ವಿಡಿಯೋ; ಮೇಕೆದಾಟು ಯೋಜನೆ ಬಗ್ಗೆ ಪ್ರಜ್ವಲ್ ಪ್ರಶ್ನೆ, ಕೇಂದ್ರದ ಉತ್ತರ
ಬೆಂಗಳೂರು, ಆಗಸ್ಟ್ 05; ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸಲ್ಲಿಕೆ ಮಾಡಿರುವ ಸಮಗ್ರ ಯೋಜನಾ ವರದಿ (ಡಿಪಿಆರ್)ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಒಪ್ಪಿಗೆ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
ಗುರುವಾರ ಲೋಕಸಭೆ ಕಲಾಪದಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮೇಕೆದಾಟು ಯೋಜನೆ ಕುರಿತು ವಿಚಾರ ಪ್ರಸ್ತಾಪ ಮಾಡಿದರು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸಂಸದರ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.
ಮೇಕೆದಾಟು ಯೋಜನೆ; ಸರ್ವಪಕ್ಷಗಳ ಸಭೆ ಕರೆಯಲಿದ್ದಾರೆ ಸಿಎಂ
'ಲೋಕಸಭೆಯ ಅಧಿವೇಶನದಲ್ಲಿ ಇಂದು ಮೇಕೆದಾಟು ಯೋಜನೆಯ ಪರ ಧ್ವನಿ ಎತ್ತುವ ಮೂಲಕ ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು ಅನ್ನೋದನ್ನು ಪ್ರತಿಪಾದಿಸಿದೆ, ಕಾವೇರಿ ನೀರಿನ ವಿಚಾರದಲ್ಲಿ ಅನ್ಯರಾಜ್ಯಗಳಿಗೆ ಅನ್ಯಾಯವಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ನಿರ್ವಹಿಸುವ ಮೂಲಕ ಮೇಕೆದಾಟು ಯೋಜನೆಯನ್ನು ರಾಜ್ಯ ಪ್ರಾರಂಭಿಸುತ್ತದೆ' ಎಂದು ಪ್ರಜ್ವಲ್ ರೇವಣ್ಣ ಟ್ವೀಟ್ ಮಾಡಿದ್ದಾರೆ.
ಯಾರೇ ಅಡ್ಡಿ ಬಂದರೂ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ: ಸಿಎಂ ಬೊಮ್ಮಾಯಿ
ಗಜೇಂದ್ರ ಸಿಂಗ್ ಶೆಖಾವತ್, "ಮೇಕೆದಾಟು ಯೋಜನೆ ಡಿಪಿಆರ್ಗೆ ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಒಪ್ಪಿಗೆ ಅಗತ್ಯವಿದೆ. ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಒಪ್ಪಿಗೆ ಪಡೆಯಬೇಕು. ಕರ್ನಾಟಕ ಡಿಪಿಆರ್ ಸಲ್ಲಿಕೆ ಮಾಡಿದಾಗಲೇ ಇದನ್ನು ಸ್ಪಷ್ಟಪಡಿಸಲಾಗಿತ್ತು" ಎಂದು ಸಚಿವರು ಲೋಕಸಭೆಗೆ ಉತ್ತರಿಸಿದರು.
ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ; ತಮಿಳುನಾಡು ಸಚಿವ
"ಯೋಜನೆಯ ಡಿಪಿಆರ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಯನ್ನೂ ನೀಡಲಾಗಿಲ್ಲ. ಕೇಂದ್ರ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಕರ್ನಾಟಕ ಭಾವಿಸಿದರೂ ಸಹ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತಂದು ಅನುಮತಿ ಪಡೆಯಬೇಕು" ಎಂದು ಸಚಿವರು ಉತ್ತರದಲ್ಲಿ ಸ್ಪಷ್ಟಪಡಿಸಿದರು.
"ಮೇಕೆದಾಟು ಯೋಜನೆ ಕುರಿತು ಕರ್ನಾಟಕ ಸಲ್ಲಿಕೆ ಮಾಡಿರುವ ಅರ್ಜಿಯ ಪರಿಶೀಲನೆಗೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ. ಈ ಸಂಬಂಧ ಅಗತ್ಯವಿರುವ ದಾಖಲೆಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ" ಎಂದು ಕೇಂದ್ರ ಸರ್ಕಾರ ತನ್ನ ಉತ್ತರದಲ್ಲಿ ಹೇಳಿದೆ.
ತಮಿಳುನಾಡಿಗೆ ಅನ್ಯಾಯವಾಗಲ್ಲ; ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಗುರುವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಜ್ವಲ್ ರೇವಣ್ಣ, "ಮೇಕೆದಾಟು ಯೋಜನೆ ನಮ್ಮ ಹಕ್ಕು. ನಮಗೆ ಮೀಸಲಿಟ್ಟಿರುವ ಪ್ರಮಾಣದ ನೀರನ್ನು ನಾವು ಬಳಕೆ ಮಾಡುವತ್ತ ಗಮನ ಹರಿಸುತ್ತಿದ್ದೇವೆಯೇ ಹೊರತು ತಮಿಳುನಾಡಿಗೆ ಯಾವುದೇ ರೀತಿಯಾದ ಅನ್ಯಾಯವಾಗುತ್ತಿಲ್ಲ" ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ, 'ಈ ಯೋಜನೆಗೆ ಒಕ್ಕೂಟ ಸರ್ಕಾರ ಶೀಘ್ರವೇ ಅನುಮತಿ ನೀಡಬೇಕು, ರಾಜ್ಯ ಬಿಜೆಪಿ ಸರ್ಕಾರ ಕೂಡ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆಗೆ ಅನುಮತಿ ಪಡೆಯಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇನೆ' ಎಂದು ಗುರುವಾರ ಟ್ವೀಟ್ ಸಹ ಮಾಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅಣ್ಣಾಮಲೈ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅಣ್ಣಾಮಲೈ ರಾಜಕೀಯ ಕಾರಣಕ್ಕಾಗಿ ಪ್ರತಿಭಟನೆ ಮಾಡಬಹುದು. ಅವರನ್ನು ದೊಡ್ಡ ಮನುಷ್ಯನನ್ನಾಗಿ ಮಾಡಬೇಕಿಲ್ಲ. ಸುಪ್ರೀಂಕೋರ್ಟ್ ಬೆಂಗಳೂರು ನಗರಕ್ಕೆ ಕುಡಿಯುವ ಉದ್ದೇಶಕ್ಕೆ 6 ಟಿಎಂಸಿಯಷ್ಟು ಹೆಚ್ಚುವರಿ ನೀರು ಹಂಚಿಕೆ ಮಾಡಿದೆ. ಅದಕ್ಕಾಗಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ" ಎಂದು ಬೆಂಗಳೂರಿನಲ್ಲಿ ಹೇಳಿದರು.
"ತಮಿಳುನಾಡು ಹಿಂದಿನಿಂದಲೂ ಕರ್ನಾಟಕದ ಎಲ್ಲಾ ಯೋಜನೆಗಳಿಗೂ ಅಡ್ಡಿ ಮಾಡುತ್ತಲೇ ಬಂದಿದೆ. ಪ್ರತಿಭಟನೆ ಮಾಡಿದರೆ ಐ ಡೋಂಟ್ ಕೇರ್, ಅನುಮತಿ ತೆಗೆದುಕೊಂಡು ಯೋಜನೆ ಮಾಡೇ ತೀರುತ್ತೇವೆ" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
Recommended Video
ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಬಸವರಾಜ ಬೊಮ್ಮಾಯಿ "ಮೇಕೆದಾಟು ಯೋಜನೆ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗುತ್ತದೆ. ನೆಲ, ಜಲ ಮತ್ತು ಭಾಷೆಯ ವಿಚಾರಗಳು ಬಂದಾಗ ಎಲ್ಲಾ ಪಕ್ಷಗಳು ಒಟ್ಟಾಗಿ ಸಾಗಬೇಕಾಗುತ್ತದೆ" ಎಂದು ಹೇಳಿದ್ದರು.