'ಹೈಕಮಾಂಡ್ ಸೂಚನೆ ಕೊಟ್ಟರೂ, ಯಾಕೆ ಸೇರಿಸಿಕೊಳ್ಳಲಿಲ್ಲ ಎಂಬುದು ಗೊತ್ತಿಲ್ಲ'
ಬೆಂಗಳೂರು, ಫೆ. 07: ಹೈಕಮಾಂಡ್ ಒಪ್ಪಿದ್ದರೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ಯಾಕೆ ಕೈಬಿಟ್ಟರು ಎಂಬುದು ನನಗೂ ಗೊತ್ತಿಲ್ಲ ಎಂದು ಮಾಜಿ ಸಚಿವ, ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ಶಾಸಕರ ಭವನದಲ್ಲಿ ಅವರು ಮಾತನಾಡಿದ್ದಾರೆ.
ಮಂತ್ರಿ ಆಗಲಿಲ್ಲ ಅಂತ ತಲೆ ಕೆಡಿಸಿಕೊಂಡಿಲ್ಲ. ಮಂತ್ರಿ ಆದ್ರೆ ರಾಜ್ಯ ಸೇವೆ ಮಾಡ್ತೀನಿ. ಇಲ್ಲವಾದರೆ, ಶಾಸಕನಾಗಿಯೇ ಕೆಲಸ ಮಾಡುತ್ತೇನೆ. ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಯವರು ಬೇಕಿದ್ದರೆ ನನ್ನ ಅನುಭವ ಬಳಸಿಕೊಳ್ಳಬಹುದು. ಬೇಡವಾದರೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ ಎನ್ನುವ ಮೂಲಕ ಪರೋಕ್ಷ ಎಚ್ಚರಿಕೆಯನ್ನು ಸಿಎಂ ಯಡಿಯೂರಪ್ಪ ಅವರಿಗೆ ಕೊಟ್ಟಿದ್ದಾರೆ.
ಇಲ್ಲಿದೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 'ನೂತನ ಸಚಿವರ ಇತಿಹಾಸ'!
ಸಂಪುಟ ವಿಸ್ತರಣೆ ಅಂತಿಮ ಕ್ಷಣದವರೆಗೂ ಉಮೇಶ್ ಕತ್ತಿ ಅವರು ಸಿಎಂ ಯಡಿಯೂರಪ್ಪ ಅವರ ಸಂಪುಟವನ್ನು ಸೇರುತ್ತಾರೆ, ಬಿಜೆಪಿ ಹೈಕಮಾಂಡ್ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದೆ ಎಂಬ ಮಾಹಿತಿಯಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಮುಂದಿನ ಹಂತದಲ್ಲಿ ಉಮೇಶ್ ಕತ್ತಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ಕೊಡುವ ಮೂಲಕ ಹೈಕಮಾಂಡ್ ಸೂತ್ರವನ್ನು ಕೂಡ ಪಕ್ಕಕ್ಕೆ ಇಟ್ಟದ್ದರು.
ಹೈಕಮಾಂಡ್ ಕೊಟ್ಟಿದ್ದ 10+3 ಸೂತ್ರದಂತೆ ಸಂಪುಟ ಸೇರಬೇಕಿತ್ತು
ಬಿಜೆಪಿ ಹೈಕಮಾಂಡ್ ಕೊಟ್ಟಿದ್ದ ಸೂಚನೆಯಂತೆ ಮಾಜಿ ಸಚಿವ, ಶಾಸಕ ಉಮೇಶ್ ಕತ್ತಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಬೇಕಿತ್ತು. ಉಪಚುನಾವಣೆಯಲ್ಲಿ ಗೆದ್ದಿರುವ 10 ಶಾಸಕರು, ಮೂಲ ಬಿಜೆಪಿಯ 3 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಒಪ್ಪಿಗೆ ಸೂಚಿಸಿತ್ತು. ಆ ಮೂವರಲ್ಲಿ ಉಮೇಶ್ ಕತ್ತಿ ಅವರೂ ಒಬ್ಬರಾಗಿದ್ದರು.
ಆದರೆ ಕೊನೆಯ ಘಳಿಗೆಯಲ್ಲಿ ಯಾವುದೊ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೈಕಮಾಂಡ್ ಸೂತ್ರವನ್ನೇ ಕೈಬಿಟ್ಟರು ಎನ್ನಲಾಗಿದೆ. ಅದರಿಂದಾಗಿ ಉಮೇಶ್ ಕತ್ತಿ ಅವರು ಮಂತ್ರಿ ಆಗಲು ಸಾಧ್ಯವಾಗಿಲ್ಲ.
70 ವರ್ಷದ ಒಳಗೆ ನಾನು ಸಿಎಂ ಆಗೇ ಆಗುತ್ತೇನೆ
ನಾನು ಮಂತ್ರಿ ಆಗಲಿಲ್ಲ ಎಂದು ತಲೆ ಕೆಡಿಸಿಕೊಂಡಿಲ್ಲ. ನನಗೆ 70 ತುಂಬುವುದರೊಳಗೆ ನಾನು ನಾಡಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇನ್ನೂ ಹತ್ತು ವರ್ಷ ರಾಜಕಾರಣ ಮಾಡುತ್ತೇನೆ. ಅಷ್ಟು ಆರೋಗ್ಯ ನನ್ನಲ್ಲಿ ಇದೆ ಎಂದಿದ್ದಾರೆ.
ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಾರಿ ಯೂಟರ್ನ್ ಹೊಡೆದಿರುವ ಕತ್ತಿ ಅವರು, ಉತ್ತರ ಕರ್ನಾಟಕದ ಸಿಎಂ ಎನ್ನುವ ಬದಲು 'ಅಖಂಡ ಕರ್ನಾಟಕ'ದ ಮುಖ್ಯಮಂತ್ರಿನ ಆಗುತ್ತೇನೆ ಎಂದಿದ್ದಾರೆ. ಹಿಂದೆ ಅನೇಕ ಬಾರಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿವಾದಿತ ಹೇಳಿಕೆಗಳನ್ನು ಕೊಟ್ಟಿದ್ದರು.
ಪರಿಷತ್ ಚುನಾವಣಾ ಕಣಕ್ಕೆ ಮೈತ್ರಿ ಅಭ್ಯರ್ಥಿ, ಡಿಸಿಎಂ ಸವದಿಗೆ ಶುರುವಾಯ್ತು ಆತಂಕ!
ನಾನು ಎಲ್ಲೂ ಹೋಗಿರಲಿಲ್ಲ, ಇಲ್ಲಿಯೆ ಇದ್ದೇನೆ
ನಾನು ಎಲ್ಲೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೆ. ತಡರಾತ್ರಿ ಮಲಗಿದ್ದರಿಂದ ತಡವಾಗಿ ಏಳಬೇಕಾಯಿತು. ಹೀಗಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರಲು ಆಗಲಿಲ್ಲ. ನನ್ನ ಮೊಬೈಲ್ ಸ್ವಿಚ್ ಆಫ್ ಆಗಿರಲಿಲ್ಲ. ಬೇರೆ ಸಂದೇಶ ಹೋಗಬಾರದು ಅಂತ ನಾನೇ ಈ ಹೇಳಿಕೆ ನೀಡುತ್ತಿದ್ದೇನೆ ಎಂದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಉಮೇಶ್ ಕತ್ತಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಮಂತ್ರಿಯಾಗುವ ವಿಶ್ವಾಸವಿದೆ, ತಾಳ್ಮೆಯಿಂದ ಕಾಯುತ್ತೇನೆ
ಮುಂದಿನ ದಿನದಲ್ಲಿ ಮಂತ್ರಿ ಮಾಡುವ ವಿಶ್ವಾಸ ಇದೆ. ಹೀಗಾಗಿ ತಾಳ್ಮೆಯಿಂದ ಕಾಯುತ್ತೇನೆ ಎಂದು ನಗುತ್ತಲೇ ಉಮೇಶ್ ಕತ್ತಿ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಕ್ಷೇತ್ರದ ಕೆಲಸಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾನು ಭೇಟಿ ಮಾಡುತ್ತಾ ಇರುತ್ತೇನೆ. ಮಂತ್ರಿ ಮಾಡಿ ಅಂತ ದುಂಬಾಲು ಬೀಳಲು ಅವರನ್ನು ಭೇಟಿ ಮಾಡಿಲ್ಲ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.