ಕಡೂರು ದುರ್ಗಾಂಬಾ ದೇವಿಯ ಎರಡು ಆಭರಣ ನಾಪತ್ತೆ
33 ವರ್ಷಗಳ ಹಿಂದೆ ಖಜಾನೆಗೆ ಸೇರಿದ್ದ ದೇಗುಲದ ಉತ್ಸವ ಮೂರ್ತಿಗಳ ಆಭರಣ, ಇತ್ತೀಚೆಗೆ ಭಕ್ತಾದಿಗಳ ಆಗ್ರಹದ ಮೇಲೆಗೆ ಹೊರತೆಗೆದು ಲೆಕ್ಕಹಾಕಿದಾಗ ಆಭರಣ ನಾಪತ್ತೆ ಬಯಲಿಗೆ.
ಕಡೂರು, ಫೆಬ್ರವರಿ 9: ಕಡೂರಿನ ವಿಖ್ಯಾತ ದೇವರಾದ ಅಂತರ ಘಟ್ಟದ ದುರ್ಗಾಂಬ ದೇವಿ ಉತ್ಸವ ಮೂರ್ತಿಗಳಿಗೆ ತೊಡಿಸಲಾಗುತ್ತಿದ್ದ ಆಭರಣಗಳಲ್ಲಿ ಎರಡು ಆಭರಣ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ.
ಮೂರ್ತಿಗಳಿಗೆ ತೊಡಿಸಲಾಗುತ್ತಿದ್ದ ಮುಖಪದ್ಮಗಳಲ್ಲಿ ಒಂದು ಮುಖಪದ್ಮ ಹಾಗೂ ಬೆಳ್ಳಿಯ ಹೂವಿನ ಎರಡು ಕೊಂಡಿಗಳು ನಾಪತ್ತೆಯಾಗಿವೆ ಎಂದು ಹೇಳಲಾಗಿದೆ.
ಈ ದೇಗುಲ ಮುಜರಾಯಿ ಇಲಾಖೆಗೆ ಸೇರಲ್ಪಟ್ಟಿದೆ. ಮತ್ತೊಂದು ಅಚ್ಚರಿಯ ಹಾಗೂ ಕುತೂಹಲಕರ ವಿಚಾರವೇನೆಂದರೆ, ಉತ್ಸವ ಮೂರ್ತಿಯ ಆಭರಣಗಳನ್ನು ಕಳೆದ 30 ವರ್ಷಗಳಿಂದ ಹೊರತಗೆದಿರಲಿಲ್ಲ. ಹಾಗಾಗಿ, ಅವರು ಖಜಾನೆಯಲ್ಲೇ ಇದ್ದವು.
ಆದರೆ, ಇತ್ತೀಚೆಗೆ ಕೆಲ ಭಕ್ತಾದಿಗಳು ಆಭರಣಗಳನ್ನು ಉತ್ಸವ ಮೂರ್ತಿಗಳಿಗೆ ತೊಡಿಸಬೇಕೆಂಬ ಮನವಿ ಮಾಡಿದ್ದರಿಂದಾಗಿ ತಹಶೀಲ್ದಾರ್ ಎಂ.ಭಾಗ್ಯ ಅವರು, ಖಜಾನೆಯಲ್ಲಿದ್ದ ಆಭರಣಗಳನ್ನು ಹೊರತಗೆದಾಗ ಎರಡು ಆಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
1988ರಲ್ಲಿ ಅಂದಿನ ಕಡೂರು ತಾಲೂಕಿನ ತಹಶೀಲ್ದಾರ್ ಹಾಗೂ ಆಗ ದುರ್ಗಾಂಬಾ ದೇವಸ್ಥಾನದ ಕನ್ವೀನರ್ ಇಬ್ಬರೂ ಆಭರಣಗಳ ಪಟ್ಟಿಯನ್ನು ಖಜಾನೆಗೆ ಸೇರಿಸುವ ಮುನ್ನ ಆಭರಣಗಳ ಪಟ್ಟಿ ಮಾಡಿ ಸಹಿ ಮಾಡಿದ್ದಾರೆ. ಆದರೆ, ಈಗ ಅವುಗಳನ್ನು ಹೊರ ತಗೆದು ಪಟ್ಟಿಯ ಆಧಾರದಲ್ಲಿ ಆಭರಣಗಳನ್ನು ಲೆಕ್ಕ ಹಾಕುವಾಗ ಕೆಲ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.