ಕನ್ನಡ ದಿನಪತ್ರಿಕೆಗಳ ಕಣ್ಣಲ್ಲಿ ಕೇಂದ್ರ ಬಜೆಟ್ 2018
ಬೆಂಗಳೂರು, ಫೆಬ್ರವರಿ 02: ಮೋದಿ ಸರ್ಕಾರದ ಈ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಹೇಗಿರುತ್ತೆ ಎಂಬ ಕುತೂಹಲ ನಿನ್ನಯೇ ತಣಿದಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 21.47 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ.
ನಿನ್ನೆ(ಫೆ.1)ವಿತ್ತ ಸಚಿವರ ಬಜೆಟ್ ಭಾಷಣವನ್ನು ಸಂಪೂರ್ಣ ಆಲಿಸಿದ್ದರೂ, ಸುದ್ದಿವಾಹಿನಿಗಳಲ್ಲಿ ಚರ್ಚೆ ಕೇಳಿದ್ದರೂ ಸವಿರಕ್ಕಾಗಿ ಇಂದು ಬೆಳಗ್ಗಿನ ದಿನಪತ್ರಿಕೆಗಾಗಿ ಕಅಯುತ್ತ ಕುಳಿತವರು ಇದ್ದೇ ಇದ್ದಾರೆ.
ಬಜೆಟ್ 2018: ಯಾವುದು ಏರಿಕೆ? ಯಾವುದು ಇಳಿಕೆ?
ಬಜೆಟ್ ನ ಸಂಪೂರ್ಣ ವಿವರಗಳನ್ನು ಹೊಂದಿರುವ ಬಣ್ಣ ಬಣ್ಣದ ಪುಟಗಳೊಂದಿಗೆ, ಅರ್ಥವತ್ತಾದ ಕಾರ್ಟೂನ್ ಗಳೊಂದಿಗೆ, ರಸವತ್ತಾದ ಶೀರ್ಷಿಕೆಯೊಂದಿಗೆ ಬೆಳಿಗ್ಗೆ ಮನೆ ಬಾಗಿಲಿಗೆ ಬಂದ ಕನ್ನಡ ದಿನಪತ್ರಿಕೆಗಳು ಬಜೆಟ್ ಅನ್ನು ವಿಶ್ಲೇಷಿಸಿದ್ದು ಹೇಗೆ?
ಕನ್ನಡದ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಕಣ್ಣಲ್ಲಿ ಕೇಂದ್ರ ಬಜೆಟ್ 2018 ಕಂಡಿದ್ದು ಹೇಗೆ ಎಂಬ ವಿವರನ್ನು ಒನ್ ಇಂಡಿಯಾ ಇಲ್ಲಿ ನೀಡಿದೆ.
ವ್ಯಂಗ್ಯ, ಕುಹಕ, ಆಕ್ರೋಶದ ಸರಕಾಯ್ತೇ ಕೇಂದ್ರ ಬಜೆಟ್?!
ಜೇಟ್ಲಿ ಮನಿ ಕೀ ಬಾತ್
'ಅರ್ಬನ್ ಇಂಡಿಯಾದಿಂದ ಕಿತ್ತು ಗ್ರಾಮೀಣ ಭಾರತಕ್ಕೆ ಒತ್ತು' ಎಂದು ಬಜೆಟ್ ಅನ್ನು ಮಾರ್ಮಿಕವಾಗಿ ವಿಶ್ಲೇಷಿಸಿದೆ ಕನ್ನಡ ಪ್ರಭ. ಜೊತೆಗೆ 'ಇದು ಜೇಟ್ಲಿ ಮನೀ ಕೀ ಬಾತ್' ಎಂಬ ಒಗ್ಗರಣೆಯಂತೂ ಹೆಚ್ಚು ಗಮನ ಸೆಳೆಯುತ್ತದೆ. 'ಆಪರೇಷನ್ ಭಾರತ್' ಎಂಬ ಶೀರ್ಷಿಕೆಯೊಂದಿಗೆ ನಗರ ಭಾರತದ ಬಹುಮಹಡಿ ಕಟ್ಟಡದ ಮೇಲೆ ನಿಂತ ಜೇಟ್ಲಿ, ಗ್ರಾಮೀಣ ಭಾರತಕ್ಕೆ ಬುಟ್ಟಿ ತುಂಬ ದುಡ್ಡು ಚೆಲ್ಲುತ್ತಿರುವ ಚಿತ್ರವೂ ಸಂದರ್ಭೋಚಿತ ಅನ್ನಿಸಿದೆ. '
ಆರೋಗ್ಯಮಾನ್ ಭವ
"ದೇಶದ ಜನರ ಆರೋಗ್ಯಕ್ಕೆ ಮೋದಿ ಸರ್ಕಾರ ಒತ್ತು, 50 ಕೋಟಿ ಮಂದಿಗೆ 5 ಲಕ್ಷ ರೂ ವರೆಗೆ ಚಿಕಿತ್ಸೆ ನೆರವು, ರೈತರು ಗ್ರಾಮೀಣ ಭಾಗದ ಅಭಿವೃದ್ಧಿಗೆ ಆದ್ಯತೆ, ಆದಾಯ ತೆರಿಗೆ ಮಿತಿ ಯಥಾಸ್ಥಿತಿ, ಡಿಜಿಟಲ್ ಭಾರತಕ್ಕೆ ಇಂಬು, ರಕ್ಷಣೆ, ಆರ್ಥಿಕ ಸುಧಾರಣೆಗೆ ಸಿಗದ ಮಹತ್ವ, ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 17 ಸಾವಿರ ಕೋಟಿ" ಎಂದು ಬಜೆಟ್ ನ ಆದ್ಯತೆಯನ್ನು ಕೆಲವೇ ಸಾಲುಗಳಲ್ಲಿ ವಿವರಿಸಿರುವ ವಿಶ್ವವಾಣಿ 'ಆರೋಗ್ಯಮಾನ್ ಭವ' ಎಂಬ ಶೀರ್ಷಿಕೆ ನೀಡಿ, ಈ ಬಾರಿಯ ಬಜೆಟ್ ನಲ್ಲಿ ಆರೋಗ್ಯಕ್ಕೇ ಮಹತ್ವ ಹೆಚ್ಚು ಎಂಬುದನ್ನು ಸೂಚ್ಯವಾಗಿ ಹೇಳಿದೆ.
ಗ್ರಾಮೀಣರತ್ತ ಲಕ್ಷ್ಯ, ಮಧ್ಯಮವರ್ಗ ಅಲಕ್ಷ್ಯ
ಕೇಂದ್ರ ಬಜೆಟ್ 2018-19, ಬದಲಾಗದ ತೆರಿಗೆ ವಿನಾಯಿತಿ ಮಿತಿ, ಬಂಡವಾಳದ ಮೇಲಿನ ಗಳಿಕೆಗೆ ತೆರಿಗೆ ಎಂಬ ಕಿನ್ನರ್ ಗಳೊಂದಿಗೆ 'ಗ್ರಾಮೀಣರತ್ತ ಲಕ್ಷ್ಯ, ಮಧ್ಯಮವರ್ಗ ಅಲಕ್ಷ್ಯ' ಎಂಬ ಅರ್ಥವತ್ತಾದ ಶೀರ್ಷಿಕೆಯೊಂದಿಗೆ ಸಂಪೂರ್ಣ ಬಜೆಟ್ ನ ಸಾರವನ್ನು ಒಂದೇ ಸಾಲಿನಲ್ಲಿ ಹಿಡಿದಿಟ್ಟಿದೆ ಪ್ರಜಾವಾಣಿ.
ಹಳ್ಳಿ ಹಾಡು ಜನಪರ ಜಾಡು
"ದೇಶದಾದ್ಯಂತ 8 ಕೋಟಿ ಮಹಿಳೆಯರಿಗೆ ಉಚಿತ ಎಲ್ ಪಿಜಿ, 10 ಕೋಟಿ ಕುಟುಂಬಗಳಿಗೆ ಉಚಿತ ವಿಮೆ, 4 ಕೋಟಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ" ಎಂದು ಬಜೆಟ್ ಅನ್ನು ಹಾಡಿ ಹೊಗಳಿರುವ ವಿಜಯವಾಣಿ 'ಹಳ್ಳಿ ಹಾಡು ಜನಪರ ಜಾಡು' ಎಂಬ ಶೀರ್ಷಿಕೆ ನೀಡಿದೆ.
ಮೋದಿ ಗ್ರಾಮರಾಜ್ಯ
'ಮೋದಿ ಗ್ರಾಮ ರಾಜ್ಯ' ಎಂಬ ಶೀರ್ಷಿಕೆಯೊಂದಿಗೆ ಈ ಬಾರಿಯ ಬಜೆಟ್ ನ ಮೊದಲ ಆದ್ಯತೆ 'ಗ್ರಾಮ' ಎಂಬುದನ್ನು ಶೀರ್ಷಿಕೆಯಲ್ಲೇ ಹೇಳಿರುವ ಹೊಸ ದಿಗಂತ ಬಜೆಟ್ ಗಾಗಿಯೇ ನಾಲ್ಕು ವಿಶೇಷ ಪುಟಗಳನ್ನು ಮೀಸಲಿಟ್ಟಿದೆ.
ನವೋದಯಕ್ಕೆ ರಾಮಬಾಣ
ದೇಶದ ಸಮಗ್ರ ವಿಕಾಸದ ವಿಶ್ವರೂಪ ದರ್ಶನ ಎಂದು ಬಜೆಟ್ ಅನ್ನು ವ್ಯಾಖ್ಯಾನಿಸಿರುವ ಸಂಯುಕ್ತ ಕರ್ನಾಟಕ, 'ನವೋದಯಕ್ಕೆ ರಾಮಬಾಣ' ಎಂಬ ಶೀರ್ಶಶಿಕೆ ನೀಡಿದೆ. ಮುಖಪುಟದಲ್ಲಿರುವ ಬಜೆಟ್ ಕಾರ್ಟೂನ್ ಗಮನ ಸೆಳೆಯುತ್ತದೆ.
ಆಯುಷ್ಮಾನ್ ಭವ
ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆ, ಅನ್ನದಾತನ ಮೇಲೆ ಪ್ರೀತಿ, ಗ್ರಾಮೀಣಾಭಿವೃದ್ಧಿಗೆ ಒತ್ತು, ಕಾರ್ಪೋರೇಟ್ ವಲಯಕ್ಕೆ ತೆರಿಗೆ ಕಡಿತದ ಸಿಹಿ ಸುದ್ದಿ ಎಂದು ಬಜೆಟ್ ಅನ್ನು ವಿವರಿಸಿರುವ ಉದಯವಾಣಿ 'ಆಯುಷ್ಮಾನ್ ಭವ' ಎಂಬ ಶೀರ್ಷಿಕೆ ನೀಡಿದೆ.
ಚುನಾವಣೆಯತ್ತ ನೋಟ, ಗ್ರಾಮದೆಡೆಗೆ ಓಟ
2019 ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ಈ ವರ್ಷ ಎಂಟು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಗ್ರಾಮೀಣ ಭಾರತಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದು ವಿವರಿಸಿರುವ ವಾರ್ತಾಭಾರತಿ, 'ಚುನಾವಣೆಯತ್ತ ನೋಟ, ಗ್ರಾಮದೆಡೆಗೆ ಓಟ' ಎಂಬ ಶೀರ್ಷಿಕೆ ನೀಡಿದೆ.