ನೂತನ ಅಡ್ವೊಕೇಟ್ ಜನರಲ್ ಆಗಿ ಉದಯ್ ಹೊಳ್ಳ ಅಧಿಕಾರ ಸ್ವೀಕಾರ
ಬೆಂಗಳೂರು, ಜೂನ್ 1: ಕರ್ನಾಟಕ ಸರಕಾರದ ನೂತನ ಅಡ್ವೊಕೇಟ್ ಜನರಲ್ ಆಗಿ ಹಿರಿಯ ವಕೀಲ ಉದಯ್ ಹೊಳ್ಳ ಅಧಿಕಾರ ಸ್ವೀಕರಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ನ ಎಜಿ ಕಚೇರಿಯಲ್ಲಿ ಉದಯ್ ಹೊಳ್ಳ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಪ್ರಭುಲಿಂಗ ನಾವಡಗಿಯವರನ್ನು ಎಜಿ ಸ್ಥಾನಕ್ಕೆ ನೇಮಿಸಿದ್ದರು. ಇದೀಗ ಅವರ ಸ್ಥಾನಕ್ಕೆ ಉದಯ್ ಹೊಳ್ಳ ಬಂದಿದ್ದಾರೆ.
ಉಡುಪಿಯ ಬೈಂದೂರು ಮೂಲದವರಾದ ಉದಯ್ ಹೊಳ್ಳ ಈ ಹಿಂದೆ 2006-2009ರ ವರೆಗೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿಯೂ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು.
ಈ ಹಿಂದೆ ಮೂರು ಬಾರಿ ಉದಯ್ ಹೊಳ್ಳ ಅಡ್ವೊಕೇಟ್ ಜನರಲ್ ಆಗಿದ್ದರು. ಇದೀಗ ನಾಲ್ಕನೇ ಬಾರಿಗೆ ಎಜಿಯಾಗಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
1973ರಲ್ಲಿ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜ್ ಆಫ್ ಲಾ ದಿಂದ ಕಾನೂನು ಪದವಿ ಪಡೆದಿರುವ ಅವರು ಕಳೆದ 4 ದಶಕಗಳಿಂದ ವಕೀಲಿ ವೃತ್ತಿಯಲ್ಲಿದ್ದಾರೆ. ಅವರನ್ನು ಅಡ್ವೋಕೇಟ್ ಜನರಲ್ ಆಗಿ ಮೇ 28ರಂದು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದರು.