ಉಲ್ಲೇಖಿಸಿ ಅಮಿತ್ ಶಾ ಡಬಲ್ ಇಂಜಿನ್ ಪದವನ್ನು ಬಳಸಿದ್ದರು. ಆದರೆ, ರಾಜ್ಯ ಭೇಟಿಯ ವೇಳೆ, ಮುಖ್ಯಮಂತ್ರಿಗಳು ಮತ್ತು ಆಯಕಟ್ಟಿನ ಕೆಲವು ಸಚಿವರನ್ನು ಹೊರಗಿಟ್ಟು ಅಮಿತ್ ಶಾ, ಪಕ್ಷದ ಕೆಲವು ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದರು. ಆ ವೇಳೆ, ವಲಸೆ ಬಂದ ಸಚಿವರಿಂದ ಪಕ್ಷದ ಮರ್ಯಾದೆ ಉಳಿದಿದೆ ಎನ್ನುವ ಮಾತನ್ನು ಹೇಳಿದ್ದರು ಎನ್ನುವ ಮಾತಿದೆ. ಹಾಗಾಗಿ.. (ಚಿತ್ರ:ಪಿಟಿಐ)
ಸಿದ್ದರಾಮಯ್ಯನವರ ಶಿಷ್ಯರ ಸಂಖ್ಯೆ ಸಾಕಷ್ಟಿದೆ
ಬಿಎಸ್ವೈ ಸರಕಾರದಲ್ಲಿ ವಲಸೆ ಬಂದು ಸಚಿವರಾಗಿದ್ದ ಹನ್ನೆರಡು ಸಚಿವರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಶಿಷ್ಯರ ಸಂಖ್ಯೆ ಸಾಕಷ್ಟಿದೆ. ಆಪರೇಶನ್ ಕಮಲದ ಮೂಲಕ ಬಂದವರಲ್ಲಿ ಏಳು ಸಚಿವರು ಸಿದ್ದರಾಮಯ್ಯನವರ ಕಟ್ಟಾ ಹಿಂಬಾಲಕರಾಗಿದ್ದವರು. ಹಾಗಾಗಿ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಲಸೆ ಸಚಿವರನ್ನು ಉಲ್ಲೇಖಿಸಿ ಅಮಿತ್ ಶಾ 'ಡಬಲ್ ಇಂಜಿನ್'ಪದವನ್ನು ಬಳಸಿದ್ರಾ ಎಂದು ಪ್ರಶ್ನಿಸುವಂತಾಗಿದೆ. (ಚಿತ್ರ:ಪಿಟಿಐ)
ಅಮಿತ್ ಶಾ ವಲಸೆ ಸಚಿವರ ಕಾರ್ಯವೈಖರಿಗೆ ಬಗ್ಗೆ ಮೆಚ್ಚುಗೆ
ವಲಸೆ ಸಚಿವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ಇಲಾಖೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಜೊತೆಗೂ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ. ಒಂದರ್ಥದಲ್ಲಿ ಅವರಿಂದಾಗಿಯೇ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತಿರುವುದು ಎಂದು ಅಮಿತ್ ಶಾ, ಆ ಸಚಿವರ ಕಾರ್ಯವೈಖರಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. (ಚಿತ್ರ:ಪಿಟಿಐ)
ಡಾ.ಸುಧಾಕರ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಅರುಣ್ ಸಿಂಗ್
ಸಂಪುಟ ವಿಸ್ತರಣೆಯ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಉಸ್ತುವಾರಿ ಅರುಣ್ ಸಿಂಗ್ ಅವರು ಚಿಕ್ಕಬಳ್ಳಾಪುರ ಪ್ರವಾಸದಲ್ಲಿದ್ದ ಡಾ.ಸುಧಾಕರ್ ಅವರು ಬೆಂಗಳೂರಿಗೆ ಕರೆಸಿ ಪ್ರತ್ಯೇಕವಾಗಿ ಸುಮಾರು ನಲವತ್ತು ನಿಮಿಷ ಮಾತನಾಡಿದ್ದರು. ಜೊತೆಗೆ, ವಿಮಾನ ನಿಲ್ದಾಣದ ವರೆಗೂ ಅವರ ಜೊತೆಗೆ ಮಾತುಕತೆ ನಡೆಸಿಕೊಂಡು ಹೋಗಿದ್ದರು. ಇದು ವಲಸೆ ಸಚಿವರ ಬಗ್ಗೆ ದೆಹಲಿ ಬಿಜೆಪಿಯವರು ಇಟ್ಟುಕೊಂಡಿರುವ ವಿಶ್ವಾಸ ಎಂದು ಹೇಳಬಹುದಾಗಿದೆ.
Recommended Video
ಡಬಲ್ ಇಂಜಿನ್, ಬಿಎಸ್ವೈ ಮತ್ತು ವಲಸೆ ಸಚಿವರೋ ಎನ್ನುವ ಪ್ರಶ್ನೆ
ಆದರೆ, ಮೂಲ ಬಿಜೆಪಿ ಸಚಿವರು ಪ್ರವಾಸವನ್ನೂ ನಡೆಸದೇ, ಇಲಾಖೆಯ ಕೆಲಸದ ಕಡೆಗೂ ನಿರುಸ್ಸಾಹ ತೋರುತ್ತಿರುವುದು ಅಮಿತ್ ಶಾ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲಾ ಅಂಶಗಳನ್ನು ಅವಲೋಕಿಸಿದಾಗ ಅಮಿತ್ ಶಾ ಹೇಳಿದ ಡಬಲ್ ಇಂಜಿನ್, ಮೋದಿ ಮತ್ತು ಬಿಎಸ್ವೈ ಅಥವಾ ಬಿಎಸ್ವೈ ಮತ್ತು ವಲಸೆ ಸಚಿವರೋ ಎನ್ನುವ ಪ್ರಶ್ನೆ ಕಾಡುವುದು ಸಹಜ.