ಕರ್ನಾಟಕದ ರಾಜ್ಯಪಾಲರು ಯಾರಾಗಬಹುದು? ಉಮಾ ಹೆಸರು ಮುಂಚೂಣಿಗೆ?
ಬೆಂಗಳೂರು, ಆಗಸ್ಟ್ 28: ಕರ್ನಾಟಕದ ರಾಜ್ಯಪಾಲರಾಗಿ ವಜುಭಾಯಿ ವಾಲಾ ಅವರ ಅಧಿಕಾರ ಅವಧಿ ಮುಗಿಯಲಿದ್ದು, ಕರ್ನಾಟಕ ಸೇರಿ 9 ರಾಜ್ಯಗಳಿಗೆ ಹೊಸದಾಗಿ ನೇಮಕಾತಿ ನಡೆಯಬೇಕಿದೆ. ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ 9 ರಾಜ್ಯಗಳ ರಾಜ್ಯಪಾಲರ ಅವಧಿ ಪೂರ್ಣಗೊಳ್ಳುತ್ತಿದೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಒಬ್ಬರೇ ರಾಜ್ಯಪಾಲರಿದ್ದಾರೆ, ಛತ್ತೀಸ್ ಗಢ, ಮಿಜೋರಾಂಗೆ ಹೊಸ ನೇಮಕವಾಗಬೇಕಿದೆ. ಕೇಂದ್ರದಲ್ಲಿ ಹೊಸದಾಗಿ ಸರ್ಕಾರ ರಚನೆಯಾದಾಗ ರಾಜ್ಯಗಳ ರಾಜ್ಯಪಾಲರುಗಳನ್ನು ಬದಲಾಯಿಸುವ ಪದ್ಧತಿ ಸಾಮಾನ್ಯವಾಗಿ ನಡೆಯುತ್ತಾ ಬಂದಿದೆ. ಇದು ನಿಯಮವಲ್ಲದಿದ್ದರೂ ಹೀಗೊಂದು ಪದ್ಧತಿ ಹಿಂದಿನಿಂದಲೂ ಇದೆ. ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ನಾಯಕರಿಗೆ ರಾಜ್ಯಪಾಲ ಹುದ್ದೆಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ರಾಜ್ಯಪಾಲ ಹುದ್ದೆಗೆ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಹಾಗೂ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಹೆಸರು ಈಗ ಮುಂಚೂಣಿಗೆ ಬಂದಿದೆ. ಅದರಲ್ಲೂ ಇವರಿಬ್ಬರ ಹೆಸರು ಕರ್ನಾಟಕದ ರಾಜ್ಯಪಾಲ ಹುದ್ದೆ ಬಲವಾಗಿ ಕೇಳಿ ಬಂದಿದೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸದ್ಯ 80ಪ್ಲಸ್ ವಯಸ್ಸಾಗಿದ್ದು, ಅವರ ಅಧಿಕಾರ ಅವಧಿ ಸೆಪ್ಟೆಂಬರ್ ತಿಂಗಳಿಗೆ ಐದು ವರ್ಷ ಪೂರ್ಣಗೊಳ್ಳಲಿದೆ.
ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ರಾಜ್ಯಪಾಲರ ವರದಿ
ರಾಜ್ಯಪಾಲರ ನೇಮಕವನ್ನು ರಾಷ್ಟ್ರಪತಿಗಳು ಮಾಡುತ್ತಾರೆಯಾದರೂ ಅದನ್ನು ಸೂಚಿಸುವುದು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರವೇ. ಹಾಗಾಗಿ ಈ ಬಾರಿ ರಾಜ್ಯದ ರಾಜಪಾಲರಾಗಿ ಯಾರನ್ನು ನೇಮಿಸುತ್ತಾರೆ ಎಂಬ ಕುತೂಹಲ ಇದೆ. ಕೆಲವು ಹೆಸರುಗಳು ತೇಲಿ ಬರುತ್ತಿದ್ದು, ಇವರಲ್ಲೇ ಒಬ್ಬರು ರಾಜ್ಯದ ರಾಜಪಾಲರಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಯಾರನ್ನು ನೇಮಿಸಬಹುದು ಎಂಬ ಕುತೂಹಲವಿದೆ.
ಅತ್ಯಂತ ಹಿರಿಯ ರಾಜ್ಯಪಾಲರಿದ್ದಾರೆ
ಹಾಲಿ ರಾಜ್ಯಪಾಲರ ಪೈಕಿ ಅತ್ಯಂತ ಹಿರಿಯರಾಗಿರುವ 87 ವರ್ಷದ ಕಲ್ಯಾಣ್ ಸಿಂಗ್(ರಾಜಸ್ಥಾನ), ಕರ್ನಾಟಕ ಮೂಲದ 87 ವರ್ಷದ ಪಿವಿ ಆಚಾರ್ಯ(ನಾಗಾಲ್ಯಾಂಡ್) ಹಾಗೂ 85 ವರ್ಷದ ರಾಮ್ ನಾಯಕ್(ಉತ್ತರಪ್ರದೇಶ) ಅವರ ಅವಧಿಯನ್ನು ವಿಸ್ತರಿಸಲಾಗಿದೆಯೇ ಎಂಬ ಕುತೂಹಲವಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಕೇಸರಿನಾಥ ತ್ರಿಪಾಠಿ ಅವರಿ 84 ವರ್ಷ, ಅವರ ಅವಧಿ ಜುಲೈನಲ್ಲಿ ಮುಕ್ತಾಯಗೊಳ್ಳಲಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಎರಡೂ ರಾಜ್ಯಗಳು ಮಹತ್ವದ್ದಾಗಿವೆ.
12 ರಾಜ್ಯಗಳಲ್ಲಿ ಬದಲಾವಣೆ ಸಾಧ್ಯತೆ
ಆರೆಸ್ಸೆಸ್ ಹಿರಿಯರಾದ ಗುಜರಾತಿನ ರಾಜ್ಯಪಾಲ ಓಪಿ ಕೊಹ್ಲಿ(83), ಗೋವಾ ಗವರ್ನರ್ ಮೃದುಲಾ ಸಿನ್ಹಾ, ಮಹಾರಾಷ್ಟ್ರದ ಗವರ್ನರ್ ಸಿ ವಿದ್ಯಾಸಾಗರ್ ರಾವ್ (78) ಅವರ ಸ್ಥಾನಗಳು ಬದಲಾಗಲಿದೆ. ಈ ಹಿಂದೆ ಆಂಧ್ರಪ್ರದೇಶದ ರಾಜ್ಯಪಾಲ ಹುದ್ದೆಗೆ ಸುಷ್ಮಾ ಸ್ವರಾಜ್ ಹೆಸರು ಕೇಳಿ ಬಂದಿತ್ತು. ಆದರೆ, ನಂತರ ಸುಷ್ಮಾ ಅಲ್ಲಗೆಳೆದಿದ್ದರು. ಈಗ ಯುಪಿಎ ಅವಧಿಯ ರಾಜ್ಯಪಾಲರನ್ನು ಹೊಂದಿರುವ ರಾಜ್ಯಗಳಲ್ಲಿ ಬದಲಾವಣೆ ನಿರೀಕ್ಷಿತವಾಗಿದೆ. ತೆಲಂಗಾಣದ ನರಸಿಂಹನ್ ಸ್ಥಾನಕ್ಕೆ ಪುದುಚೇರಿ ರಾಜ್ಯಪಾಲರಾಗಿರುವ ಲೆಫ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರ ಹೆಸರು ಕೇಳಿ ಬಂದಿದೆ.
ಸಾಧ್ವಿ ಉಮಾ ಭಾರತಿ
ಸಾಧ್ವಿ ಉಮಾ ಭಾರತಿ ಅವರನ್ನು ಕರ್ನಾಟಕದ ರಾಜ್ಯಪಾಲೆಯನ್ನಾಗಿ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕರ್ನಾಟಕದ ಜೊತೆ ಉತ್ತಮ ನಂಟನ್ನು ಹೊಂದಿದ್ದಾರೆ ಕೂಡಾ. ಕಳೆದ ಲೋಕಸಭೆ ಚುನಾವಣೆ ಸ್ಪರ್ಧಿಸಿಲ್ಲ, ಮೋದಿ ಸರ್ಕಾರ್ 2.0ರಲ್ಲಿ ಯಾವುದೇ ಸಚಿವ ಸ್ಥಾನವನ್ನೂ ನೀಡಿಲ್ಲ. ಗಂಗಾ ನದಿ ಸ್ವಚ್ಛತೆಗಾಗಿ ಇದ್ದ ವಿಶೇಷ ಸಚಿವ ಸ್ಥಾನ ನಿರ್ವಹಿಸಿದ್ದ ಉಮಾ ಅವರನ್ನು ಈಗ ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ. ಪಕ್ಷದ ಉನ್ನತ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಮುಕ್ತಾಯಗೊಳಿಸಲಾಗಿದೆ.
16ನೇ ಲೋಕಸಭೆಯಲ್ಲಿ ಸ್ಪೀಕರ್
16ನೇ ಲೋಕಸಭೆಯಲ್ಲಿ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇರುವ ಸುಮಿತ್ರಾ ಮಹಾಜನ್ ಅವರನ್ನು ರಾಜ್ಯಕ್ಕೆ ರಾಜ್ಯಪಾಲೆಯಾಗಿ ನೇಮಿಸುವ ಸಾಧ್ಯತೆಯೂ ಇದೆ. ಸುಮಿತ್ರಾ ಅವರು ಅಜಾತ ಶತ್ರು ಎಂದು ಹೆಸರು ಮಾಡಿದವರು. ಪಕ್ಷಭೇದ ಬಿಟ್ಟು ಕರ್ತವ್ಯವನ್ನು ಇವರು ನಿರ್ವಹಿಸಬಲ್ಲರು.