ಬಿಜೆಪಿ ಇಬ್ಬರು ಹಿರಿಯ ಶಾಸಕರಿಗೆ ಒಲಿದ ಮಂತ್ರಿಗಿರಿ
ಬೆಂಗಳೂರು, ಆಗಸ್ಟ್ 26: ಬಿಜೆಪಿ ಅತೃಪ್ತ ಶಾಸಕರ ಹಠಕ್ಕೆ ಬಿಜೆಪಿ ಹೈಕಮಾಂಡ್ ಮಣಿದಿದ್ದು ಇಬ್ಬರು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ನಿರ್ಣಯ ಕೈಗೊಂಡಿದ್ದಾರೆ.
ಮೊನ್ನೆ ನಡೆದ ಸಂಪುಟ ವಿಸ್ತರಣೆ ಸಮಯ 17 ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಆ ನಂತರ ಬಿಜೆಪಿ ಕೆಲವು ಹಿರಿಯ ಶಾಸಕರು ಪಕ್ಷದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಕೆಲವು ಶಾಸಕರು ಪಕ್ಷವಿರೋಧಿ ಹೇಳಿಕೆಗಳನ್ನೂ ನೀಡಿದ್ದರು.
ಯಡಿಯೂರಪ್ಪ ದೆಹಲಿಯಿಂದ ವಾಪಸ್, ಲಿಂಬಾವಳಿಗೆ ಹೈಕಮಾಂಡ್ ಬುಲಾವ್
ಅತೃಪ್ತ ಶಾಸಕರ ಹಠಕ್ಕೆ ಮಣಿದಿರುವ ಹೈಕಮಾಂಡ್ ಇಬ್ಬರು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ಕೊಡಲು ಒಪ್ಪಿದ್ದು, ನಾಳೆಯೇ ಉಮೇಶ್ ಕತ್ತು ಮತ್ತು ಅರವಿಂದ ಲಿಂಬಾವಳಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
Recommended Video
ಎಂಟು ಬಾರಿ ಗೆದ್ದಿರುವ ಉಮೇಶ್ ಕತ್ತಿ ಅವರಿಗೆ ಮೊದಲ ಪಟ್ಟಿಯನ್ನು ಸಚಿವ ಸ್ಥಾನ ನಿರಾಕರಿಸಲಾಗಿತ್ತು. ಆದರೆ ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಕತ್ತಿ, ಯಡಿಯೂರಪ್ಪ ಅವರ ಭೇಟಿಯಾಗಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಅಲ್ಲದೆ ಪಕ್ಷವನ್ನು ತ್ಯಜಿಸುವ ಧಮ್ಕಿ ಸಹ ಹಾಕಿದ್ದರು. ಹೀಗಾಗಿ ಕತ್ತಿ ಅವರಿಗೆ ಸಚಿವ ಸ್ಥಾನ ಒಲಿದಿದೆ.
ಅರವಿಂದ ಲಿಂಬಾವಳಿಗೆ ಒಲಿದ ಸಚಿವ ಸ್ಥಾನ
ಇನ್ನು ಅರವಿಂದ ಲಿಂಬಾವಳಿ ಪಕ್ಷದ ಪ್ರಮುಖ ನಾಯಕರಾಗಿದ್ದು, ರಾಜ್ಯದಲ್ಲಿ ಪಕ್ಷ ಕಟ್ಟಲು ಮತ್ತು ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲು ನೆರವಾದವರಾಗಿದ್ದಾರೆ. ಈ ಹಿಂದೆ ಸಹ ಸಚಿವರಾಗಿದ್ದ ಅವರು ಈ ಬಾರಿ ಡಿಸಿಎಂ ಹುದ್ದೆ ಆಕಾಂಕ್ಷಿಗಳಾಗಿದ್ದರು, ಆದರೆ ಅವರ ಹೆಸರು ಮೊದಲ ಪಟ್ಟಿಯಲ್ಲಿರಲಿಲ್ಲ, ಇದರಿಂದ ತೀವ್ರ ಅಸಮಾಧಾನವನ್ನು ಅವರು ಹೊರ ಹಾಕಿದ್ದರು.
ಹೈಕಮಾಂಡ್ ಮನವೊಲಿಕೆಗೆ ಜಗ್ಗದ ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿಯನ್ನು ದೆಹಲಿಗೆ ಕರೆಸಿಕೊಂಡು ಸಮಾಧಾನಪಡಿಸಲು ಹೈಕಮಾಂಡ್ ಯತ್ನಿಸಿತಾದರೂ ಅದೇನೂ ಯಶಸ್ವಿ ಆಗಲಿಲ್ಲ. ಹಾಗಾಗಿ ಅರವಿಂದ ಲಿಂಬಾವಳಿ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.
ಕರ್ನಾಟಕ ಬಿಜೆಪಿ ಪಾಲಿಗೆ 'ಡಿಸಿಎಂ' ಕುರ್ಚಿಯೇ ಟೈಂ ಬಾಂಬ್; ಬಿಎಸ್ ವೈ ಜ್ವಾಲಾಮುಖಿ!
ರಾಜುಗೌಡ ಸಹ ಪ್ರಮುಖ ಆಕಾಂಕ್ಷಿ
ಶಾಸಕ ರಾಜುಗೌಡ ಸಹ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಸಚಿವ ಸ್ಥಾನ ದೊರಕಬಹುದೆಂಬ ನಿರೀಕ್ಷೆಯಲ್ಲಿಯೇ ಇರುವುದಾಗಿ ಹೇಳಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದ ಪಕ್ಷದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
ಕರಾವಳಿ ಭಾಗದ ಶಾಸಕರಿಗೆ ಮತ್ತೆ ಅನ್ಯಾಯ
ಕರಾವಳಿ ಭಾಗದ ಹಿರಿಯ ಬಿಜೆಪಿ ಶಾಸಕರಿಗೆ ಮತ್ತೆ ನಿರಾಸೆ ಆಗಿದ್ದು, ಈಗಾಗಲೇ ಪಕ್ಷದ ವಿರುದ್ಧ ಸಣ್ಣ ಅಸಮಾಧಾನ ಹೊರಹಾಕಿರುವ ಶಾಸಕರಾದ ಅಂಗಾರ, ಅಪ್ಪಚ್ಚು ರಂಜನ್, ಕೆಜಿ ಬೋಪಯ್ಯ ಇನ್ನೂ ಕೆಲವು ಶಾಸಕರು ಮುಂದಿನ ದಿನಗಳಲ್ಲಿ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ.