ಕಳಸಾ ಬಂಡೂರಿ ಹೋರಾಟಗಾರರಿಗೆ ಪೇಜಾವರ ಶ್ರೀಗಳ ಬೆಂಬಲ
ಹುಬ್ಬಳ್ಳಿ, ಅಕ್ಟೋಬರ್,04 : ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಲು ಮುಖ್ಯಮಂತ್ರಗಳ ನಿಯೋಗದೊಂದಿಗೆ ನಾವೂ ದೆಹಲಿಗೆ ತೆರಳಲಿದ್ದೇವೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕಳಸಾ-ಬಂಡೂರಿ ಹೋರಾಟ ಬೆಂಬಲಿಸಿ ಜಿಲ್ಲಾ ಬ್ರಾಹ್ಮಣ ಸೇವಾ ಸಂಘ ಹಾಗೂ ಬ್ರಾಹ್ಮಣ ಸಮಾಜದ ಸಂಘ-ಸಂಸ್ಥೆಗಳು ಮತ್ತು ಮಹಿಳಾ ಮಂಡಳಿಗಳು ನಗರದ ಮಿನಿವಿಧಾನಸೌಧದ ಎದುರು ಅಕ್ಟೋಬರ್ 03ರ ಮಂಗಳವಾರದಂದು ನಡೆಸಿದ ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.[ಸೋಸಲೆ ಶ್ರೀ ಬಂಧನ ಕುರಿತು ಪೇಜಾವರಶ್ರೀ ಹೇಳಿದ್ದೇನು?]
ಬಿಜೆಪಿ ಪಕ್ಷದ ನಾಯಕರುಗಳಾದ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಒಟ್ಟಾಗಿ ಬಂದಲ್ಲಿ ಅವರೊಂದಿಗೆ ನಿಯೋಗದಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.[ಮಸೀದಿ ಮುಂದೆ ಹಂದಿಮಾಂಸದ ಸಮಾರಾಧನೆ ನಡೆದ್ರೆ ಸಿಎಂ ಸುಮ್ನಿರ್ತಾರಾ?]
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ನೀಡಿ ಕಳಸಾ ಬಂಡೂರಿ ಯೋಜನೆಯನ್ನು ಶೀಘ್ರ ಜಾರಿಗೊಳಿಸುವಂತೆ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದು ಪೇಜಾವರ ಶ್ರೀ ಭರವಸೆ ನೀಡಿದ್ದಾರೆ.
ರೈತರ ಸಂಕಷ್ಟಗಳಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಅನ್ನದಾತ ನೆಮ್ಮದಿಯಿಂದ ಇದ್ದಾಗ ಮಾತ್ರ, ಎಲ್ಲರೂ ನೆಮ್ಮದಿಯಾಗಿರಲು ಸಾಧ್ಯ. ಮಹದಾಯಿ ಕರ್ನಾಟಕದ ಪಾಲಿನ ಮಹಾತಾಯಿಯಾಗಬೇಕು ಎಂದು ಹೇಳಿದರು.