ಜೆಡಿಎಸ್ಸಿಗೆ ಬಿಗ್ ಶಾಕ್: ಹಿರಿಯ ಲಿಂಗಾಯತ ಮುಖಂಡ ಬಿಜೆಪಿ ತೆಕ್ಕೆಗೆ?
ಅಧಿಕೃತವಾಗಿ ರಾಜ್ಯ ಅಸೆಂಬ್ಲಿ ಚುನಾವಣೆಗೆ ಇನ್ನೂ ಹದಿನಾಲ್ಕು ತಿಂಗಳು ಇರುವಾಗಲೇ, ಮುಖಂಡರ ಪಕ್ಷಾಂತರ ಪರ್ವ ಆರಂಭವಾಗಿದೆ. ಇಲೆಕ್ಷನ್ ಹೊತ್ತಿನಲ್ಲಿ ಇಂತಹ ರಾಜಕೀಯ ವಿದ್ಯಮಾನ ನಡೆಯುವುದು ಸಾಮಾನ್ಯ.
ಒಂದು ಕಡೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಹಿಜಾಬ್ ವಿವಾದ, ಇನ್ನೊಂದು ಕಡೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪನವರ ವಜಾಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಅಹೋರಾತ್ರಿ ಧರಣಿ. ಎರಡು ರಾಷ್ಟ್ರೀಯ ಪಕ್ಷಗಳ ರಾಜಕೀಯ ಮೇಲಾಟದ ನಡುವೆ ಜೆಡಿಎಸ್ ಪಕ್ಷಕ್ಕೆ ಪ್ರಚಾರ ಸಿಗುತ್ತಿಲ್ಲ.
ಬಿರಿಯಾನಿ, ಬಾಳೇಕಾಯಿ ಬಜ್ಜಿ..ಇದೇ ಮೇಕೆದಾಟು ಪಾದಯಾತ್ರೆ: ಎಚ್ಡಿಕೆ ವ್ಯಂಗ್ಯ
ದಳಪತಿಗಳ ಅದರಲ್ಲೂ ಕುಮಾರಸ್ವಾಮಿಯವರ ಕಾರ್ಯವೈಖರಿಯಿಂದ ಬೇಸತ್ತು ಹಲವು ಜೆಡಿಎಸ್ ಹಾಲೀ ಶಾಸಕರು ಪಕ್ಷದಿಂದ ಈಗಾಗಲೇ ಎರಡೂ ಕಾಲು ಹೊರಗಿಟ್ಟಾಗಿದೆ. ಪ್ರಮುಖವಾಗಿ, ಹಳೇ ಮೈಸೂರು ಭಾಗದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ಸಿಗೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ.
ಇದೆಲ್ಲಾ ಒಂದು ಕಡೆಯಾದರೆ ಉತ್ತರ ಕರ್ನಾಟಕದ, ಪ್ರಭಾವೀ ಲಿಂಗಾಯತ ಸಮುದಾಯದ ಹಿರಿಯ ಮುಖಂಡರೊಬ್ಬರು ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನುವ ಸುದ್ದಿ ಸುನಾಮಿಯಂತೆ ಹರಿದಾಡುತ್ತಿದೆ. ಒಂದು ವೇಳೆ, ಇದು ಕಾರ್ಯರೂಪಕ್ಕೆ ಬಂದರೆ, ಜೆಡಿಎಸ್ ಪಕ್ಷಕ್ಕೆ ಭಾರೀ ಹಿನ್ನಡೆ ತಂದೊಡ್ಡುವುದಂತೂ ಖಂಡಿತ. ಆ ಮುಖಂಡ ಯಾರು?
ನಾನು ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ: ಹೆಚ್.ಡಿ.ಕುಮಾರಸ್ವಾಮಿ
ಬಸವರಾಜ ಹೊರಟ್ಟಿಯವರು ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ
ಬಾಗಲಕೋಟೆ ಜಿಲ್ಲೆಯ ಪ್ರಭಾವೀ ಲಿಂಗಾಯತ ಸಮುದಾಯದ ನಾಯಕ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಎನ್ನುವ ಹಳೆಯ ಸುದ್ದಿಗೆ ಈಗ ರೆಕ್ಕೆಪುಕ್ಕ ಬರಲಾರಂಭಿಸಿದೆ. ಇದಕ್ಕೆ ಕಾರಣ ಕೇಂದ್ರ ಸಂಸದೀಯ ವ್ಯವಹಾರ ಖಾತೆಯ ಸಚಿವ ಪ್ರಲ್ಹಾದ್ ಜೋಶಿಯವರು ಅಡ್ಡಗೋಡೆಯಲ್ಲಿ ದೀಪವಿಟ್ಟಂತಹ ನೀಡಿದ ಹೇಳಿಕೆ. ಸುಮಾರು ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಹೊರಟ್ಟಿಯವರು ಜೆಡಿಎಸ್ ಪ್ರಮುಖರ ಜೊತೆ ಅಂತರ ಕಾಯ್ದುಕೊಳ್ಳುತ್ತಿರುವುದು ಗೊತ್ತಿರುವ ವಿಚಾರ.
ಕಳೆದ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಹೊರಟ್ಟಿ ಸಭಾಪತಿ
ಹಲವು ಬಾರಿ ಮೇಲ್ಮನೆಯ ಸಭಾಪತಿ ಸ್ಥಾನಕ್ಕೆ ಪ್ರಯತ್ನಿಸಿದ್ದ ಹೊರಟ್ಟಿಯವರಿಗೆ ದಳಪತಿಗಳಿಂದ ಸೂಕ್ತ ಬೆಂಬಲ ಸಿಕ್ಕಿರಲಿಲ್ಲ. ಕಳೆದ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗಿದ್ದರು. ಸೋಲಿಲ್ಲದ ಸರದಾರ ಎಂದೇ ಹೆಸರಾಗಿರುವ ಬಸವರಾಜ ಹೊರಟ್ಟಿಯವರ ಪರಿಷತ್ತಿನ ಅವಧಿ ಇದೇ ಬರುವ ಜುಲೈ ನಾಲ್ಕಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಿಜೆಪಿಯಲ್ಲಿ ಕೆಳಮಟ್ಟದಲ್ಲಿ ಆರಂಭವಾಗಿದೆ.
ಭಾರೀ ಚರ್ಚೆಗೆ ಗ್ರಾಸವಾದ ಪ್ರಲ್ಹಾದ್ ಜೋಶಿ ಹೇಳಿಕೆ
ಮುಂಬರುವ ಜೂನ್/ಜುಲೈ ತಿಂಗಳಲ್ಲಿ ಪರಿಷತ್ತಿನ ಹನ್ನೊಂದು ಸ್ಥಾನ ಖಾಲಿಯಾಗಲಿದೆ. ಇದರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ತಲಾ ನಾಲ್ಕು ಮತ್ತು ಬಿಜೆಪಿಯ ಮೂರು ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡುತ್ತಾ, "ಬಸವರಾಜ ಹೊರಟ್ಟಿಯವರು ಸದ್ಯ ಪರಿಷತ್ತಿನ ಚೇರ್ಮನ್ ಆಗಿದ್ದಾರೆ, ಹಾಗಾಗಿ ಅವರು ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವ ವಿಚಾರ ಅಪ್ರಸ್ತುತ. ನಮ್ಮ ಪಕ್ಷದಿಂದ ಒಬ್ಬರು ಅಭ್ಯರ್ಥಿ ಇರಲಿದ್ದಾರೆ, ಅದು ಹೊರಟ್ಟಿಯವರು ಆದರೂ ಆಗಬಹುದು"ಎಂದು ಜೋಶಿ ಹೇಳಿರುವುದು ಹೊರಟ್ಟಿಯವರು ಬಿಜೆಪಿ ಸೇರುವ ಸುದ್ದಿಗೆ ಇನ್ನಷ್ಟು ಪುಷ್ಟಿಯನ್ನು ನೀಡಿದಂತಾಗಿದೆ.
ಬಿಜೆಪಿ ಸೇರುವ ವಿಚಾರದ ಬಗ್ಗೆ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ
ಬಿಜೆಪಿ ಸೇರುವ ವಿಚಾರದ ಬಗ್ಗೆ ಬಸವರಾಜ ಹೊರಟ್ಟಿ ಪ್ರತಿಕ್ರಿಯೆಯನ್ನು ನೀಡಿ, "ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಹೆಸರುಗಳು ಹೈಕಮಾಂಡಿಗೆ ಹೋಗಿದ್ದು, ಅದರಲ್ಲಿ ನನ್ನ ಹೆಸರು ಇದ್ದರೂ ಇರಬಹುದು ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಮೇಲೆ ಅವರಿಗೆ ಪ್ರೀತಿ ಜಾಸ್ತಿ, ಅದಕ್ಕೆ ಅಷ್ಟು ಕಾಳಜಿ ಮಾಡುತ್ತಾರೆ. ಬಿಜೆಪಿ ಸೇರುವ ಕುರಿತು ನಾನು ಈವರೆಗೂ ತೀರ್ಮಾನ ಕೈಗೊಂಡಿಲ್ಲ. ಮೇ ವರೆಗೂ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ"ಎಂದು ಹೊರಟ್ಟಿ ಹೇಳಿಕೆ ನೀಡುವ ಮೂಲಕ, ಬಿಜೆಪಿ ಸೇರುವುದಿಲ್ಲ ಎಂದು ಖಚಿತವಾಗಿ ಹೊರಟ್ಟಿ ಹೇಳಲಿಲ್ಲ.
Recommended Video