ಸೌಜನ್ಯ ಮನೆಗೆ ಪೇಜಾವರ ಶ್ರೀ:ಸಿಬಿಐ ತನಿಖೆಯಾಗಲಿ
ಬೆಳ್ತಂಗಡಿ, ಅ 20: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯಾದ್ಯಂತ ಹೊಸ ಹೊಸ ಹೋರಾಟವನ್ನು ಹುಟ್ಟು ಹಾಕುತ್ತಿದೆ.
ಈ ಮಧ್ಯೆ, ಶನಿವಾರ (ಅ 20) ಉಡುಪಿ ಪೇಜಾವರ ಶ್ರೀಗಳು ಸೌಜನ್ಯ ಮನೆಗೆ ಭೇಟಿಯಾಗಿ ಆಕೆಯ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಬೆಳ್ತಂಗಡಿಯ ಪಾಂಗಾಳದಲ್ಲಿರುವ ಸೌಜನ್ಯ ಮನೆಗೆ ಭೇಟಿ ನೀಡಿದ ಪೇಜಾವರ ಶ್ರೀಗಳು ಸಿಐಡಿ ತನಿಖೆಯ ವರದಿ ಬರುವ ವಾರ ಬರಲಿದೆ. ಅಲ್ಲಿಯ ತನಕ ಶ್ರೀಕ್ಷೇತ್ರದ ಬಗ್ಗೆ ಅಥವಾ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಬಾರದೆಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪೇಜಾವರ ಶ್ರೀಗಳು, ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಯ ಬೇಕೆನ್ನುವ ಕೆಲವರ ಆಗ್ರಹಕ್ಕೆ ನಮ್ಮ ಸಹಮತವೂ ಇದೆ.
ಸಿಬಿಐ ತನಿಖೆ ನಡೆಯಲಿ ಎಂದು ವೀರೇಂದ್ರ ಹೆಗ್ಗಡೆ ಕೂಡಾ ಹಲವು ಬಾರಿ ಹೇಳಿದ್ದಾರೆ. ಸೌಜನ್ಯ ಪೋಷಕರ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಸತ್ಯಾಗ್ರಹ ಮತ್ತು ಹೋರಾಟ ಮಾಡುವವರು ಕೆಲವು ದಿನಗಳ ಕಾಲ ತಾಳ್ಮೆಯಿಂದ ಇರಬೇಕೆಂದು ಪೇಜಾವರ ಶ್ರೀಗಳ ಜನತೆಯಲ್ಲಿ ಕೋರಿದ್ದಾರೆ.
ಸೌಜನ್ಯ ಬ್ಯಾನರ್ ಕಿತ್ತು ಹಾಕಿದ ದುಷ್ಕರ್ಮಿಗಳು, ಬೆಳ್ತಂಗಡಿ ಬಂದ್...
ಸೌಜನ್ಯ ಬ್ಯಾನರ್
ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥನ ಭಕ್ತರು ಎನ್ನುವ ಹೆಸರಿನಲ್ಲಿ ಸೌಜನ್ಯಳಿಗೆ ಸಾಂತ್ವನ ಹೇಳುವ ಮತ್ತು ನ್ಯಾಯ ಸಿಗಬೇಕೆನ್ನುವ ಬ್ಯಾನರಿಗೆ ಕೆಲವು ದುಷ್ಕರ್ಮಿಗಳು ದಕ್ಷಿಣಕನ್ನಡ ಜಿಲ್ಲೆ ಗುರುವಾಯನ ಕೆರೆಯಲ್ಲಿ ಬೆಂಕಿ ಹಚ್ಚಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಈ ಸಂಬಂಧ ಅಹಿತಕರ ಘಟನೆ ವರದಿಯಾಗಿಲ್ಲ. ಅಲ್ಲಿ ಅದೇ ರೀತಿಯ ಮತ್ತೊಂದು ಬ್ಯಾನರನ್ನು ಹಾಕಲಾಗಿದೆ.
ರಾಮಲಿಂಗ ರೆಡ್ಡಿ
ಸೌಜನ್ಯ ಕೊಲೆ ನಡೆದದ್ದು ಬಿಜೆಪಿ ಅಧಿಕಾರದ ಅವಧಿಯಲ್ಲಿ. ಬಿಜೆಪಿ ನಾಯಕರ ಮಾತಿಗೆ ನಾನು ಬೆಲೆ ಕೊಡುವುದಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರ ಬಗ್ಗೆ ನಾನು ಏನೂ ಹೇಳಿಕೆ ನೀಡಲಾರೆ.
ರಘುಪತಿ ಭಟ್
ಸೌಜನ್ಯ ಪ್ರಕರಣದ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲೇ ಬೇಕು. ವೀರೇಂದ್ರ ಹೆಗ್ಗಡೆಯವರ ಬಗ್ಗೆ ನಾಡಿನ ಜನತೆಗೆ ಗೌರವವಿದೆ. ಸಮಾಜದ ಏಳಿಗೆಗಾಗಿ ಶ್ರಮಿಸುವ ಅವರನ್ನು ಟೀಕಿಸುವುದು ತಪ್ಪು ಎಂದು ಮಾಜಿ ಶಾಸಕ ರಘುಪತಿ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಸಿಎಂ ಮನೆ ಮುಂದೆ ಪ್ರತಿಭಟನೆ
ಬೆಳ್ತಂಗಡಿ ತಾಲೂಕು ಕಚೇರಿಯ ಮುಂದೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ ವಿ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಶುಕ್ರವಾರ (ಅ 19) ಪ್ರತಿಭಟನೆ ನಡೆಸಿ ಘಟನೆಯ ಸತ್ಯಾಸತ್ಯತೆ ಅರಿಯಲು ಸಿಬಿಐ ತನಿಖೆಗೆ ಆದೇಶ ನೀಡಬೇಕೆಂದು ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಬೆಳ್ತಂಗಡಿ ಬಂದ್
ಪ್ರತಿಭಟನೆಯ ಅಂಗವಾಗಿ ಅಕ್ಟೋಬರ್ 21ರಂದು ಸಿಎಂ ನಿವಾಸದೆದುರು ಪ್ರತಿಭಟನೆ, ನವೆಂಬರ್ ಒಂದರಂದು ಕಪ್ಪು ಬಾವುಟ ಪ್ರದರ್ಶನ. ಮಂಗಳೂರು - ಬೆಂಗಳೂರು ಕಾಲ್ನಡಿಗೆ ಜಾಥಾ, ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಬೆಳ್ತಂಗಡಿ ಬಂದ್ ನಡೆಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.