ಮತ್ತೆ ಖಾತೆ ಕ್ಯಾತೆ : ನಾಳೆ ಇಬ್ಬರು ಸಚಿವರ ರಾಜೀನಾಮೆ?
ಬೆಂಗಳೂರು, ಜ. 25: ಒಂಭತ್ತು ದಿನಗಳಲ್ಲಿ ಮೂರನೇ ಬಾರಿ ಖಾತೆ ಮರು ಹಂಚಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಾಗಿದ್ದಾರೆ. ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವರನ್ನು ಸಮಾಧಾನ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ. ಖಾತೆ ಮರು ಹಂಚಿಕೆ ಮಾಡಿ ರಾಜಭವನಕ್ಕೆ ಪಟ್ಟಿಯನ್ನು ಕಳುಗಿಸಲಾಗಿದೆ ಎನ್ನಲಾಗಿದೆ.
ಹೀಗಾಗಿ ಇಬ್ಬರು ಸಚಿವರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂಬ ಖಚಿತ ಮಾಹಿತಿ ಬಂದಿದೆ. ನಾಳೆ ಗಣರಾಜ್ಯೋತ್ಸವ ಧ್ವಜಾರೋಹಣದ ಬಳಿಕ ಇಬ್ಬರೂ ಸಚಿವರು ಸಚಿವ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಕೊಡಲಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪದೇ ಪದೇ ಒತ್ತಡಕ್ಕೆ ಒಳಗಾಗಿ ಖಾತೆ ಹಂಚಿಕೆ ಮಾಡುತ್ತಿರುವುದು ಬಿಜೆಪಿ ಶಾಸಕರು ಹಾಗೂ ಸಚಿವರಲ್ಲಿ ಬೇಸರ ಮೂಡಿಸಿದೆ. ಬ್ಲ್ಯಾಕ್ಮೇಲ್ ಮಾಡುವವರಿಗೆಲ್ಲಾ ಖಾತೆ ಬದಲಾವಣೆ ಮಾಡ್ತಾರೆ, ಸಂಭಾವಿತರ ಖಾತೆಗಳನ್ನು ವಾಪಸ್ ಪಡೆಯುತ್ತಾರೆ, ಹೀಗಾದರೆ ನಾವೇನು ಮಾಡಬೇಕು ಎಂದು ಬಿಜೆಪಿ ಶಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒತ್ತಡಕ್ಕೆ ಮಣಿದ ಯಡಿಯೂರಪ್ಪ; ಮತ್ತೆ ಸಚಿವರ ಖಾತೆ ಮರು ಹಂಚಿಕೆ!
ಖಾತೆ ಕಸಿದುಕೊಂಡಿರುವುದರಿಂದ ನಾಳೆ ಗಣರಾಜ್ಯೋತ್ಸವದ ಧ್ವಜಾರೋಹಣದ ಬಳಿಕ ಇಬ್ಬರು ಸಚಿವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಖಚಿತವಾಗಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಮತ್ತೊಂದು ಬಹುದೊಡ್ಡ ಸಂಕಷ್ಟ ಎದುರಾಗಲಿದೆ ಎಂಬ ಚರ್ಚೆ ಬಿಜೆಪಿಯಲ್ಲಿಯೇ ನಡೆದಿವೆ.
ಮೂರನೇ ಬಾರಿ ಮರು ಹಂಚಿಕೆ?
ಸಚಿವ ಸಂಪುಟ ವಿಸ್ತರಣೆಯಾದ 9 ದಿನಗಳ ಬಳಿಕ ಸಿಎಂ ಯಡಿಯೂರಪ್ಪ ಅವರು ಜನವರಿ 21 ರಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದರು. ಒತ್ತಡಕ್ಕೆ ಮಣಿದಿದ್ದ ಯಡಿಯೂರಪ್ಪ ಅವರು, ಖಾತೆ ಹಂಚಿಕೆ ಮಾಡಿದ ಮರು ದಿನವೇ ಅಂದರೆ ಜನವರಿ 22 ರಂದು ಮತ್ತೆ ಖಾತೆಗಳನ್ನು ಬದಲಾವಣೆ ಮಾಡಿದ್ದರು. ಆಗಲೇ ಕೆಲ ಸಚಿವರು ತೀವ್ರವಾಗಿ ಅಸಮಾಧಾನಗೊಂಡಿದ್ದರು. ಇದೀಗ ಮತ್ತೊಮ್ಮೆ ಖಾತೆ ಮರು ಹಂಚಿಕೆ ಮಾಡಲು ರಾಜಭವನಕ್ಕೆ ಪಟ್ಟಿಯನ್ನು ಕಳುಹಿಸಲಾಗಿದೆ ಎಂಬ ಮಾಹಿತಿ ಬಂದಿದೆ.
ಒತ್ತಡಕ್ಕೆ ಮಣಿದ ಯಡಿಯೂರಪ್ಪ!
ಖಾತೆ ಮರು ಹಂಚಿಕೆ ಮಾಡಿದಾಗ ಕಾನೂನು ಹಾಗೂ ಸಣ್ಣ ನೀರಾವರಿ ಖಾತೆಗಳನ್ನು ಹಿಂದಕ್ಕೆ ಪಡೆದುಕೊಂಡು ವೈದ್ಯಕೀಯ ಶಿಕ್ಷಣ ಹಾಗೂ ವಕ್ಫ್ ಮತ್ತು ಹಜ್ ಇಲಾಖೆಗಳನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ವಹಿಸಲಾಗಿತ್ತು. ಇದೀಗ ಅವರೆಡು ಖಾತೆಗಳನ್ನು ಹಿಂದಕ್ಕೆ ಪಡೆಯಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಹಾಗೂ ಪರಿಸರ ಇಲಾಖೆಗಳನ್ನು ಜೆಸಿ ಮಾಧುಸ್ವಾಮಿ ಅವರಿಗೆ ವಹಿಸಲಾಗುತ್ತಿದೆ ಎನ್ನಲಾಗಿದೆ. ಆರೋಗ್ಯ ಇಲಾಖೆಯೊಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯೂ ಬೇಕೆಂದು ಪಟ್ಟು ಹಿಡಿದಿದ್ದ ಡಾ. ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಕೊಡಲಾಗಿದೆ ಎಂಬ ಮಾಹಿತಿಯಿದೆ.
ಜೊತೆಗೆ ಆನಂದ್ ಸಿಂಗ್ ಅವರಿಂದ ಪ್ರವಾಸೋದ್ಯಮ ಇಲಾಖೆಯನ್ನು ಹಿಂದಕ್ಕೆ ಪಡೆದು ಅದನ್ನು ಮಾಧುಸ್ವಾಮಿ ಅವರಿಗೆ ಕೊಡಲಾಗಿದೆ. ಮಾಧುಸ್ವಾಮಿ ಅವರಲ್ಲಿದ್ದ ವಕ್ಫ್ ಮತ್ತು ಹಜ್ ಖಾತೆ ಜೊತೆಗೆ ಮೂಲ ಸೌಕರ್ಯ ಇಲಾಖೆಯನ್ನು ಸಚಿವ ಆನಂದ್ ಸಿಂಗ್ ಅವರಿಗೆ ಮರು ಹಂಚಿಕೆ ಮಾಡಲಾಗುತ್ತಿದೆ.
ಸಚಿವ ಸ್ಥಾನಕ್ಕೆ ಇಬ್ಬರ ರಾಜೀನಾಮೆ?
ಸಣ್ಣ ನೀರಾವರಿ ಇಲಾಖೆ ಹಾಗೂ ಕಾನೂನು ಖಾತೆಯನ್ನು ಹಿಂದಕ್ಕೆ ಪಡೆದಾಗಲೇ ಸಚಿವಸ್ಥಾನಕ್ಕೆ ಮಾಧುಸ್ವಾಮಿ ಅವರು ರಾಜೀನಾಮೆ ಕೊಡುತ್ತಾರೆ ಎಂಬ ಸುದ್ದಿಯಿತ್ತು. ಇದೀಗ ಮತ್ತೊಮ್ಮೆ ಖಾತೆ ಬದಲಾವಣೆ ಮಾಡಿರುವುದರಿಂದ ಸಚಿವ ಜೆ.ಸಿ. ಮಾಧುಸ್ವಾಮಿ ತೀವ್ರವಾಗಿ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಳೆ (ಜ.26) ಮಧ್ಯಾಹ್ನ ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ ಕೊಡಲಿದ್ದಾರೆ ಎನ್ನಲಾಗುತ್ತಿದೆ. ನಾಳೆ ಗಣರಾಜ್ಯೋತ್ಸವ ಭಾಷಣ ಮುಗಿಸಿದ ಬಳಿಕ ಮಾಧುಸ್ವಾಮಿ ಅವರು ಸಚಿವಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂಬ ಮಾಹಿತಿ ಅವರ ಆಪ್ತವಲಯದಿಂದಲೇ ಕೇಳಿ ಬಂದಿದೆ. ಹೀಗಾಗಿ ನಾಳೆ ಮಾಧುಸ್ವಾಮಿ ಅವರ ಗಣರಾಜ್ಯೋತ್ಸವ ಭಾಷಣ ತೀವ್ರ ಕುತೂಹಲ ಕೆರಳಿಸಿದೆ.
ಜೆ.ಸಿ.ಮಾಧುಸ್ವಾಮಿ 'ಬಾಯಿಚಪಲವೇ' ಪ್ರಮುಖ ಹುದ್ದೆ ಕೈತಪ್ಪಲು ಕಾರಣ?
ಜೊತೆಗೆ ತಮ್ಮ ಖಾತೆಗಳನ್ನು ಆಗಾಗ ಬದಲಾವಣೆ ಮಾಡುತ್ತಿರುವುದು ಸಚಿವ ಆನಂದ್ ಸಿಂಗ್ ಅವರಲ್ಲಿಯೂ ಬೇಸರವನ್ನುಂಟು ಮಾಡಿದೆ. ಅವರು ಕೂಡ ನಾಳೆ ಗಣರಾಜ್ಯೋತ್ಸವ ಭಾಷಣದ ಬಳಿಕ ಬೆಂಗಳೂರಿಗೆ ಬಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎನ್ನಲಾಗುತ್ತಿದೆ. ಈ ಇಬ್ಬರು ಸಚಿವರು ರಾಜೀನಾಮೆ ಕೊಟ್ಟಲ್ಲಿ ಯಡಿಯೂರಪ್ಪ ಅವರ ಸರ್ಕಾರಕ್ಕೇ ಗಂಡಾಂತರ ಕಾದಿದೆ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ.
Recommended Video
ಸಿಎಂ ಯಡಿಯೂರಪ್ಪ ದೂರವಾಣಿ ಕರೆ
ಇದೇ ಸಂದರ್ಭದಲ್ಲಿ ಅಸಮಾಧಾಗೊಂಡಿರುವ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಸಿಎಂ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾಧುಸ್ವಾಮಿ ಅವರು, ಇಲ್ಲ, ನಾನು ನಾಳೆ ರಾಜೀನಾಮೆ ಪತ್ರ ಕಳುಹಿಸುತ್ತೇನೆ, ದಯವಿಟ್ಟು ಅಂಗೀಕಾರ ಮಾಡಿ ಎಂದು ಸಿಎಂಗೆ ಹೇಳಿದ್ದಾರೆ ಎನ್ನಲಾಗಿದೆ.
ಜೊತೆಗೆ ಸಿಎಂ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಸಚಿವರು ಮತ್ತು ಬಿಜೆಪಿ ಶಾಸಕರಲ್ಲಿ ಬೇಸರ ವ್ಯಕ್ತವಾಗಿದೆ. ಸಿಎಂ ದಿನಕ್ಕೊಂದು ನಿರ್ಧಾರ ಮಾಡಿದರೆ ನಾವೇನು ಮಾಡುವುದು? ಯಾರನ್ನೋ ಸಮಾಧಾನಿಸಲು ಹೀಗೆಲ್ಲಾ ಮಾಡಿದರೆ ಹೇಗೆ? ಮೊನ್ನೆ ಎಲ್ಲವೂ ಸರಿ ಹೋಗಿತ್ತು, ಈಗ್ಯಾಕೆ ಹೀಗೆ ಮಾಡಿದರೋ? ಎಂದು ಸಚಿವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬ್ಲ್ಯಾಕ್ ಮೇಲ್ ಮಾಡುವವರಿಗೆಲ್ಲಾ ಖಾತೆ ಬದಲಾವಣೆ ಮಾಡುತ್ತಾರೆ. ಸಂಭಾವಿತರ ಖಾತೆಗಳನ್ನು ವಾಪಸ್ ಪಡೆಯುತ್ತಾರೆ, ಹೀಗಾದರೆ ನಾವೇನು ಮಾಡಬೇಕು ಎಂದು ಸಚಿವರು ಹಾಗೂ ಬಿಜೆಪಿ ಶಾಸಕರು ಮಾತನಾಡಿಕೊಳ್ಳುತ್ತಿದ್ದಾರಂತೆ.