ಬಿಎಸ್ವೈ ಪುತ್ರರಿಬ್ಬರಲ್ಲಿ ರಾಘವೇಂದ್ರ ಕಾಣದ ಯಶಸ್ಸನ್ನು ವಿಜಯೇಂದ್ರ ಕಾಣುತ್ತಿರುವುದು ಹೇಗೆ?
ಸೀಸನ್ ಪೊಲಿಟಿಶಿಯನ್ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರರಿಬ್ಬರೂ ರಾಜಕಾರಣದಲ್ಲೇ ಬದುಕನ್ನು ಕಟ್ಟಿಕೊಂಡವರು. ಆದರೆ, ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರ ಕಾಣುತ್ತಿರುವಷ್ಟು ಯಶಸ್ಸು, ಸೃಷ್ಟಿಸುತ್ತಿರುವ ಸಂಚಲನವನ್ನು ರಾಘವೇಂದ್ರ ಮಾಡುತ್ತಿಲ್ಲ ಎನ್ನುವುದು ವಾಸ್ತವತೆ.
ಸಕ್ರಿಯ ರಾಜಕಾರಣದಲ್ಲಿ ವಿಜಯೇಂದ್ರ ಅವರಿಗಿಂತ ಮುನ್ನವೇ ರಾಘವೇಂದ್ರ ಇಳಿದಿದ್ದರೂ, ಇತ್ತೀಚಿನ ದಿನಗಳಲ್ಲಿ ವಿಜಯೇಂದ್ರ ಪಡೆಯುತ್ತಿರುವ ಹೆಸರು, ಬಿಜೆಪಿಯವರಿಗೇ ಹೊಟ್ಟೆ ಉರಿಸುವಂತಿದೆ. ಇವರ ಬೆಳವಣಿಗೆ ಎಷ್ಟರ ಮಟ್ಟಿಗೆ ಪಕ್ಷದವರಿಗೆ ಸಹ್ಯ ಅನಿಸುತ್ತಿಲ್ಲ ಎಂದರೆ, ವರಿಷ್ಠರ ಬಳಿ ಹಲವು ಬಾರಿ ಇವರ ವಿರುದ್ದ ದೂರು ಹೋಗಿದ್ದವು ಎನ್ನುವುದೇನು ಗೌಪ್ಯವಾಗಿ ಉಳಿದಿಲ್ಲ.
ದೆಹಲಿಯಿಂದ ಬಂದ ಖಚಿತ ಮಾಹಿತಿ ಎಂದು ಸಿದ್ದರಾಮಯ್ಯ ಪದೇಪದೆ ಬಿಎಸ್ವೈ ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ?
ತಮ್ಮದೇ ಪಕ್ಷ, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದೆ ಎನ್ನುವುದಕ್ಕಿಂತ ಹೆಚ್ಚಾಗಿ, ತಂದೆಯೇ ಸಿಎಂ ಆಗಿರುವುದನ್ನು ವಿಜಯೇಂದ್ರ, ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ವೃದ್ದಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಪಕ್ಷದೊಳಗಿನವರ ಆರೋಪ. ಅದೇನೇ ಇರಲಿ, ರಾಜಕೀಯದಲ್ಲಿ ಹೇಗೆ ಸಮಯ ಸಂದರ್ಭ ನೋಡಿಕೊಂಡು ದಾಳ ಉರುಳಿಸಿಕೊಳ್ಳಬೇಕು ಎನ್ನುವುದನ್ನು ವಿಜಯೇಂದ್ರ ಬಹುಬೇಗ ಕರಗತ ಮಾಡಿಕೊಂಡಿದ್ದಾರೆ.
ರಾಜ್ಯದ ಕುಟುಂಬ ರಾಜಕಾರಣದ ಇತಿಹಾಸದಲ್ಲಿ ಯಡಿಯೂರಪ್ಪನವರ ಕುಟುಂಬವೂ ಒಂದು. ದೇವೇಗೌಡ್ರ ಕುಟುಂಬಕ್ಕೆ ಮಾತ್ರ ಸೀಮಿತ ಎಂದಿದ್ದ ಈ ಪದಗಳು ನಂತರದ ದಿನಗಳಲ್ಲಿ ಪಕ್ಷಾತೀತವಾಗಿ ಬೆಳೆಯುತ್ತಾ ಸಾಗಿತು. ವಿಜಯೇಂದ್ರ ಬಲಾಢ್ಯರಾಗುತ್ತಿರುವುದು ಹೇಗೆ?
ನಾನೇ ಎರಡೂವರೆ ವರ್ಷ ಸಿಎಂ ಎನ್ನುವುದು 'ಅಪಾಯ'ದ ಮುನ್ಸೂಚನೆ
ಶಿವಮೊಗ್ಗ ಲೋಕಸಭಾ ಕ್ಷೇತ್ರ
2009ರಿಂದ ಇದುವರೆಗಿನ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲೇ ಇದೆ. ಎರಡು ಬಾರಿ ಬಿಎಸ್ವೈ ಇಲ್ಲಿಂದ ಆಯ್ಕೆಯಾದರೆ, ಸತತವಾಗಿ ಕಳೆದ ಎರಡು ಬಾರಿಯಿಂದ ಅವರ ಪುತ್ರ ಬಿ.ವೈ.ರಾಘವೇಂದ್ರ ಆಯ್ಕೆಯಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ರಾಘವೇಂದ್ರ ಅವರು ಶಿವಮೊಗ್ಗ ಕ್ಷೇತ್ರಕ್ಕೆ ಮಾತ್ರ ಮೀಸಲಿರುವಂತೆ ರಾಜಕೀಯ ಮಾಡುತ್ತಿರುವುದಕ್ಕೆ ಕುಟುಂಬದ ಏನಾದರೂ ಒತ್ತಡವಿದೆಯಾ? ಸದ್ಯಕ್ಕಂತೂ ಇದಕ್ಕೆ ಉತ್ತರವಿಲ್ಲ.
ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ
ರಾಜ್ಯದ ಯುವ ಸಂಸದರಲ್ಲಿ ರಾಘವೇಂದ್ರ ಕೂಡಾ ಒಬ್ಬರು. ಇದೇ ರೀತಿ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ. ಆದರೆ, ಯಾವುದೇ ರಾಜಕೀಯ ಕುಟುಂಬದ ಸುಧೃಡ ಶ್ರೀರಕ್ಷೆಯಿಲ್ಲದ ತೇಜಸ್ವಿ ಸೂರ್ಯ (ಬಸವನಗುಡಿ ಶಾಸಕರಾದ ರವಿ ಸುಬ್ರಮಣ್ಯ ಇವರ ಚಿಕ್ಕಪ್ಪ) ಬೆಳೆದ ರೀತಿ, ಬಿಜೆಪಿಗರೇ ಆಶ್ಚರ್ಯ ಪಡುವಂತಿದೆ. ಉತ್ತಮ ವಾಗ್ಮಿಯಾಗಿರುವ ತೇಜಸ್ವಿ ಸೂರ್ಯ, ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾದರೂ, ಪಕ್ಷದ ರಾಷ್ಟೀಯ ಯುವಮೋರ್ಚಾದ ಅಧ್ಯಕ್ಷರಾದರು, ವರಿಷ್ಠರ ವಿಶ್ವಾಸವನ್ನು ಗಳಿಸಿಕೊಂಡರು.
ಮಿತಭಾಷಿಯಾಗಿರುವ ರಾಘವೇಂದ್ರ
ಪ್ರಬಲ ಸಮುದಾಯದ ಹಿನ್ನಲೆ, ಯಡಿಯೂರಪ್ಪನವರಂತಹ ಮಾಸ್ ಲೀಡರ್ ಅವರ ಪುತ್ರ, ಅವರೇ ಸಿಎಂ ಆಗಿದ್ದರೂ, ರಾಘವೇಂದ್ರ ಇದ್ಯಾವುದರ ಲಾಭವನ್ನು ಬಳಸಿಕೊಳ್ಳದೇ ಕೇವಲ ಶಿವಮೊಗ್ಗಕ್ಕೆ ಮಾತ್ರ ಮೀಸಲಾಗಿರುವುದಕ್ಕೆ ಏನಾದರೂ ಕಾರಣ ಇರಬಹುದೇ ಎನ್ನುವುದು ಕುತೂಹಲದ ವಿಚಾರವೇ. ಮಿತಭಾಷಿಯಾಗಿರುವ ರಾಘವೇಂದ್ರ ಅವರು ಸಂಸತ್ತಿನಲ್ಲೂ ಸದ್ದನ್ನು ಮಾಡದೇ ತಾನಾಯಿತು, ತನ್ನ ಕ್ಷೇತ್ರವಾಯಿತು ಎಂದು ಸೀಮಿತವಾಗಿದ್ದಾರೆ. ಸ್ವಲ್ಪ ಮನಸ್ಸು ಮಾಡಿದ್ದರೆ, ಕೇಂದ್ರದ ಸಚಿವರಾಗುವುದಕ್ಕೆ ಕನಿಷ್ಟ ಟವೆಲ್ ಆದರೂ ಹಾಕಬಹುದಿತ್ತು.
ಬೈಇಲೆಕ್ಷನ್ ಸ್ಪೆಷಲಿಸ್ಟ್ ಬಿ.ವೈ.ವಿಜಯೇಂದ್ರ
ಇನ್ನೊಂದು ಕಡೆ ಬಿ.ವೈ.ವಿಜಯೇಂದ್ರ ಅವರು ಇತ್ತೀಚಿನ ದಿನಗಳಲ್ಲಿ ಯಾವಮಟ್ಟಿಗೆ ಹೆಸರನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ, ಬೈಇಲೆಕ್ಷನ್ ಸ್ಪೆಷಲಿಸ್ಟ್ ಎನ್ನುವ ಹೆಸರನ್ನೂ ಪಡೆದುಕೊಂಡಿದ್ದಾರೆ. ನೆಲೆಯೇ ಇಲ್ಲದ ಕ್ಷೇತ್ರಗಳಲ್ಲಿ ಪಕ್ಷದ ಬಾವುಟವನ್ನು ಹಾರಿಸಿ, ವರಿಷ್ಠರಿಂದ ಸೈ ಎನಿಸಿಕೊಂಡರು. ಜೊತೆಗೆ, ರಾಜ್ಯದ ಆಡಳಿತ ಯಂತ್ರದಲ್ಲಿ ಮೂಗು ತೂರಿಸದಂತೇ ಎಚ್ಚರಿಕೆಯನ್ನೂ ಪಡೆದುಕೊಂಡರು ಎನ್ನುವ ಸುದ್ದಿಯಿದೆ. ಅದೇನೇ ಇರಲಿ..
ಲಿಂಗಾಯಿತ ಸಮುದಾಯದ ಪೀಠಾಧಿಪತಿಗಳನ್ನು ಆವಾಗಾವಾಗ ಭೇಟಿ
ಲಿಂಗಾಯಿತ ಸಮುದಾಯದ ಪೀಠಾಧಿಪತಿಗಳನ್ನು ಆವಾಗಾವಾಗ ಭೇಟಿಯಾಗಿ ಆಶೀರ್ವಾದ ಪಡೆಯುತ್ತಾ, ಸಮುದಾಯದ ಮುಖಂಡರ ಜೊತೆಗೆ ಉತ್ತಮ ಸಂಪರ್ಕವನ್ನು ಇಟ್ಟುಕೊಳ್ಳುತ್ತಾ, ಜೊತೆಗೆ, ವಿರೋಧ ಪಕ್ಷದ ಮುಖಂಡರ ಜೊತೆಗೂ ಒಡನಾಟವನ್ನು ಇಟ್ಟುಕೊಂಡು ವಿಜಯೇಂದ್ರ ಸದ್ಯ ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ ಎನ್ನುವುದು ಒಟ್ಟಾರೆಯಾಗಿ ಕೇಳಿಬರುತ್ತಿರುವ ಮಾತು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ, ಮಸ್ಟ್ ಎಂಡ್ ಶುಡ್, ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ (RSS) ಆಶೀರ್ವಾದ ಇವರ ಮೇಲೆ ಇದೆಯಾ ಎನ್ನುವುದಿಲ್ಲಿ ಪ್ರಶ್ನೆ. ಆದರೂ..
Recommended Video
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ.. ಮಿತ್ರರೂ ಇಲ್ಲ..
ರಾಜಕೀಯ ನಿಂತ ನೀರಲ್ಲ ಎನ್ನುವ ಮಾತಿದೆ. ಯಡಿಯೂರಪ್ಪನವರು ತಮ್ಮ ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿದ್ದಾರೆ. ಈ ಸಮಯದಲ್ಲಿ ಬಿಎಸ್ವೈ ಅವರಿಗೆ ಬಿಜೆಪಿ ಗೌರವಯುತವಾಗಿ ವಿದಾಯ ಕೊಡದಿದ್ದರೆ, ವಿಜಯೇಂದ್ರ ಕೂಡಾ ತಮ್ಮ ದಾರಿಯನ್ನು ಬೇರೆ ಕಡೆ ನೋಡಿಕೊಳ್ಳಬಹುದೇನೋ? ಹಾಗೇನಾದರೂ ಆದರೆ, ಅದು ಬಿಜೆಪಿಗೆ ನಷ್ಟ ಎನ್ನುವುದಕ್ಕೆ ಕೆಜಿಪಿ ಪಕ್ಷ ಉದಯವಾಗಿದ್ದು, ಬಿಜೆಪಿ ಮತಗಳನ್ನು ವಿಭಜಿಸಿದ್ದು ಒಂದು ಉದಾಹರಣೆಯಾಗಿತ್ತು. ಇದೆಲ್ಲವೂ ರಾಜಕಾರಣದಲ್ಲಿ ಸಾಧ್ಯ..ಯಾಕೆಂದರೆ, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ.. ಮಿತ್ರರೂ ಇಲ್ಲ..