ಅಸಮರ್ಥ ಕೇಂದ್ರ ಗೃಹ ಸಚಿವ, ಅವಿವೇಕಿ ಪ್ರಧಾನಿ: ದೇಶ ಅಧೋಗತಿಗೆ
ಬೆಂಗಳೂರು, ಜ 27: ರಾಜಧಾನಿ ದೆಹಲಿಯಲ್ಲಿ ದಿಕ್ಕುತಪ್ಪಿದ ರೈತರ ಹೋರಾಟದ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಆರೋಪ,ಪ್ರತ್ಯಾರೋಪ ನಡೆಸುತ್ತಿದೆ.
ಕೆಂಪು ಕೋಟೆಗೆ ರೈತರು ನುಗ್ಗಲು ಕಾಂಗ್ರೆಸ್ ಪ್ರೇರಣೆಯೇ ಕಾರಣ ಎಂದು ರಾಜ್ಯ ಬಿಜೆಪಿ ಆರೋಪಿಸಿದ್ದರೆ, ಇದಕ್ಕೆಲ್ಲಾ ನಿಮ್ಮ ಅಸಮರ್ಥ ಆಡಳಿತವೇ ಕಾರಣ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಪ್ರಧಾನಿ, ಗೃಹ ಸಚಿವರೇ ಎಲ್ಲಿ ಅಡಗಿ ಕೂತಿದ್ದೀರಾ? 'ರಿಸೈನ್ ಅಮಿತ್ ಶಾ' ಫುಲ್ ಟ್ರೆಂಡಿಂಗ್
ನಿನ್ನೆಯ ಘಟನೆಗೆ ಕಾಂಗ್ರೆಸ್ ನೇರ ಕಾರಣ, ದೇಶದ ಕ್ಷಮೆಯಾಚಿಸಬೇಕೆಂದು ರಾಜ್ಯ ಬಿಜೆಪಿ ಐಟಿ ಶೆಲ್ ಟ್ವೀಟ್ ಮಾಡಿತ್ತು. ಇದಕ್ಕೆ ಕಾಂಗ್ರೆಸ್ ಸಾಲುಸಾಲು ಟ್ವೀಟ್ ಮಾಡಿ, ಅವಿವೇಕಿ ಪ್ರಧಾನಿಯಿಂದಾಗಿ ದೇಶ ಅಧೋಗತಿಗೆ ಸಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದೆ.
ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಖವಾಡ ಕಳಚಿತು
"ಪ್ರತಿಭಟನಾಕಾರರನ್ನು ಕೆಂಪುಕೋಟೆಗೆ ನುಗ್ಗಲು ಪ್ರೇರೇಪಿಸಿದ @INCIndia ದೇಶದ ಕ್ಷಮೆ ಕೇಳಬೇಕು. ಇದು ದೇಶದ ಮೇಲೆ ಕಾಂಗ್ರೆಸ್ ನಡೆಸಿದ ದಾಳಿ. ಟ್ರ್ಯಾಕ್ಟರ್ ಜಾಥಾ ಮಾಡುತ್ತೇವೆ ಎಂದು ಹೇಳಿದ್ದ ಪ್ರತಿಭಟನಾಕಾರರು, ಪೊಲೀಸರ ಮೇಲೆ ಟ್ರ್ಯಾಕ್ಟರ್ ಓಡಿಸಲು ಕಾಂಗ್ರೆಸ್ ದುಷ್ಪ್ರೇರಣೆಯೇ ನೇರ ಕಾರಣ" ಇದು ಬಿಜೆಪಿ ಮಾಡಿದ್ದ ಟ್ವೀಟ್.
ತಿಂಗಳಿಂದ ರೈತರು ತಮ್ಮ ಮಾತು ಕೇಳಬೇಕೆಂದು ಪ್ರತಿಭಟಿಸುತ್ತಿದ್ದಾರೆ
ಇದಕ್ಕೆ ಕಾಂಗ್ರೆಸ್ ಸಾಲುಸಾಲು ಟ್ವೀಟ್ ಹೀಗಿದೆ:, "ಅವಿವೇಕಿ @BJP4Karnataka ಪಕ್ಷವೇ. ತಿಂಗಳಿಂದ ರೈತರು ತಮ್ಮ ಮಾತು ಕೇಳಬೇಕೆಂದು ಪ್ರತಿಭಟಿಸುತ್ತಿದ್ದಾರೆ, 100ಕ್ಕೂ ಹೆಚ್ಚು ರೈತರು ಮೃತರಾಗಿದ್ದಾರೆ. ಆದರೆ @narendramodi @AmitShah ಅವರಿಗೆ ರೈತರಲ್ಲಿ ಮಾತನಾಡುವ ಸೌಜನ್ಯವಿರಲಿಲ್ಲ. 11 ಕಾಟಾಚಾರದ ಸಭೆಗಳು ವಿಫಲವಾಗಿವೆ ಎಂದರೆ ನಿಮ್ಮ ಕಾಯ್ದೆಗಳನ್ನ ಸಮರ್ಥನೀಯ ಅಂಶವಿಲ್ಲ ಎಂದರ್ಥ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅಸಮರ್ಥ ಕೇಂದ್ರ ಗೃಹ ಸಚಿವ, ಅವಿವೇಕಿ ಪ್ರಧಾನಿ
"ಇಷ್ಟು ದಿನ ಶಾಂತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿಸಿದ್ದೇ ಬಿಜೆಪಿ. ಗೃಹಸಚಿವ @AmitShah ಅವರ ಅಸಾಮರ್ಥ್ಯ, ಗುಪ್ತಚರ ವೈಫಲ್ಯ, ಪ್ರತಿಭಟನಕಾರರೊಳಗೆ ಸೇರಿದ ಬಿಜೆಪಿ ಪ್ರೇರಿತ ಉಗ್ರರು ಕಾಯ್ದೆ ಹಿಂಪಡೆಯದ ಬಂಡತನ, ಅವಿವೇಕಿ ಪ್ರಧಾನಿಯಿಂದ ದೇಶ ಅಧೋಗತಿಗೆ ಸಾಗುತ್ತಿದೆಯಲ್ಲವೇ @BJP4Karnataka?" - ಕಾಂಗ್ರೆಸ್ ಮಾಡಿರುವ ಟ್ವೀಟ್.
ಕೆಂಪು ಕೋಟೆ ಲಗ್ಗೆ ಹಾಕಿದ್ದು ಕಾಂಗ್ರೆಸ್'ನವರಲ್ಲ ರೈತರು
"@BJP4Karnataka, @AmitShah ಅವರ ಅಸಮರ್ಥ್ಯಕ್ಕೆ ಇಂದಿನ ಘಟನೆ ಸಾಕ್ಷಿ. ಇಂಟಲಿಜೆನ್ಸ್ ವೈಫಲ್ಯದ ಕನ್ನಡಿ. ರೈತರ ಬೇಡಿಕೆ ಕೇಳದ ಪರಿಣಾಮ ಈ ಬೆಳವಣಿಗೆಗಳು, ಕಾಯ್ದೆ ಹಿಂಪಡೆಯದಿದ್ದಿದ್ದೆ ಇದಕ್ಕೆ ಕಾರಣ. ಕೆಂಪು ಕೋಟೆ ಲಗ್ಗೆ ಹಾಕಿದ್ದು ಕಾಂಗ್ರೆಸ್'ನವರಲ್ಲ ರೈತರು. ನಿಮ್ಮ ಧೋರಣೆ ಬದಲಾಗದಿದ್ದರೆ ಪ್ರಧಾನಿ ಕಛೇರಿಗೂ ಮುತ್ತಿಗೆ ಹಾಕುವರು" ಕಾಂಗ್ರೆಸ್ ಟ್ವೀಟ್.
Recommended Video
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
"@BJP4India ಮತ್ತು @BJP4Karnataka ಸರ್ಕಾರಗಳು ತಮ್ಮ ಕಾರ್ಪೊರೇಟ್ ಧಣಿಗಳಿಗಾಗಿ ಕರಾಳ ಕಾಯ್ದೆಗಳ ಮೂಲಕ ರೈತರ ಬದುಕನ್ನೇ ಮುಗಿಸಲು ರೂಪಿಸಿದ ಷಡ್ಯಂತ್ರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಸ್ಪಷ್ಟಪಡಿಸಿದಂತೆ ಕಾಂಗ್ರೆಸ್ ಎಂದೆಂದಿಗೂ ರೈತರ ಬೆಂಬಲಕ್ಕೆ ನಿಲ್ಲಲಿದೆ" ಎಂದು ಕಾಂಗ್ರೆಸ್ ಇನ್ನೊಂದ್ ಟ್ವೀಟ್ ಮಾಡಿದೆ.