25 ಇದ್ದದ್ದು 2, 105 ಇದ್ದದ್ದು 10 ಆಗುವ ಮುನ್ನ ಮೋದಿ ಎಚ್ಚೆತ್ತುಕೊಳ್ಳಲಿ
ಹದಿನೈದು, ಹದಿನೆಂಟು ಸೀಟು ಬರಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದ ರಾಜ್ಯ ಬಿಜೆಪಿ ಮುಖಂಡರಿಗೆ, ಊಹಿಸಲೂ ಅಸಾಧ್ಯವಾದ ಮ್ಯಾನ್ ಡೇಟ್ ಅನ್ನು ಮತದಾರ ಕೊಟ್ಟಿದ್ದ. ಅದರಲ್ಲಿ ಉತ್ತರ ಕರ್ನಾಟಕದ ಮತ್ತು ಪ್ರವಾಹ ಪೀಡಿತ ಕ್ಷೇತ್ರಗಳು ಎಷ್ಟು?
ಕಂಡು ಕೇಳರಿಯದ ಅತಿವೃಷ್ಟಿಯಿಂದ ತೊಂದರೆಗೊಳಗಾದ ಲೋಕಸಭಾ ಕ್ಷೇತ್ರಗಳು ಹದಿಮೂರು. ಈ ಎಲ್ಲಾ ಕ್ಷೇತ್ರಗಳಲ್ಲಿ ಒಂದನ್ನೂ ಬಿಡದಂತೆ ಬಿಜೆಪಿ ಬಾಚಿಕೊಂಡಿತ್ತು. ಕಾರಣ, ಮೋದಿ ಮೇಲಿನ ವಿಶ್ವಾಸದಿಂದ. ಆದರೆ, ಮೋದಿ ಸರಕಾರ ಮಾಡುತ್ತಿರುವುದೇನು?
ಆಡ್ವಾಣಿಯನ್ನು ಮೂಲೆಗುಂಪು ಮಾಡಿದ್ದ ಅಮಿತ್ ಶಾ ಗ್ಯಾಂಗ್ ಈಗ ಬಿಎಸ್ವೈ ಹಿಂದೆ?
25 ಸಂಸದರನ್ನು ಕಳುಹಿಸಿಕೊಟ್ಟ ಕರ್ನಾಟದಿಂದ ಮೂವರು ಕೇಂದ್ರ ಮಂತ್ರಿಗಳಾಗಿದ್ದಾರೆ. ಜೊತೆಗೆ, ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಬೇರೆ. ಇದರಲ್ಲಿ, ಉತ್ತರ ಕರ್ನಾಟಕದ ಸಚಿವರು ಇಬ್ಬರು. ಸುರೇಶ್ ಅಂಗಡಿ ಮತ್ತು ಪ್ರಲ್ಹಾದ್ ಜೋಷಿ.
ಬಿಬಿಎಂಪಿ ಮೇಯರ್ ಅಚ್ಚರಿಯ ಆಯ್ಕೆ: ತೆರೆಯ ಹಿಂದಿನ ಬಿಜೆಪಿಯ ಅಸಲಿಯತ್ತುಗಳೇ ಬೇರೆ
ಇದರಲ್ಲಿ ಜೋಷಿಯವರದ್ದು ಸಂಸದೀಯ ವ್ಯವಹಾರಗಳ ಖಾತೆ. ಅಂದರೆ, ಪ್ರಧಾನಿಗೆ ಅತ್ಯಂತ ನಿಕಟವಾಗಿರುವ ಹುದ್ದೆ. ಹೋದಲ್ಲಿ, ಬಂದಲ್ಲಿ, ತಮ್ಮನ್ನು ಆರಿಸಿ ಕಳುಹಿಸಿರುವ ಕ್ಷೇತ್ರದ ನೈಜ ಚಿತ್ರಣವನ್ನು, ವಸ್ತುಸ್ಥಿತಿಯನ್ನು ವಿವರಿಸಬಹುದಾಂತಹ ಖಾತೆಯದು.
ಕೋಟ್ಯಾಂತರ ರೂಪಾಯಿ ಸಿಎಂ ಪ್ರವಾಹ ವಿಕೋಪ ನಿಧಿಗೆ ಹರಿದುಬಂತು
ಒಂದೋ ಅತಿವೃಷ್ಟಿ, ಇಲ್ಲವೋ ಅನಾವೃಷ್ಟಿ ರಾಜ್ಯಕ್ಕೆ ಹೊಸದೇನಲ್ಲ. ಆದರೆ, ಈ ಬಾರಿಯ ವರುಣನ ರುದ್ರನರ್ತನ ಆಭಾಗದ ಜನರ ನೆಮ್ಮದಿ, ಮನೆಮಠ, ಆತ್ಮವಿಶ್ವಾಸ ಎಲ್ಲವನ್ನೂ ಕಸಿದುಕೊಂಡಿದೆ. ಮಾನವೀಯತೆಗೆ ಯಾವ ಊರಾದರೇನು ಎಂದು ರಾಜ್ಯದ ಜನತೆ, ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸಿತು. ಮುಖ್ಯಮಂತ್ರಿಗಳ ಕರೆಗೆ ಕೋಟ್ಯಾಂತರ ರೂಪಾಯಿ ಸಿಎಂ ಪ್ರವಾಹ ವಿಕೋಪ ನಿಧಿಗೆ ಹರಿದುಬಂತು.
ಜನತೆಯ ಮೇಲೆ ಕೇಂದ್ರಕ್ಕೆ ಕನಿಷ್ಠ ಕೃತಜ್ಣತೆ ಬೇಡವೇ?
ಆದರೆ, ಈ ಮಟ್ಟಿನ ಗೆಲುವು ತಂದುಕೊಟ್ಟ ಜನತೆಯ ಮೇಲೆ ಕೇಂದ್ರಕ್ಕೆ ಕನಿಷ್ಠ ಕೃತಜ್ಣತೆ ಬೇಡವೇ? ಸಾರ್ವಜನಿಕರ ಮತ್ತು ವಿಪಕ್ಷಗಳ ಟೀಕೆಗೆ ಗೃಹಸಚಿವರೊಮ್ಮೆ, ಹಣಕಾಸು ಸಚಿವರು ಇನ್ನೊಮ್ಮೆ ವೈಮಾನಿಕ ಸಮೀಕ್ಷೆ ಮಾಡಿ ಹೋದರು. 25 ರೂಪಾಯಿ ಅಥವಾ 105 ರೂಪಾಯಿಯ ಪ್ರಯೋಜನವಾಗಲಿಲ್ಲ. ಹೆಲಿಕಾಪ್ಟರ್ ಇಂಧನ ವೇಸ್ಟ್ ಆಗಿದ್ದೇ ಬಂತು (ಇದೂ ಸಾರ್ವಜನಿಕರ ತೆರಿಗೆ ದುಡ್ಡಲ್ಲವೇ, ಹಾಗಾಗಿ..)
ಬೆಂಗಳೂರು ದಕ್ಷಿಣ ಸಂಸದರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು
ಕೇವಲ ಮೋದಿ ಹೆಸರಿನಿಂದಲೇ ಸಂಸದರಾಗಿ ಆಯ್ಕೆಯಾದ ಬೆಂಗಳೂರು ದಕ್ಷಿಣ ಸಂಸದರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ವಸ್ತುಸ್ಥಿತಿ ಮಾತನಾಡಿ ಯುವ ಸಂಸದರೇ ಅಂದರೆ, " ಕೇಂದ್ರ ಸರ್ಕಾರವು 14ನೇ ಹಣಕಾಸು ಆಯೋಗದ ಶಿಪಾರಸ್ಸಿನ ಪ್ರಕಾರ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ನೀಡಿದೆ. ಹಾಗಾಗಿ, ನರೆ ಸಂತ್ರಸ್ಥರ ಪುನರ್ವಸತಿಗೆ ರಾಜ್ಯ ಸರಕಾರ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗುವ ಅವಶ್ಯಕತೆ ಇಲ್ಲ" ಎಂದು ಬಿಡುವುದೇ?
ಬೆಂಗಳೂರಿನ ಪೀಣ್ಯಗೆ ಬಂದಿದ್ದ ಪ್ರಧಾನಿ
ಕೇರಳದ ಕೆಲವು ಜಿಲ್ಲೆ ಪ್ರವಾಹಕ್ಕೆ ಈಡಾದಾಗ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ, ಕರ್ನಾಟಕಕ್ಕೆ ಕಾಲಿಡಲೇ ಇಲ್ಲ. ಬೆಂಗಳೂರಿನ ಪೀಣ್ಯಗೆ ಬಂದಿದ್ದ ಪ್ರಧಾನಿ, ಉತ್ತರ ಕರ್ನಾಟಕಕ್ಕೂ ತೆರಳಿ ಸಮೀಕ್ಷೆ ನಡೆಸಿದ್ದರೆ, ಮೋದಿ..ಮೋದಿ.. ಎನ್ನುತ್ತಿದ್ದ ಜನರಿಗೆ ಹೊಸ ಆಶಾಭಾವನೆಯಾದರೂ ಮೂಡುತ್ತಿತ್ತು. ಒಂದೇ ಒಂದು ಬಿಜೆಪಿ ಸಂಸದರು ಇಲ್ಲದ ಕೇರಳಕ್ಕೆ ಕೇಂದ್ರದಿಂದ ಕೋಟ್ಯಾಂತರ ಪರಿಹಾರದ ಪ್ಯಾಕೇಜ್ ಬಂತು. ಬರಲಿ.. ಅದು ನಮ್ಮ ದೇಶದ ರಾಜ್ಯಗಳಲ್ಲಿ ಒಂದು..
ಮೋದಿ ಸರಕಾರ taken for granted ಎಂದು ತಿಳಿದುಕೊಂಡಿದೆಯಾ?
25 ಸಂಸದರನ್ನು ಗೆಲ್ಲಿಸಿಕೊಟ್ಟ ನರೇಂದ್ರ ಮೋದಿ ಸರಕಾರ ರಾಜ್ಯದ ಜನತೆಯನ್ನು taken for granted ಎಂದು ತಿಳಿದುಕೊಂಡಿದೆಯಾ? ಸತತವಾಗಿ ಗೆದ್ದುಬರುತ್ತಿರುವ ಸಂಸದರು, ಸಚಿವರುಗಳಿಗೆ ಕೇಂದ್ರ ಸರಕಾರದಿಂದ ಪರಿಹಾರ ಕೊಡಿಸುವಷ್ಟು ಗಟ್ಟಿತನ ಇಲ್ಲವೇ? ಕೇಂದ್ರ ಸರಕಾರದ ಮೇಜು ಕುಟ್ಟಿ ಪರಿಹಾರ ಕೊಡಿ, ನೀವೇನೂ ಪುಕ್ಸಟೆ ಕೊಡುತ್ತಿಲ್ಲ, ಎಂದು ಮಾತನಾಡುವ ಶಕ್ತಿಯನ್ನು ಮುಖ್ಯಮಂತ್ರಿಗಳು ಕಳೆದುಕೊಂಡಿದ್ದಾರಾ?
25 ಸಂಸದರು ಇದ್ದದ್ದು 2, 105 ಶಾಸಕರು ಇದ್ದದ್ದು 10
ರಾಜ್ಯ ಸಚಿವ ಮಾಧುಸ್ವಾಮಿ ಹುಬ್ಬಳ್ಳಿಯಲ್ಲಿ ಪರಿಹಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, "ನೀವೇನೂ ಡಿಕ್ಟೇಟರ್ ಗಳಾ, ಡೋಂಟ್ ಲೀಡ್ ಮಿ ಐ ಸೇ" ಎಂದು ಉಢಾಫೆಯ ಉತ್ತರವನ್ನು ನೀಡಿದ್ದಾರೆ. ರೈತರು, ಪ್ರವಾಹ, ಪರಿಹಾರದ ಬಗ್ಗೆ ಅಸೆಂಬ್ಲಿಯಲ್ಲಿ ಗಂಟೆಗಟ್ಟಲೆ ಮಾತನಾಡಿದ ಕೀರ್ತಿಯಿವರದ್ದು. Sky is the limit ತಾಳ್ಮೆಗೂ ಒಂದು ಮಿತಿಯಿರುತ್ತದೆ. 25 ಸಂಸದರು ಇದ್ದದ್ದು 2, 105 ಶಾಸಕರು ಇದ್ದದ್ದು 10 ಆಗುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚೆತ್ತುಕೊಳ್ಳಲಿ.