ಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿ
Recommended Video
ಬೆಂಗಳೂರು, ಸೆ 10: ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಹಾಲು ಹಂಚಿಕೆ ವಿಚಾರದಲ್ಲಿ, ಮಂಡಳಿಯ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಅಧ್ಯಕ್ಷ ಎಚ್ ಡಿ ರೇವಣ್ಣಗೆ ಬಲವಾದ ಪೆಟ್ಟು ನೀಡಿದ್ದಾರೆ.
ಬಿಜೆಪಿ ಶಾಸಕರೂ ಆಗಿರುವ ಜಾರಕಿಹೊಳಿ, ಯುಎಚ್ಟಿ (Ultra High Temparature) ಹಾಲು ಹಂಚಿಕೆ ಪೂರೈಕೆ ಪ್ರಮಾಣವನ್ನು ಮರುಹಂಚಿಕೆ ಮಾಡಿದ್ದು, ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಸಹಕಾರ ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್) ಸಿಂಹಪಾಲನ್ನು ನೀಡಿದ್ದಾರೆ.
ಕೆಎಂಎಫ್ ಅಧ್ಯಕ್ಷಗಾದಿ ಜಾರಕಿಹೊಳಿ ಕುಟುಂಬಕ್ಕೆ; ರೇವಣ್ಣಗೆ ಹಿನ್ನಡೆ
ಕೆಎಂಎಫ್, ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಅದರಂತೇ, ಸೇನೆಗೆ ವರ್ಷಕ್ಕೆ ಸುಮಾರು ಒಂದು ಕೋಟಿ ಲೀಟರ್ ಯುಎಚ್ಟಿ ಹಾಲನ್ನು ಪೂರೈಸಬೇಕಿದೆ.
ಸುಮಾರು ಹತ್ತು ವರ್ಷಗಳಿಂದ, ಸಂಪೂರ್ಣವಾಗಿ ಈ ಹಾಲನ್ನು ಕೋಚಿಮುಲ್, ಸೇನೆಗೆ ಒದಗಿಸುತ್ತಿತ್ತು. ಆದರೆ, 2018ರಲ್ಲಿ, ಒಟ್ಟು ಪೂರೈಕೆಯ ಅರ್ಧ ಭಾಗವನ್ನು (ಸುಮಾರು ಐವತ್ತು ಲಕ್ಷ ಲೀಟರ್) ಹಾಸನ ಜಿಲ್ಲಾ ಒಕ್ಕೂಟಕ್ಕೆ ಮರುಹಂಚಿಕೆ ಮಾಡಲಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕೋಚಿಮುಲ್ ಸದಸ್ಯರು, ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಬಳಿ ಮನವಿಯನ್ನು ಸಲ್ಲಿಸಿ, ಯುಎಚ್ಟಿ ಹಾಲು ಪೂರೈಕೆಯನ್ನು ಸಂಪೂರ್ಣವಾಗಿ ತಮಗೇ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ರೇವಣ್ಣ ಅನುಮತಿಯನ್ನು ನೀಡಿರಲಿಲ್ಲ.
ಕೈತಪ್ಪಿದ ಕೆಎಂಎಫ್ ಅಧ್ಯಕ್ಷ ಸ್ಥಾನ: ರೇವಣ್ಣ ಹೇಳಿದ್ದೇನು?
ಈಗ, ಮಾಲೂರು ಶಾಸಕರಾಗಿರುವ ನಂಜೇಗೌಡರ ನೇತೃತ್ವದಲ್ಲಿ ಮತ್ತೆ ಮನವಿಯನ್ನು ಸಲ್ಲಿಸಲಾಗಿ, ಇದಕ್ಕೆ, ಕೆಎಂಎಫ್ ಅಧ್ಯಕ್ಷರು ಒಪ್ಪಿಗೆಯನ್ನು ನೀಡಿದ್ದಾರೆ. ಹೀಗಾಗಿ, ಮುಂದಿನ ಅವಧಿಯವರೆಗೆ, ಸೇನೆಗೆ 90.50 ಲಕ್ಷ ಲೀಟರ್ ಯುಎಚ್ಟಿ ಹಾಲನ್ನು ಕೋಚಿಮುಲ್ ಪೂರೈಸಲಿದೆ. ಇದರಿಂದ, ರೇವಣ್ಣ ಮುಖಭಂಗ ಎದುರಿಸುವಂತಾಗಿದೆ.