ಆ ಒಂದು ಮಾತಿನಿಂದ 6 ತಿಂಗಳು ಕೈ ತಪ್ಪಿದ ಮಂತ್ರಿಗಿರಿ!
ಬೆಂಗಳೂರು, ಫೆ. 03: ಚುನಾವಣೆ ಪ್ರಚಾರದ ಭರಾಟೆಯಲ್ಲಿ ಆಡಿದ ಆ ಒಂದು ಮಾತಿನಿಂದ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಮಂತ್ರಿ ಪದವಿ ಬರೋಬ್ಬರಿ ಆರು ತಿಂಗಳು ಕೈತಪ್ಪಿತ್ತು ಎಂದರೆ ನಂಬಲೇಬೇಕು. ಹೌದು ಮತದಾರರನ್ನು ಸೆಳೆಯಲು ಆಡಿದ ಮಾತು, ಮಾಜಿ ಸಚಿವರೊಬ್ಬರಿಗೆ ಮಂತ್ರಿಸ್ಥಾನ ಕೈತಪ್ಪಲು ಕಾರಣವಾಗಿದೆ. ಇಲ್ಲಿ ಏನಿದ್ದರೂ ನಾನೇ, ಹೈಕಮಾಂಡ್ ಇಲ್ಲಿ ಏನೂ ಅಲ್ಲ ಎಂದು ಮಾಡಿದ್ದ ಭಾಷಣದಿಂದ ಗರಂ ಆಗಿದ್ದ ಹೈಕಮಾಂಡ್ ಕೊನೆಗೂ ಈಗ ತಣ್ಣಗಾಗಿದೆ.
ಇದೀಗ ಮಂತ್ರಿ ಮಂಡಲ ವಿಸ್ತರಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಆ ಪ್ರಭಾವಿ ನಾಯಕ ನಿಟ್ಟುಸಿರು ಬಿಟ್ಟಿದ್ದಾರೆ. ಏಕಾಏಕಿ ಸಂಪುಟಕ್ಕೆ ಸೇರಿಸಿಕೊಳ್ಳಲು ನಡೆದ ಮಾತುಕತೆ ಆದರೂ ಏನೂ? ಕುತೂಹಲ ಮೂಡಿಸುವ ಬೆಳವಣಿಗೆ ಇಲ್ಲಿದೆ.
ಹೈಕಮಾಂಡ್ ಕಂಗೆಣ್ಣಿಗೆ ಕಾರಣವಾಗಿತ್ತು ಚುನಾವಣೆಯ 'ಆ ಭಾಷಣ'
ಚುನಾವಣೆ ಅಂದ್ರೆ ಜಿದ್ದಾಜಿದ್ದು ಇದ್ದೆ ಇರುತ್ತದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಅಂದರೆ ಕೇಳಬೇಕೆ? ಅಲ್ಲಿನ ಪ್ರಭಾವಿ ರಾಜಕಾರಣಿಗಳು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದ್ದರು ಗೆಲ್ಲುತ್ತಾರೆ ಎಂಬ ಮಾತಿದೆ. ಅದೇ ಆತ್ಮವಿಶ್ವಾಸದಲ್ಲಿ 2018ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಸಚಿವ ಉಮೇಶ್ ಕತ್ತಿ ಅವರು ಮಾತೊಂದನ್ನ ಆಡಿಬಿಟ್ಟಿದ್ದರು. ಆ ಮಾತನ್ನು ತೆಗೆದುಕೊಂಡು ಹೋಗಿದ್ದ ಕತ್ತಿ ಅವರ ವಿರೋಧಿ ಬಣ ಹೈಕಮಾಂಡ್ ಎದುರು ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ಎತ್ತಿ ಕಟ್ಟಿತ್ತು.
ಚುನಾವಣೆಯಲ್ಲೇನೋ ಉಮೇಶ್ ಕತ್ತಿ ಅವರು ಭರ್ಜರಿ ಜಯವನ್ನು ಪಡೆದುಕೊಂಡರು, ಆದರೆ ಆ ಮಾತಿನಿಂದ ಅವರಿಗೆ ಸಿಗಬೇಕಾಗಿದ್ದ ಮಂತ್ರಿಸ್ಥಾನ ಸಿಗಲೇ ಇಲ್ಲ.
ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನಿರಾಕರಣೆ!
ವಿಧಾನಸಭೆ ಚುನಾವಣೆ ಭಾಷಣದ ಪ್ರಭಾವವೊ ಅಥವಾ ಹೈಕಮಾಂಡ್ ಎದುರು ಉಮೇಶ್ ಕತ್ತಿ ಅವರನ್ನು ಎತ್ತಿಕಟ್ಟಿದ್ದರ ಪರಿಣಾಮವೊ ಮುಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕತ್ತಿ ಕುಟುಂಬಕ್ಕೆ ಅಘಾತ ಕಾಯ್ದಿತ್ತು. ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೆಟ್ ನಿರಾಕರಿಸಲಾಯ್ತು. ಟಿಕೆಟ್ ನಿರಾಕರಣೆಗೂ ಉಮೇಶ್ ಕತ್ತಿ ಅವರ 'ಆ ಭಾಷಣ'ವೇ ಕಾರಣ ಎನ್ನಲಾಗಿತ್ತು.
ಮಾಜಿ ಸಂಸದ ಉಮೇಶ್ ಕತ್ತಿ ಅವರ ಬದಲಿಗೆ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಆಯ್ತು, ಮುಂದೆವ ಅವರು ಬಿಜೆಪಿ ಸಂಸದರಾಗಿಯೂ ಆಯ್ಕೆಯಾದರು.
ಹೈಕಮಾಂಡ್ ಕಡೆಗಣೆಗೆ ಕಾರಣ ತಿಳಿಯಲು ಹರಸಾಹಸ
ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಸಿಎಂ ಹುದ್ದೆಗೆ ಪೈಪೋಟಿ ನೀಡುವಷ್ಟು ಪ್ರಭಾವಿಯಾಗಿದ್ದ ಉಮೇಶ್ ಕತ್ತಿ ಅವರಿಗೆ ಹೈಕಮಾಂಡ್ ನಡೆ ಆಶ್ಚರ್ಯ ಮೂಡಿಸಿತ್ತಂತೆ. ಕೊನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ಪ್ರಮಾದ ಅರಿತ ಕತ್ತಿ ಅವರು ಹೈಕಮಾಂಡ್ ಭೇಟಿ ಮಾಡಿದ್ದರಂತೆ.
ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ಹುಕ್ಕೇರಿ ಸಾರ್ವಜನಿಕ ಸಮಾರಂಭದಲ್ಲಿ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ್ದರಂತೆ. ಇದೆಲ್ಲದರ ಮಧ್ಯೆ ಇದೀಗ ಸಂಪುಟ ಸೇರಲು ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ. ಹೇಳಿಕೆ ಕೊಡುವಾಗ ಎಚ್ಚರಿಕೆಯಿಂದ ಇರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
"ಇದು ಹುಕ್ಕೇರಿ ಕ್ಷೇತ್ರ, ಇಲ್ಲಿರುವುದು ಉಮೇಶ್ ಕತ್ತಿ ಮಾತ್ರ'
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ, ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಹೆಸರು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದರು. ಆದರೆ ಮಾಜಿ ಸಚಿವ ಉಮೇಶ್ ಕತ್ತಿ ಅವರು ಮಾತ್ರ, ಇದು ಹುಕ್ಕೇರಿ ವಿಧಾನಸಭಾ ಕ್ಷೇತ್ರ. ಇಲ್ಲಿ ಮೋದಿಯೂ ಇಲ್ಲ, ಅಮಿತ್ ಶಾ ಅವರೂ ಇಲ್ಲ. ಇಲ್ಲಿರೋದು ಕತ್ತಿ, ಉಮೇಶ್ ಕತ್ತಿ ಮಾತ್ರ ಎಂದು ಭಾಷಣ ಮಾಡಿದ್ದರು.
ಮಾಜಿ ಸಚಿವ ಉಮೇಶ್ ಕತ್ತಿ ಅವರ ಬಾಷಣವನ್ನು ಹೈಕಮಾಂಡ್ಗೆ ಮುಟ್ಟಿಸುವಲ್ಲಿ ವಿರೋಧಿ ಬಣ ಯಶಸ್ವಿಯಾಗಿತ್ತು. ಅದರಿಂದಲೇ ಉಮೇಶ್ ಕತ್ತಿ ಅವರು ಕೆಲಕಾಲ ಬಿಜೆಪಿ ಹೈಕಮಾಂಡ್ನಿಂದ ಕಡೆಗಣನೆಗೆ ಒಳಗಾಗಿದ್ದರು ಎನ್ನಲಾಗಿದೆ.
ಇದೀಗ ಹೈಕಮಾಂಡ್ ಜೊತೆಗೆ ಸಮನ್ವಯ ಸಾಧಿಸಿರುವ ಉಮೇಶ್ ಕತ್ತಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂಬ ಮಾಹಿತಿ ಇದೆ.