ಸಿದ್ದರಾಮಯ್ಯನವರ ವಿನಾಕಾರಣ 2 ಹೇಳಿಕೆ: ಬಿಜೆಪಿಗೆ ಭರ್ಜರಿ ಮೈಲೇಜ್, ಕಾಂಗ್ರೆಸ್ಸಿಗೆ ಭಾರೀ ಮುಜುಗರ?
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ, ಡಿ.ಕೆ.ಶಿವಕುಮಾರ್ ಮತ್ತು ರಮಾನಾಥ ರೈ ಜೊತೆಗೆ ಮೀನೂಟ ಮಾಡಿ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದ ಸಿದ್ದರಾಮಯ್ಯನವರ ವಿರುದ್ದ ಖಟ್ಟರ್ ಹಿಂದುತ್ವವಾದಿಗಳು ಏಕ್ ಧಂ ತಿರುಗಿಬಿದ್ದಿದ್ದರು. ಕೊನೆಗೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಹೇಳಿಕೆ ನೀಡಬೇಕಾಯಿತು.
ಬಿಸಿಬಿಸಿ ಚರ್ಚೆ, ಕೆಸೆರೆರೆಚಾಟಕ್ಕೆ ನಾಂದಿ ಹಾಡಿದ್ದ ಆ ಘಟನೆಯನ್ನು ಸಿದ್ದರಾಮಯ್ಯ, "ದೇವರ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇಲ್ಲದವರು ಇದನ್ನು ವಿನಾಕಾರಣ ಸುದ್ದಿ ಮಾಡುತ್ತಿದ್ದಾರೆ. ಮಾಂಸ ತಿಂದವರು ದೇವಾಲಯಕ್ಕೆ ಹೋಗಬಾರದು ಎನ್ನುವ ನಿಯಮ ಏನಾದರೂ ಇದೆಯಾ"ಎಂದು ಪ್ರಶ್ನಿಸುವ ಮೂಲಕ, ವಿಚಾರವನ್ನು ಮತ್ತಷ್ಟು ಜ್ವಲಂತವಾಗಿ ಇಟ್ಟಿದ್ದರು.
ನಮ್ಮದು ಪ್ರೀತಿಸುವ ಹಿಂದುತ್ವ, ಬಿಜೆಪಿಯವರದ್ದು ದ್ವೇಷಿಸುವ ಹಿಂದುತ್ವ: ಬಿಜೆಪಿ ವಿರುದ್ದ ಮುಗಿಬಿದ್ದ ಸಿದ್ದರಾಮಯ್ಯ
ಅಕ್ಟೋಬರ್ 2017ರಂದು ನಡೆದಿದ್ದ ಈ ಘಟನೆ ರಾಜ್ಯದ ಜನತೆಯಲ್ಲಿ ಎಷ್ಟು ಚರ್ಚೆಯ ವಿಷಯವಾಗಿತ್ತು ಎಂದರೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು ಸೋತಾಗ, ಧರ್ಮಸ್ಥಳದ ಮಂಜುನಾಥನ ಶಾಪ ತಟ್ಟಿದೆ ಎಂದೂ ಕೆಲವರು ವಾದ ಮಾಡಿದ್ದುಂಟು.
ಗುರು ಶಿಷ್ಯರ ಮಾತಿನ ಮಲ್ಲಯುದ್ದ: ಸೈಲೆಂಟ್ ಆಗಿ ಮುಸಿಮುಸಿ ನಗುತ್ತಿರುವ ಬಿಜೆಪಿ
ಈ ವಿಚಾರ ಒಂದು ಮಟ್ಟಿಗೆ ಇಡೀ ಕಾಂಗ್ರೆಸ್ಸಿಗೆ ಮುಜುಗರ ತಂದಿದ್ದಂತೂ ಹೌದು. ಈ ಘಟನೆಯ ನಂತರ ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಜಾಗರೂಕತೆಯಿಂದ ಹೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯ, ಕಳೆದ ಎರಡು ದಿನಗಳಲ್ಲಿ ಮತ್ತೆ ಹಲವರ ಪಾಲಿಗೆ ವಿವಾದಕಾರಿ ಆಗುವ ಹೇಳಿಕೆಯನ್ನು ನೀಡಿದ್ದಾರೆ. ಅವರ ಎರಡು ಹೇಳಿಕೆ, ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿಲ್ಲದಿಲ್ಲ.
ಘಟನೆ - 1 - ಏನು ಇವತ್ತು ಹನುಮಜ್ಜಯಂತಿನಾ
ಘಟನೆ - 1: ಮೈಸೂರಿನ ತಮ್ಮ ಊರಿನ ಮತಗಟ್ಟೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಮಾಡಿ, ತಮ್ಮ ಸ್ನೇಹಿತರ ಮನೆಯಲ್ಲಿ ಸಿದ್ದರಾಮಯ್ಯ ಭರ್ಜರಿ ಬಾಡೂಟ ಮಾಡಿದ್ದರು. ಆ ವೇಳೆ, ಅವರ ಆಪ್ತರೊಬ್ಬರು, ಸರ್..ಇವತ್ತು ಹನುಮಜ್ಜಯಂತಿ ಎಂದು ಅಲರ್ಟ್ ಮಾಡಿದ್ದಾರೆ. ಆಗ, "ಏನು ಇವತ್ತು ಹನುಮಜ್ಜಯಂತಿನಾ, ಆಂಜನೇಯ ಹುಟ್ಟಿದ ದಿನ ನಿನಗೆ ಗೊತ್ತಾ, ಸುಮ್ನೆ ಊಟ ಮಾಡಯ್ಯ"ಎಂದು ಪ್ರೀತಿಯಿಂದ ಸಿದ್ದರಾಮಯ್ಯ ಗದರಿಸಿದ್ದರು. ಇದು ಒಂದು ಕಡೆ ಭಾರೀ ಸುದ್ದಿಯಾಗಿದೆ.
ನಾನು ಗೋಮಾಂಸ ತಿನ್ನುತ್ತೇನೆ, ಅದರಲ್ಲಿ ತಪ್ಪೇನಿದೆ
ಘಟನೆ - 2: ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ನಾನು ಗೋಮಾಂಸ ತಿನ್ನುತ್ತೇನೆ, ಅದರಲ್ಲಿ ತಪ್ಪೇನಿದೆ. ನನ್ನ ಆಹಾರದ ಪದ್ದತಿ ನನ್ನದು, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ವಯಸ್ಸಾದ, ಆರೋಗ್ಯವಾಗಿ ಇಲ್ಲದ ಹಸುಗಳನ್ನು ಮನೆಯಲ್ಲೇ ಇಟ್ಟುಕೊಳ್ಳಲು ಬಿಜೆಪಿಯವರು ದುಡ್ಡು ಕೊಡುತ್ತಾರಾ"ಎಂದು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದರು.
ಹಿಂದುತ್ವ ಈಗಲೂ ಬಿಜೆಪಿಯ ಟ್ರಂಪ್ ಕಾರ್ಡ್
ಈ ವಿಚಾರ ಯಾವ ರೀತಿ ಕಾಂಗ್ರೆಸ್ಸಿಗೆ ತಿರುಗುಬಾಣ ಆಗಬಹುದು ಎಂದರೆ, ಅಭಿವೃದ್ದಿಗಿಂತ ಹೆಚ್ಚಾಗಿ, ರಾಷ್ಟ್ರೀಯತೆ, ಹಿಂದುತ್ವ, ಸರ್ಜಿಕಲ್ ಸ್ಟ್ರೈಕ್ ಮುಂತಾದ ವಿಚಾರವನ್ನು ಮುಂದಿಟ್ಟುಕೊಂಡೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿದ್ದು. ಗೋಹತ್ಯೆ, ಹಿಂದುತ್ವ ಈಗಲೂ ಬಿಜೆಪಿಯ ಟ್ರಂಪ್ ಕಾರ್ಡ್. ಅದಕ್ಕಿಂತ ಹೆಚ್ಚಾಗಿ, ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾನೂನು ಅನುಮೋದನೆ ಪಡೆದುಕೊಂಡಿದೆ ಬೇರೆ..
Recommended Video
ಗೋವಿನಲ್ಲಿ ಮುಕ್ಕೋಟಿ ದೇವರನ್ನು ಕಾಣುವ ಜನ
ಗೋವಿನಲ್ಲಿ ಮುಕ್ಕೋಟಿ ದೇವರನ್ನು ಕಾಣುವ ಜನರು ರಾಜ್ಯದಲ್ಲಿ ಬೇಕಾದಷ್ಟಿದ್ದಾರೆ, ಹಾಗಾಗಿ, ಸಿದ್ದರಾಮಯ್ಯನವರ ಹೇಳಿಕೆ ಕಾಂಗ್ರೆಸ್ ಅನ್ನು ಇನ್ನಷ್ಟು ಬ್ಯಾಕ್ ಸೀಟಿಗೆ ತಳ್ಳಬಹುದು. ಬಿಜೆಪಿಯವರ ಮೊದಲ ಟಾರ್ಗೆಟ್ ಸಿದ್ದರಾಮಯ್ಯ, ಕುಮಾರಸ್ವಾಮಿಯ ಮೊದಲ ಟಾರ್ಗೆಟೇ ಸಿದ್ದರಾಮಯ್ಯ. ಪರಿಸ್ಥಿತಿ ಹೀಗಿರುವಾಗ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರ ಈ ಎರಡು ಹೇಳಿಕೆಯನ್ನು ಇಟ್ಟುಕೊಂಡು, ಬಿಜೆಪಿ ಮತ್ತು ಜೆಡಿಎಸ್ ಮೈಲೇಜ್ ಪಡೆದುಕೊಳ್ಳಲು ಯಾವರೀತಿ ಇದನ್ನು ಬಳಸಿಕೊಳ್ಳಲಿದೆ ಎನ್ನುವುದಷ್ಟೇ ಕಾದು ನೋಡಬೇಕಾಗಿರುವುದು. ಎಲ್ಲೆಲ್ಲೂ... ರಾಜಕೀಯ ಎನ್ನುವುದಷ್ಟೇ ಇಲ್ಲಿ ಸತ್ಯ. ಗೋವು, ದೇವರು, ಹಿಂದುತ್ವ ಎಲ್ಲಾ ಆಮೇಲೆ..