ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ಪಟ್ಟಿಗೆ ಸೇರಿತು ಮತ್ತಿಬ್ಬರ ಹೆಸರು
ಎರಡು ದಿನಗಳ ಹಿಂದೆ, ಕರ್ನಾಟಕ ಕಾಂಗ್ರೆಸ್ಸಿನ ಮುಖಂಡರೆಲ್ಲರೂ ಒಂದೇ ಕಡೆ ಸೇರಿ, ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ಎಲ್ಲಾ ವಿಚಾರದಲ್ಲಿ ಒಟ್ಟಾಗಿ ಜನರ ಮುಂದೆ ಹೋಗೋಣ ಎನ್ನುವ ನಿರ್ಧಾರಕ್ಕೂ ಬಂದಿದ್ದರು.
ಹೈಕಮಾಂಡಿಗೆ ದೊಡ್ಡ ತಲೆನೋವಾಗಿರುವ ಕೆಪಿಸಿಸಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರದಲ್ಲಿ, ಕೊನೆಗೂ ಸೋನಿಯಾ ಗಾಂಧಿ ಹೆಸರನ್ನು ಅಂತಿಮಗೊಳಿಸಿದ್ದಾರೆ ಎನ್ನುವ ಸುದ್ದಿಯ ನಡುವೆ, ಈ, ಹುದ್ದೆಗೆ ಇನ್ನಿಬ್ಬರು ಹಿರಿಯ ಮುಖಂಡರು, ನಾವೂ ಆಕಾಂಕ್ಷಿಗಳು ಎಂದಿದ್ದಾರೆ.
ಬೆಂಗಳೂರಿನ ಮತ್ತು ಬೆಳಗಾವಿ ಭಾಗದ ಈ ಇಬ್ಬರು ಪ್ರಭಾವೀ ಕಾಂಗ್ರೆಸ್ ಮುಖಂಡರು, ನಾವೂ ಪಕ್ಷಕ್ಕಾಗಿ ಜೀವ ಸವೆಸಿದ್ದೇವೆ, ಜವಾಬ್ದಾರಿ ಕೊಟ್ಟರೆ, ನಿಭಾಯಿಸಲು ಸಿದ್ದ ಎಂದಿದ್ದಾರೆ.
ಏಕಾಏಕಿ ಕಾಂಗ್ರೆಸ್ ಮುಖಂಡರ ಒಗ್ಗಟ್ಟು ಪ್ರದರ್ಶನ: ಸೋನಿಯಾ ಕೊಟ್ಟ ಮಾಸ್ಟರ್ ಸ್ಟ್ರೋಕ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು, ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಎರಡು ತಾಸು ಮಾತುಕತೆ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮಂಚೂಣಿಯಲ್ಲಿ ಕೇಳಿಬರುವ ಹೆಸರು ಡಿಕೆಶಿಯದ್ದು. ಈ ನಡುವೆ, ಇನ್ನಿಬ್ಬರು ನಾಯಕರು, ಹುದ್ದೆಯ ಮೇಲೆ ಒಲವು ತೋರುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್
ರಾಜ್ಯ ಕಾಂಗ್ರೆಸ್ಸಿನ ಎಲ್ಲಾ ಆಗುಹೋಗುಗಳ ಮೇಲೆ ಸಂಪೂರ್ಣ ಹಿಡಿತವಿರುವ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಈ ಹುದ್ದೆಗೆ ಮೊದಮೊದಲು ಮೂರು ಮುಖಂಡರ / ಆಕಾಂಕ್ಷಿಗಳ ಹೆಸರುಗಳು ಕೇಳಿಬರುತ್ತಿತ್ತು. ಅದು, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಕೆ.ಎಚ್.ಮುನಿಯಪ್ಪ ಅವರದ್ದು.
ಸೋನಿಯಾ ಗಾಂಧಿ, ಮೊದಲು, ಒಗ್ಗಟ್ಟು ಪ್ರದರ್ಶಿಸಲು ಸೂಚಿಸಿದ್ದರು
ರಾಜ್ಯ ಕಾಂಗ್ರೆಸ್ಸಿನ ಬಣ ರಾಜಕೀಯದ ಬಗ್ಗೆ ಸಂಪೂರ್ಣ ಅರಿವಿರುವ ಸೋನಿಯಾ ಗಾಂಧಿ, ಮೊದಲು, ಒಗ್ಗಟ್ಟು ಪ್ರದರ್ಶಿಸಲು ಸೂಚಿಸಿದ್ದರು ಎನ್ನುವ ಮಾಹಿತಿಯಿದೆ. ಈ ಕಾರಣಕ್ಕಾಗಿಯೇ, ಒಂದೊಂದು ಕಡೆ ಮುಖ ಮಾಡಿಕೊಂಡಿದ್ದ ಮುಖಂಡರು ಕೆಪಿಸಿಸಿ ಕಚೇರಿಯಲ್ಲಿ ಒಂದಾಗಿ ಮೂರು ತಾಸು ಚರ್ಚೆ ನಡೆಸಿದ್ದರು. ಆದಾಗ್ಯೂ, ಒಬ್ಬರು ಮುಖಂಡರು ಪರೋಕ್ಷವಾಗಿ, ಇನ್ನೊಬ್ಬರು ನೇರವಾಗಿ, ನಾವೂ ಆಕಾಂಕ್ಷಿಗಳು ಎಂದು ಹೇಳಿದ್ದಾರೆ.
ಕುತೂಹಲ ಮೂಡಿಸಿದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಭೇಟಿ!
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮತ್ತೊಬ್ಬರು ಆಕಾಂಕ್ಷಿ 1 - ಸತೀಶ್ ಜಾರಕಿಹೊಳಿ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಹಿರಿಯ ಮುಖಂಡ ಸತೀಶ್ ಜಾರಕಿಹೊಳಿ ತಾವೂ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಎಂದು ಹೇಳಿದ್ದಾರೆ. ವರಿಷ್ಠರನ್ನು ಈಗಾಗಲೇ ಭೇಟಿಯಾಗಿ ತಮ್ಮ ಮನವಿಯನ್ನು ಹೈಕಮಾಂಡಿಗೆ ಸತೀಶ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ನೀಡಿದರೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮತ್ತೊಬ್ಬರು ಆಕಾಂಕ್ಷಿ 2 - ರಾಮಲಿಂಗ ರೆಡ್ಡಿ
ಇನ್ನು, ಬೆಂಗಳೂರಿನ ಪ್ರಭಾವೀ ಮುಖಂಡ ರಾಮಲಿಂಗ ರೆಡ್ಡಿ ಪರವಾಗಿ, ಅವರ ಪರಮಾಪ್ತ, ಪಾಲಿಕೆ ಸದಸ್ಯ ಮಂಜುನಾಥ ರೆಡ್ಡಿ, ಫೇಸ್ ಬುಕ್ ಅಭಿಯಾನ ಆರಂಭಿಸಿದ್ದಾರೆ. ರಾಮಲಿಂಗ ರೆಡ್ಡಿಯವರ ಸೇವೆಯನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಿ, ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಸಾಮಾಜಿಕ ತಾಣದಲ್ಲಿ ಒತ್ತಾಯಿಸಲಾಗುತ್ತಿದೆ.
ಹೈಕಮಾಂಡ್ ಸೂಚನೆಯಿದೆ ಎನ್ನುವ ಮಾಹಿತಿ
ಹೈಕಮಾಂಡ್ ಸೂಚನೆಯಿದೆ ಎನ್ನುವ ಮಾಹಿತಿಯ ನಡುವೆ, ಇಬ್ಬರು ನಾಯಕರು, ಬಹಿರಂಗವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ಮುಜುಗರ ತರುವ ಸಾಧ್ಯತೆಯಿದೆ. ಗುಂಪುಗಾರಿಕೆ ಮುಂದುವರಿದರೆ, ಯಾವ ಹುದ್ದೆಗೂ ಹೆಸರು ಫೈನಲ್ ಆಗುವುದಿಲ್ಲ ಎಂದನ್ನರಿತಿರುವ ಕಾಂಗ್ರೆಸ್ ಮುಖಂಡರ ನಡೆ, ಯಾವರೀತಿ ಇರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.